ಮಂಗಳೂರು: ಮರುಬಳಕೆ ತಡೆಯಲು ಸೂಜಿಯನ್ನು ತುಂಡರಿಸುವ ಯಂತ್ರ, ವೈದ್ಯಕೀಯ ತ್ಯಾಜ್ಯಗಳ ಪರಿಸರ ಸ್ನೇಹಿ ವಿಲೇವಾರಿಗೆ ನೆರವಾಗುವ ಜೈವಿಕ ಕೈಚೀಲ, ರೋಗಿಯ ಅನುಕೂಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ವಿದ್ಯುಚ್ಚಾಲಿತ ಹಾಸಿಗೆ, ಸೂಕ್ಷ್ಮಾಣುಗಳನ್ನು ಕಂಪ್ಯೂಟರ್ ಪರದೆಮೇಲೆ ತಂತ್ರಜ್ಞರ ಅನೂಕೂಲಕ್ಕೆ ಬೇಕಾದಷ್ಟು ಹಿರಿದಾಗಿ ತೋರಿಸಬಲ್ಲ ಅತ್ಯಾಧುನಿಕ ಸೂಕ್ಷ್ಮ ದರ್ಶಕ....
ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಿದ ವೈದ್ಯಲೋಕದ ಅತ್ಯಾಧುನಿಕ ಪರಿಕರಗಳೆಲ್ಲವೂ ಸೋಮವಾರ ಇಲ್ಲಿನ ಟಿ.ಎಂ.ಎ ಪೈ ಅಂತರರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಮೇಳೈಸಿದ್ದವು.
ಎಸ್ಆರ್ಎಸ್ ಇಂಡಸ್ಟ್ರೀ ಗ್ಲೋಬಲ್ ಸೊಲ್ಯೂಷನ್ಸ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ವೈವಿಧ್ಯಮಯ ವೈದ್ಯಕೀಯ ಪರಿಕರಗಳ ಪ್ರದರ್ಶನ (ಹೆಲ್ತ್ಕೇರ್ ಎಕ್ವಿಪ್ಮೆಂಟ್ ಎಕ್ಸ್ಪೊ) ‘ಆರೋಗ್ಯ 2013’, ವೈದ್ಯಲೋಕದ ಇತ್ತೀಚಿನ ಬೆಳವಣಿಗೆಗಳನ್ನು ಮಂಗಳೂರಿನ ವೈದ್ಯರಿಗೆ, ಆಸ್ಪತ್ರೆಗಳಿಗೆ ಪರಿಚಯಿಸಿದೆ. ಈ ವಸ್ತು ಪ್ರದರ್ಶನದಲ್ಲಿ ಒಟ್ಟು 58 ಮಳಿಗೆಗಳಿದ್ದು, ಸ್ಟೆಥೋಸ್ಕೋಪ್ಗಳಿಂದ ಹಿಡಿದು ಥರ್ಮೋಮೀಟರ್ಗಳು, ಆಫ್ತಲ್ಮೋಸ್ಕೋಪ್... ಮೊದಲಾದ ವೈದ್ಯಕೀಯ ಪರಿಕರಗಳ ಆಧುನಿಕ ರೂಪಾಂತರಗಳೆಲ್ಲವೂ ಇಲ್ಲಿ ಲಭ್ಯ. ಈ ವಸ್ತು ಪ್ರದರ್ಶನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಸೋಮವಾರ ಚಾಲನೆ ನೀಡಿದರು.
ನವದೆಹಲಿಯ ಎಆರ್ವಿಎಸ್ ಎಕ್ವಿಪ್ಮೆಂಟ್ಸ್ ಕಂಪೆನಿ ಇಂಜಕ್ಷನ್ ನೀಡಲು ಬಳಸುವ ಸೂಜಿಯನ್ನು ತುಂಡರಿಸುವ ಯಂತ್ರವನ್ನು ಪ್ರದರ್ಶನಕ್ಕಿಟ್ಟಿದೆ.
‘ವಿಲೇವಾರಿ ಮಾಡಿದ ಸೂಜಿಯನ್ನು ಕದ್ದುಮುಚ್ಚಿ ಬಳಸುವುದನ್ನು ತಡೆಯುವ ಸಲುವಾಗಿ ಅದನ್ನು ತುಂಡರಿಸುವುದಕ್ಕೆ ಈ ಯಂತ್ರ ಸಹಕಾರಿ. ಇದರ ಬೆಲೆ 2,200ರಿಂದ ಆರಂಭವಾಗುತ್ತದೆ. ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಮಾನದಂಡಕ್ಕೆ ಅನುಗುಣವಾಗಿ ಈ ಯಂತ್ರವನ್ನು ನಿರ್ಮಿಸಲಾಗಿದೆ’ ಎನ್ನುತ್ತಾರೆ ಈ ಕಂಪೆನಿಯ ನಿರ್ದೇಶಕ ವಿಶ್ವೇಶ್ ಅಹ್ಲುವಾಲಿಯ.
ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಹ್ಯಾಲೋಜನ್ ವಿದ್ಯುದ್ದೀಪಗಳನ್ನು ಎಲ್ಇಡಿ ಬಲ್ಬ್ಗಳು ಆಕ್ರಮಿಸುತ್ತಿವೆ. ಹುಬ್ಬಳ್ಳಿಯ ಆಕ್ಸಿ ಮೆಡಿ ಸಿಸ್ಟಮ್ಸ್ ಕಂಪೆನಿಯು ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿದ ಶಸ್ತ್ರಚಿಕಿತ್ಸಾ ಪರಿಕರವನ್ನು ಪ್ರದರ್ಶನಕ್ಕಿಟ್ಟಿತ್ತು.
ಬೆಂಗಳೂರಿನ ಆರ್ವಿ ಸರ್ಜಿಕಲ್ಸ್ ಕಂಪೆನಿಯು ಸೊಳ್ಳೆಗಳನ್ನು ಆಕರ್ಷಿಸಿ ಕೊಲ್ಲುವ ಪುಟ್ಟ ಪರಿಕರವನ್ನು ಪ್ರದರ್ಶನದಲ್ಲಿಟ್ಟಿತ್ತು.
‘ಮಂಗಳೂರಿನಲ್ಲಿ ಮಲೇರಿಯ, ಡೆಂಗೆ ಹಾವಳಿ ಹೆಚ್ಚು ಇರುವ ಕಾರಣ ಇಲ್ಲೇ ಈ ಪರಿಕರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಈ ಯಂತ್ರವು ಬೆವರಿನ ವಾಸನೆಯನ್ನು ಹೊರಸೂಸುವ ಮೂಲಕ ಸೊಳ್ಳೆಗಳನ್ನು ಆಕರ್ಷಿಸುತ್ತದೆ. 1600 ಚ.ಮೀ ಪ್ರದೇಶದಿಂದ ಸೊಳ್ಳೆಗಳನ್ನು ಆಕರ್ಷಿಸುವ ಸಾಮರ್ಥ್ಯ ಈ ಪರಿಕರಕ್ಕಿದೆ. ಇದಕ್ಕಿಂತ ಸಣ್ಣಗಾತ್ರದ ಪರಿಕರವೂ ಲಭ್ಯ. ಸತ್ತ ಸೊಳ್ಳೆಗಳು ಯಂತ್ರದ ತಳಭಾಗದಲ್ಲಿ ಸಂಗ್ರಹವಾಗುತ್ತದೆ. ಅವುಗಳನ್ನು ವಿಲೇವಾರಿ ಮಾಡಬಹುದು. ಈ ಪರಿಕರದ ಬೆಲೆ ₨ 1700 ರೂಪಾಯಿಯಿಂದ ಆರಂಭವಾಗುತ್ತದೆ’ ಎನ್ನುತ್ತಾರೆ ಮೂಲತಃ ಬದಿಯಡ್ಕದವರಾದ ಕಂಪೆನಿಯ ಮಾಲೀಕ ಬಿ.ಚಂದ್ರಶೇಖರ್. ಬೆಂಗಳೂರಿನ ಬಾಪೂಜಿ ಸರ್ಜಿಕಲ್ಸ್ ಮತ್ತು ಅಮರಿಲಿಸ್ ಹೆಲ್ತ್ಕೇರ್ ಕಂಪೆನಿಯು ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ತೊಡಿಸುವ ವಸ್ತ್ರಗಳನ್ನು ಪ್ರದರ್ಶನಕ್ಕಿಟ್ಟಿತ್ತು. ಈ ವಸ್ತ್ರಗಳನ್ನು ಶಸ್ತ್ರಚಿಕಿತ್ಸೆ ಬಳಿಕ ವಿಲೇವಾರಿ ಮಾಡಬಹುದು.
‘ಜೈವಿಕವಾಗಿ ವಿಘಟನೆ ಹೊಂದುವ ಪದಾರ್ಥದಿಂದ ಸಿದ್ಧಪಡಿಸಿರುವ ಈ ವಸ್ತ್ರಗಳು ಪರಿಸರ ಸ್ನೇಹಿಯಾಗಿವೆ. ಬೆಲೆ ₨ 200ರಿಂದ ಆರಂಭವಾಗುತ್ತದೆ. ಶಸ್ತ್ರಚಿಕಿತ್ಸೆಯ ಮಾದರಿಗೆ ಅನುಗುಣವಾಗಿ ನಾವು ಈ ವಸ್ತ್ರಗಳನ್ನು ತಯಾರಿಸಿಕೊಡುತ್ತೇವೆ’ ಎನ್ನುತ್ತಾರೆ ಕಂಪೆನಿಯ ಮಾರುಕಟ್ಟೆ ವ್ಯವಸ್ಥಾಪಕ ಪ್ರವೀಣ್.
ಉಡುಪಿ ಮೂಲದ ರೋಬೋಸಾಫ್ಟ್ ಕಂಪೆನಿಯು ವೈದ್ಯರು ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಸುಲಭವಾಗಿ ನಿರ್ವಹಿಸುವುದಕ್ಕೆ ಅನುಕೂಲವಾದ ತಂತ್ರಾಂಶವನ್ನು ಪ್ರದರ್ಶನಕ್ಕಿಟ್ಟಿತ್ತು.
‘ರೋಗಿಗೆ ನೀಡುವ ಔಷಧಿಯ ಹೆಸರು ಬರೆದುಕೊಡುವುದರಿಂದ ಹಿಡಿದು, ಅವರ ವೈದ್ಯಕೀಯ ತಪಾಸಣೆಯ ಅಂಶಗಳನ್ನು ರಕ್ಷಿಸಿಡುವವರೆಗೆ ಎಲ್ಲ ರೀತಿಯಲ್ಲೂ ಈ ತಂತ್ರಾಂಶ ಪ್ರಯೋಜನಕಾರಿ’ ಎನ್ನುತ್ತಾರೆ ಕಂಪೆನಿಯ ಸೇಲ್ಸ್ ಆಂಡ್ ಸಪೋರ್ಟ್ ಎಂಜಿನಿಯರ್ ಶ್ರೀರಂಗ ಕಾಮತ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.