ಕೋಲ್ಕತ್ತ: ಮುಂಬರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯಗಳ ವೇಳೆ ಆಟಗಾರರು ಯಾವುದೆ ಉಡುಗೊರೆ ಪಡೆಯುವಂತಿಲ್ಲ ಎಂದು ಬಿಸಿಸಿಐ ಸೂಚಿಸಿದೆ.
ಅದೇ ರೀತಿ ಪ್ರತಿ ತಂಡಗಳು ಭದ್ರತಾ ಅಧಿಕಾರಿಯ ಜೊತೆ ಭ್ರಷ್ಟಾಚಾರ ತಡೆ ಅಧಿಕಾರಿಯನ್ನು ನೇಮಿಸುವಂತೆಯೂ ತಿಳಿಸಿದೆ. ಮಂಡಳಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಪಂದ್ಯಗಳ ವೇಳೆ ಆಟಗಾರರು ಕುಳಿತುಕೊಳ್ಳುವ `ಡಗ್ಔಟ್' ಸಮೀಪ ಹಾಗೂ ಪಂದ್ಯದ ಅಧಿಕಾರಿಗಳು ಕುಳಿತುಕೊಳ್ಳುವ ತಾಣದ ಸಮೀಪ ಇತರರ ಓಡಾಟದ ಮೇಲೆ ನಿಬರ್ಂಧ ಹೇರಲು ನಿರ್ಧರಿಸಲಾಗಿದೆ. ಐಪಿಎಲ್ ಟೂರ್ನಿಯ ವೇಳೆ `ಸ್ಪಾಟ್ ಫಿಕ್ಸಿಂಗ್' ವಿವಾದ ನಡೆದ ಹಿನ್ನೆಲೆಯಲ್ಲಿ ಮಂಡಳಿ ಇಂತಹ ತೀರ್ಮಾನ ಕೈಗೊಂಡಿದೆ.
ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರ ಸಲಹೆಯ ಮೇರೆಗೆ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಸಂಜಯ್ ಪಟೇಲ್ ತಿಳಿಸಿದ್ದಾರೆ.