ರಾಯಬಾಗ: ತಾಲ್ಲೂಕಿನ ಯಬರಟ್ಟಿ ಗ್ರಾಮದಲ್ಲಿ ಡಿ.7 ಶುಕ್ರವಾರದಂದು ಗ್ರಾಮದ ಅಕ್ಕಮಹಾದೇವಿ ಉರ್ಫ ಬಸವರಾಜ ಕಸರಡ್ಡಿ (32) ಎಂಬ ಮಹಿಳೆ ಅನಾರೋಗ್ಯ ದಿಂದ ಮೃತಳಾ ಗಿದ್ದಾಳೆಂದು ಗಂಡನ ಮನೆಯವರು ಅವಳನ್ನು ಹೂತು ಸಮಾಧಿ ಮಾಡಿದ್ದರು.
ಆದರೆ ಇದೊಂದು ಸಂಶಯಾಸ್ಪದ ಸಾವು ಎಂದು ತವರು ಮನೆಯವರು ಕುಡಚಿ ಪೊಲೀಸರಿಗೆ ದೂರು ನೀಡಿ ಹೂತಿದ್ದ ಶವ ಹೊರತೆಗೆದು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಶವ ಪರಿಕ್ಷೆ ಮಾಡುವಂತೆ ಮೃತಳ ಅಣ್ಣ ಶಿವ ಪುತ್ರಪ್ಪ ರಾಮಪ್ಪ ಹೊಂಬಾಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ದೂರಿನ ಮೇರಿಗೆ ಸೋಮವಾರ ಯಬರಟ್ಟಿ ಗ್ರಾಮದಲ್ಲಿ ಹೂತಿದ್ದ ಮೃತಳ ಶವವನ್ನು ಚಿಕ್ಕೋಡಿ ಉಪವಿಭಾಗಾಧಿಕಾರಿ ಡಾ. ರುದ್ರೇಶ ಗಾಳಿ ನೇತೃತ್ವದಲ್ಲಿ ಸಮಾಧಿಯನ್ನು ಅಗೆದು ಮತ್ತೆ ಶವವನ್ನು ಹೊರತೆಗೆದು ಶವ ಪರೀಕ್ಷೆ ಮಾಡಲಾಯಿತು. ಶವ ಪರೀಕ್ಷೆಯ ವರದಿಯನ್ನು ಬೆಳಗಾವಿ ಹಾಗೂ ಬೆಂಗಳೂರಿಗೆ ಹೆಚ್ಚಿನ ಪರೀಕ್ಷೆಗಾಗಿ ಕಳಿಸಲಾಗಿದೆ.
ಹಿನ್ನೆಲೆ: ಮೃತ ಅಕ್ಕಮಹಾದೇವಿ ಉರ್ಫ ನಿರ್ಮಲಾ ಬಸವರಾಜ ಕಸರಡ್ಡಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಬೋಪಳಾಪುರದವಳು. ಇವಳನ್ನು 2003ರಲ್ಲಿ ತಾಲ್ಲೂಕಿನ ಯಬ ರಟ್ಟಿಯ ಬಸವರಾಜ ಶರಣಪ್ಪ ಕಸರಡ್ಡಿ ಎಂಬುವರಿಗೆ ಮದುವೆ ಮಾಡಿಕೊಡಲಾಗಿತ್ತು. 10 ವರ್ಷಗಳಾದರೂ ಮಕ್ಕಳಾಗಲಿಲ್ಲ ಎಂದು ಗಂಡನ ಮನೆಯವರು ಸದಾ ಕಿರುಕಳ ಕೊಡುತ್ತಿದ್ದರು.
ಅದರಲ್ಲೂ ಮೃತಳ ಮೈದುನನ ಕಿರುಕಳ ಹೆಚ್ಚಾಗಿತ್ತು.ಈ ಮನೆಯಲ್ಲಿ ನಾನು ಇರಬೇಕು ಇಲ್ಲಾ ನೀನು ಇರಬೇಕು ಎಂದು ಕಿರುಕಳ ಕೊಡುತ್ತಿದ್ದನು ಎಂದು ಮೃತಳ ಅಣ್ಣ ಶಿವಪುತ್ರಪ್ಪ ಹೊಂಬಳ ಅಪಾದಿಸಿದ್ದಾರೆ. ಮಕ್ಕಳಾಗಿಲ್ಲ ಎಂದು ಸದಾ ಗಂಡನ ಮನೆಯವರ ಕಿರುಕಳ ಇದ್ದೇ ಇತ್ತು. ಕಳೆದ ದೀಪಾವಳಿಗೆ ತವರು ಮನೆಗೆ ಬಂದಿದ್ದ ತಮ್ಮ ತಂಗಿಯನ್ನು ತಾವೇ ನವಂಬರ್ 22ರಂದು ಯಬರಟ್ಟಿಗೆ ಬಂದು ಕಳಿಸಿಹೋಗಿರುವುದಾಗಿ ತಿಳಿ ಸಿದ್ದಾರೆ.
ಅವಳು ಆರೋಗ್ಯದಿಂದಲೇ ಇದ್ದು, ಈ ರೀತಿ ಏಕಾಏಕಿ ಸಾವಿ ಗೀಡಾಗಲು ಸಾಧ್ಯವೇ ಇಲ್ಲ ಎಂದು ಈ ಬಗ್ಗೆ ಮೃತಳ ಅಣ್ಣ ಶಿವಪುತ್ರಪ್ಪ ಹೊಂಬಾಳಿ ಕುಡಚಿ ಪೊಲೀಸರಿಗೆ ದೂರು ಸಲ್ಲಿಸಿ ನನ್ನ ತಂಗಿಯ ಸಾವು ಸಂಶಯಾಸ್ಪದ ಸಾವು ಎಂದು ತಿಳಿಸಿದ್ದಾರೆ.
`ನನಗೆ ದಿ.7 ರಂದು ಚಿಕ್ಕಪ್ಪ ಶ್ರೀಶೈಲ ಹೊಂಬಳ ಇವರು ದೂರವಾಣಿ ಮೂಲಕ ಅಕ್ಕಮಹಾದೇವಿ ತೀರಿಕೊಂಡ ಸುದ್ದಿ ತಿಳಿಸಿದಾಗ ನಾನು ಬೆಂಗಳೂರಿನಿಂದ ಬರುವವರೆಗೆ ಅಂತ್ಯ ಸಂಸ್ಕಾರ ಮಾಡಬೇಡಿರಿ ಎಂದು ಹೇಳಿದ್ದರೂ ಸಹ ಬರುವಷ್ಟರಲ್ಲಿ ಅಂತ್ಯ ಸಂಸ್ಕಾರ ಮುಗಿಸಿದ್ದರು'.
`ನಮ್ಮವರಿಗೆ ಯಾರಿಗೂ ಸಹ ಶವ ತೋರಿಸುವ ಸೌಜನ್ಯ ಮಾಡಲಿಲ್ಲ. ಊರಿನ ಹಿರಿಯರು ಹೇಳುವ ಪ್ರಕಾರ ಇದು ಸಹಜ ಸಾವಲ್ಲ ಸಂಶಯಾಸ್ಪದ ಸಾವು ಎಂದು ಹೇಳಿದ್ದರ ಮೇರೆಗೆ ತಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿ ಸತ್ಯಾಂಶ ತಿಳಿಯಲು ಶವ ಪರೀಕ್ಷೆಗೆ ಒತ್ತಾಯಿಸಲಾಯಿತು' ಎಂದು ಅವರು ವಿವರಿಸಿದ್ದಾರೆ.
ಇದು ವಿಷಪ್ರಾಸನದಿಂದ ಆಗಿದೆ ಎಂದು ತಮ್ಮ ಸಂಶಯ ವ್ಯಕ್ತಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಸೋಮವಾರ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಶವವನ್ನು ಹೊರತೆಗೆದು ಪರೀಕ್ಷೆ ಮಾಡಿ ಸಲಾಯಿತು.
ಕುಡಚಿ ಪಿ.ಎಸ್.ಐ. ಹಾಗೂ ಗ್ರಾಮಸ್ಥರು ಹಾಜರಿದ್ದರು.
ಮೃತಳ ಅಣ್ಣ ಶಿವಪುತ್ರಪ್ಪ ಹೊಂಬಳ, ಚಿಕ್ಕಪ್ಪ ಶ್ರೀಶೈಲಪ್ಪ ಹೊಂಬಳ, ಅಣ್ಣಂದಿರಾದ ಗುರುಸಿದ್ದಪ್ಪ ಹೊಂಬಳ, ಮಲ್ಲಿಕಾರ್ಜುನ ಹೊಂಬಳ ಸಹ ಹಾಜರಿದ್ದರು. ಸದರಿ ಪ್ರಕರಣ ವಿಚಿತ್ರ ತಿರುವು ಪಡೆದುಕೊಂಡಿದೆ. ಈವರೆಗೂ ಕುಡಚಿ ಪೊಲೀಸರು ಯಾರನ್ನು ಬಂಧಿಸಿಲ್ಲ. ಶವ ಪರೀಕ್ಷೆ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.