ನವದೆಹಲಿ: ‘ಮುಖ್ಯಮಂತ್ರಿ ಸಿದ್ದ ರಾಮಯ್ಯ ನನಗೆ ತೋಟಗಾರಿಕೆ ಇಲಾಖೆ ನೀಡಿರುವುದರಿಂದ ಅಸಮಾ ಧಾನವಾಗಿಲ್ಲ’ ಎಂದು ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಅಡಿಕೆ ಮತ್ತು ದ್ರಾಕ್ಷಿ ಬೆಳೆಗಾರರ ಸಮಸ್ಯೆ ವಿವರಿಸಲು ಬುಧವಾರ ದೆಹಲಿಗೆ ಬಂದಿರುವ ಶಿವ ಶಂಕರಪ್ಪ ‘ಪ್ರಜಾವಾಣಿ’ ಜತೆ ಮಾತನಾಡಿದರು.
‘ಈ ಖಾತೆಯಲ್ಲಿ ನನಗೆ ಪೂರ್ಣ ತೃಪ್ತಿ ಇದೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಉದ್ದೇಶವಿಲ್ಲ. ಅಧಿಕೃತ ಕೆಲಸದ ಮೇಲೆ ಬಂದಿದ್ದೇನೆ’ ಎಂದರು.
ಸಿರಿಗೆರೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ, ‘ನನಗೆ ಕೆಲಸಕ್ಕೆ ಬಾರದ ಇಲಾಖೆ ಕೊಡಲಾಗಿದೆ ಎಂದು ಹೇಳಿದ್ದು, ಸಮಾರಂಭದಲ್ಲಿದ್ದ ಸಿರಿಗೆರೆ ಶ್ರೀಗಳ ಪ್ರತಿಕ್ರಿಯೆ ಏನಿರಬಹುದೆಂದು ತಿಳಿಯಲಷ್ಟೇ’ ಎಂದರು.
‘ರಾಜ್ಯದ ಅಡಿಕೆ ಮತ್ತು ದ್ರಾಕ್ಷಿ ಬೆಳೆಗಾರರ ಸಮಸ್ಯೆಯನ್ನು ಗುರುವಾರ ಕೃಷಿ ಸಚಿವ ಶರದ್ ಪವಾರ್ ಅವರಿಗೆ ವಿವರಿಸುತ್ತೇನೆ. ಬಳಿಕ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಕಂಡು ವೀರಶೈವ ಜಾತಿಗೆ ಧರ್ಮದ ಸ್ಥಾನಮಾನ ನೀಡುವಂತೆ ಮನವಿ ಮಾಡುತ್ತೇನೆ’ ಎಂದು ಸಚಿವರು ಸ್ಪಷ್ಟಪಡಿಸಿದರು.