ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ): ಆಗುಂಬೆಯ ಮಲ್ಲಂದೂರು ಸಮೀಪದ ಬರ್ಕಣ ದುರ್ಗಮ ಕಾಡಿನಲ್ಲಿ ಶುಕ್ರವಾರ ಮಧ್ಯಾಹ್ನ 3ಗಂಟೆ ಸುಮಾರಿಗೆ ನಕ್ಸಲ್ ನಿಗ್ರಹ ಪಡೆ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಪೊಲೀಸ್ ಮಾಹಿತಿದಾರ ಎಂಬ ಶಂಕೆಯ ಹಿನ್ನೆಲೆಯಲ್ಲಿ ಸದಾಶಿವಗೌಡ ಎಂಬುವವರನ್ನು ನಕ್ಸಲರು ಈಚೆಗೆ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ತೀವ್ರ ಕಾರ್ಯಾಚರಣೆಗೆ ಮುಂದಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸದಾಶಿವಗೌಡ ಹತ್ಯೆ ಬಳಿಕ ನಕ್ಸಲರು ಆಗುಂಬೆಯ ಬರ್ಕಣ ಮಾರ್ಗವಾಗಿ ಚಿಕ್ಕಮಗಳೂರು ಪ್ರವೇಶಿಸುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ನಕ್ಸಲರು ಸುಮಾರು 6 ಜನ ಇದ್ದರು ಎಂದು ಶಂಕಿಸಲಾಗಿದೆ.
ನಕ್ಸಲರಿಂದ ಗುಂಡಿನ ದಾಳಿ ಆರಂಭವಾಗುತ್ತಿದ್ದಂತೆ ನಕ್ಸಲ್ ನಿಗ್ರಹ ಪಡೆ ಮೂವತ್ತು ಸುತ್ತು ಪ್ರತಿದಾಳಿ ನಡೆಸಿತು. ಗುಂಡಿನ ಚಕಮಕಿಯಲ್ಲಿ ಯಾವುದೇ ಪ್ರಾಣ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.