ಶಿಗ್ಗಾವಿ: ಪುರಸಭೆಗೆ ಕಳೆದ ವರ್ಷದಲ್ಲಿ ಮಂಜೂರಾದ ಅನುದಾನವನ್ನು ಸರಿಯಾಗಿ ಆಯಾ ಯೋಜನೆಗಳಿಗೆ ಹಂಚಿಕೆ ಮಾಡದೆ ಅದರಲ್ಲಿ ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಪೂರ್ಣ ತನಿಖೆ ನಡೆಯಬೇಕು ಎಂದು ಪುರಸಭೆ ಸದಸ್ಯರಾದ ಗುಡಪ್ಪ ಮತ್ತೂರ ಹಾಗೂ ಸೋಮಶೇಖರ ಗೌರಿಮಠ ಸೇರಿದಂತೆ ಕೆಲವು ಸದಸ್ಯರು ಒತ್ತಾಯಿಸಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಎಸ್ಎಫ್ಸಿ ಯೋಜನೆಯಡಿ ಮಂಜೂರಾದ ಸುಮಾರು 20ಲಕ್ಷ ರೂ.ಗಳ ಅನುದಾನದಲ್ಲಿ ಪಟ್ಟಣದ ಕೊಟ್ಟಿಗೇರಿ ಸ್ಮಶಾನದ ಅಭಿವೃದ್ಧಿಗೆ ಐದು ಲಕ್ಷ ರೂ.ಗಳು, ಮುಸ್ಲಿಂ ಸಮುದಾಯದ ಸ್ಮಶಾನದ ಅಭಿವೃದ್ಧಿಗೆ ಐದು ಲಕ್ಷ ರೂ.ಗಳು ಹಾಗೂ ಹಿಂದು ಸಮುದಾಯದ ಸ್ಮಶ್ಯಾನದ ಅಭಿವೃದ್ಧಿಗೆ ಸುಮಾರು ಹತ್ತು ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಅನುದಾನದಲ್ಲಿ ಅವ್ಯವಹಾರ ನಡೆದಿರುವು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಈ ಸದಸ್ಯರು ಆರೋಪಿಸಿದರು.
ಅದರಲ್ಲಿ ಕೊಟ್ಟಿಗೇರಿ ಸ್ಮಶಾನ ಹಾಗೂ ಮುಸ್ಲಿಂ ಸ್ಮಶಾನದ ಅಭಿವೃದ್ಧಿಯಾಗಿವೆ ಆದರೆ ಹಿಂದು ಸಮುದಾಯದ ಸ್ಮಶ್ಯಾನದ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಹಿಂದು ಸಮುದಾಯದ ಸ್ಮಶಾನಕ್ಕಾಗಿ ಬಿಡುಗಡೆ ಮಾಡಿ ರುವ ಅನುದಾನ ಎಲ್ಲಿ ಮಾಯವಾಗಿದೆ. ಸತ್ಯಾಂಶ ಹೊರ ಬರುವರೆಗೆ ಸಭೆ ಮುಂದಕ್ಕೆ ಸಾಗಿಸುವದು ಬೇಡ ಎಂದು ಹಠಹಿಡಿಯುವ ಮೂಲಕ ಕೆಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಅಧ್ಯಕ್ಷ ಎ.ಸಿ. ಜಮಾದಾರ ಹಾಗೂ ಮಾಜಿ ಮುಖ್ಯಾಧಿಕಾರಿ ಬಾಬಾಸಾಬ ಸಿಡೇನೂರ ಉದ್ದೇಶ ಪೂರ್ವಕವಾಗಿ ಠರಾವು ತಿದ್ದುವ ಜೊತೆಗೆ ಈ ಅನುದಾನವನ್ನು ಬೆರೆ ಕಾಮಗಾರಿಗೆ ಬಳಸುವದಾಗಿ ಸುಮಾರು ಹತ್ತು ಲಕ್ಷ ರೂಗಳ ಅನುದಾನದಲ್ಲಿ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಯಾವುದೇ ಸದಸ್ಯರ ಗಮಕ್ಕೆ ತರಲಾರದೆ ಬದಲಾವಣೆಯಾದ ಕಾಮಗಾರಿ ಗಳ ಕುರಿತು ಚರ್ಚಿದೆ ಅವ್ಯವಹಾರ ನಡೆಸಿದ್ದಾರೆ. ಅನುದಾನದಲ್ಲಿ ಖರ್ಚಾದ ವಿವರವನ್ನು ಸಭೆಯಲ್ಲಿ ಯಾರ ಗಮನಕ್ಕೂ ತಂದಿಲ್ಲ. ಆದ್ದರಿಂದ ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ ಅವ್ಯವಹಾರ ನಡೆದಿರುವುದು ದಟ್ಟವಾಗಿ ಕಾಣುತ್ತದೆ ಎಂದು ಸದಸ್ಯ ಸೋಮಶೇಖರ ಗೌರಿಮಠ ಕೆಲ ಸದಸ್ಯರು ಮಾಜಿ ಅಧ್ಯಕ್ಷ ಜಮಾದಾರ ಮೇಲೆ ನೇರವಾಗಿ ಆರೋಪಿಸಿದರು.
2011ರ ಅಗಸ್ಟ್ 1ರಂದು ಪುರಸಭೆ ಯಾವುದೇ ಸಭೆ ಕೆರೆಯದೆ ಮಾಜಿ ಅಧ್ಯಕ್ಷ ಎ.ಸಿ. ಜಮಾದಾರ ಹಾಗೂ ಮಾಜಿ ಮುಖ್ಯಾಧಿಕಾರಿ ಬಾಬಾಸಾಬ ಸಿಡೇನೂರ ಸಭೆ ನಡೆದಿದೆ ಎಂದು ಸುಳ್ಳು ಠರಾವು ಸೃಷ್ಟಿಸಿ ಆಶ್ರಯ ಮನೆ ಹಂಚಿಕೆಯಲ್ಲಿ ಅಕ್ರಮ ಎಸಗಿ ್ದದಾರೆ ಎಂದು ಆರೋಪಿಸಿದರು.
ಅದಕ್ಕೆ ಹಾಲಿ ಅಧ್ಯಕ್ಷ ರಾಮಣ್ಣ ರಾಣೋಜಿ ಹಾಗೂ ಸದಸ್ಯ ಮಲ್ಲೇಶಪ್ಪ ಬಡ್ಡಿ ಅವರಿಗೆ ತಿಳಿಯದಂತೆ ಅಮೋದಕರ ಹಾಗೂ ಸೂಚಕರೆಂದು ಸಹಿ ಮಾಡಿಸಲಾಗಿದೆ. ಅದರಲ್ಲಿಯೂ ಸಹ ಅವ್ಯವಹಾರ ನಡೆದಿರುವದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸದಸ್ಯರು ದೂರಿದರು.
ಆದರೆ ಈ ಕುರಿತು ಮಾಜಿ ಅಧ್ಯಕ್ಷ ಜಮಾದಾರ ಮಾತ್ರ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ. ಹೀಗಾಗಿ ಸಭೆ ನಡಾವಳಿಯ ಪ್ರಕಾರ ಬೆರೆ ವಿಷಯಗಳು ಚರ್ಚಿಸಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ಯಾವುದೇ ಸರಿಯಾದ ಸಭೆ ಕರೆಯಲಿಲ್ಲ. ಸಭೆ, ಸಮಾರಂಭಗಳಲ್ಲಿ ಮಾನ್ಯತೆ ಕೊಡಲಿಲ್ಲ, ನಿಮ್ಮ ಅಧಿಕಾರ ಅವಧಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದಿರೋ ಆ ದೇವರೆ ಬಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕಲಂದರ ಬಟ್ಟಿಪುರಿ ಮಾಜಿ ಅಧ್ಯಕ್ಷರ ಮೇಲೆ ಹರಿಹಾಯ್ದರು.
ಸಭೆಗೆ ನುಗ್ಗಿದ ಸಾರ್ವಜನಿಕರು: ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನತೆ ಪರದಾಡುತ್ತಿದ್ದಾರೆ ತಕ್ಷಣ ಎರಡು-ಮೂರು ದಿನಕ್ಕಾದರೂ ಒಮ್ಮೆ ನೀರು ಬಿಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಅಳಲನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಭೆ ನಡೆಯುತ್ತಿದ್ದ ಸ್ಥಳದಲ್ಲಿ ಮಾತಿನ ಚಕಮಕಿ ನಡೆಯಿತು.
ಅಧ್ಯಕ್ಷ ರಾಮಣ್ಣ ರಾಣೋಜಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಲಿತಾ ಹಂಜಿಗಿ, ಮುಖ್ಯಾಧಿಕಾರಿ ಜಗದೀಶ ಹುಲಗೆಜ್ಜಿ ಹಾಗೂ ಸರ್ವ ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.