ಭರಮಸಾಗರ: ಗ್ರಾಮೀಣ ಭಾಗದಲ್ಲಿನ ಆಡಂಬರರಹಿತ ಸರಳ ಬದುಕು ವಿದ್ಯಾರ್ಥಿಗಳಿಗೆ ಅನುಕರಣೀಯ ಆಗಬೇಕು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಕೋಡಿರಂಗವ್ವನಹಳ್ಳಿಯಲ್ಲಿ ಈಚೆಗೆ ಸಿರಿಗೆರೆ ಎಂಬಿಆರ್ ಕಾಲೇಜಿನ ಎನ್ಎಸ್ಎಸ್ ಘಟಕ ಆಯೋಜಿಸಿದ್ದ ವಾರ್ಷಿಕ ಶಿಬಿರ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಹಳ್ಳಿ ಜನರಲ್ಲಿ ನೈರ್ಮಲ್ಯದ ಅರಿವು ಮೂಡಿಸಲು ಶಿಬಿರಾರ್ಥಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು. ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಅರ್ಥಹೀನ ಹರಟೆ, ದುರಭ್ಯಾಸಗಳಲ್ಲಿ ಮುಳುಗದೇ ಜೀವನದ ಮೌಲ್ಯ ಹೆಚ್ಚಿಸುವ ಸದಭಿರುಚಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರೊ.ಎಚ್.ಎಸ್. ಮಹೇಶ್ವರಪ್ಪ ಮಾತನಾಡಿ, ಗ್ರಾಮೀಣ ಜನಜೀವನ, ಜಾನಪದಕಲೆ, ಸಾಹಿತ್ಯ, ಸಂಸ್ಕೃತಿ ಅರ್ಥೈಸಿಕೊಳ್ಳಲು ಎನ್ಎಸ್ಎಸ್ ಶಿಬಿರ ಸಹಕಾರಿಯಾಗಿದೆ ಎಂದರು. ಪ್ರೊ.ಆರ್.ಬಿ. ಹನುಮಂತಪ್ಪ, ಪ್ರಾಂಶುಪಾಲ ಡಾ.ನಾ. ಲೋಕೇಶ್ಒಡೆಯರ್, ಗ್ರಾ.ಪಂ. ಉಪಾಧ್ಯಕ್ಷೆ ಖುರ್ಷಿದ್ ಉನ್ನೀಸಾ, ಮಂಜುಳಾ, ಜಯಶೀಲಾ, ಪುಷ್ಪಾರಾಜು ಉಪಸ್ಥಿತರಿದ್ದರು.