ಗದಗ: ಕಂದಾಯ ಇಲಾಖೆಯಿಂದ ಪರಿಶಿಷ್ಟ ಜಾತಿ, ಪಂಗಡಗಳಿಗೆ ನೀಡಲಾಗುತ್ತಿರುವ ಜಾತಿ ಪ್ರಮಾಣ ಪತ್ರಗಳು ರದ್ದುಗೊಳಿಸುವವರೆಗೂ ಜಾರಿಯಲ್ಲಿರುತ್ತವೆ ಮತ್ತು ಹಿಂದುಳಿದ ವರ್ಗಗಳಿಗೆ ನೀಡುವ ಆದಾಯ ಪ್ರಮಾಣ ಪತ್ರಗಳು 5 ವರ್ಷಗಳ ಅವಧಿ ವರೆಗೆ ಸಿಂಧುತ್ವದಲ್ಲಿರುತ್ತವೆ.
ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪಡೆಯುವ ಇಲಾಖೆಯವರು ಮೂಲ ಪ್ರಮಾಣ ಪತ್ರವನ್ನು ಪರಿಶೀಲಿಸಿ ದೃಢೀಕರಿಸಿದ ಪ್ರತಿಯನ್ನು ಇಲಾಖೆಗಳ ಮಾಹಿತಿಗೆ ಇಟ್ಟುಕೊಂಡು ಮೂಲ ಪ್ರಮಾಣ ಪತ್ರವನ್ನು ಹಿಂದಿರುಗಿಸಲು ಪ್ರಕಟಿಸಲಾಗಿದೆ. ಈ ಪ್ರಕಟಣೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುತ್ತೋಲೆ ಸಂಖ್ಯೆ: ಕಂಇ:208:ಬಾದಾಅ:2013 ಡಿಸೆಂಬರ್ 17 ರ ಅನ್ವಯ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರ ಸಹಾಯವಾಣಿ ಆರಂಭ
ಗದಗ: ಮಹಿಳೆಯರ ಸಂರಕ್ಷಣೆ ಕಾಯಿದೆಯ ಅನುಷ್ಠಾನ ಪರಿಣಾಮಕಾರಿ ಆಗಬೇಕು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಟಿ.ಎಚ್.ಆವಿನ ಹೇಳಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ತರಬೇತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಹಿಳೆಯರ ಸಂರಕ್ಷಣೆ ಕಾಯ್ದೆಯ ಕಾರ್ಯಾಗಾರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.