ಅರಕಲಗೂಡು: ಪಟ್ಟಣದ ಮಲ್ಲಿಪಟ್ಟಣ ರಸ್ತೆಯ ಸಂಪರ್ಕ ರಸ್ತೆಗೆ ಮೋರಿ ನಿರ್ಮಿಸುವ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಜನ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಕೋಟೆ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಿಂದ ಮಲ್ಲಿಪಟ್ಟಣ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೋರಿ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಕಾಮಗಾರಿ ಆರಂಭಿಸಿ ಹದಿನೈದು ದಿನಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ರಸ್ತೆಯನ್ನು ಅಗೆದು ಸಿಮೆಂಟ್ ಪೈಪ್ ಅಳವಡಿಸಲು ಆಳವಾದ ಹೊಂಡ ತೆಗೆದಿರುವುದರಿಂದ ಜನರು ವಾಹನಗಳು ಸಂಚರಿಸಲು ಸಾಧ್ಯವಾಗದೆ ಬಳಸಿಕೊಂಡು ಬರಬೇಕಾದ ಸ್ಥಿತಿ ಉಂಟಾಗಿದೆ. ವಸತಿ ಪ್ರದೇಶವಾದ ಈ ಬಡಾವಣೆಯಲ್ಲಿ ಪ್ರತಿನಿತ್ಯ ನೂರಾರು ಜನರು ತಮ್ಮ ಅಗತ್ಯಗಳಿಗಾಗಿ ಈ ರಸ್ತೆಯಲ್ಲಿ ಓಡಾಟ ನಡೆಸಬೇಕಾಗಿದೆ.
ಅಲ್ಲದೇ ಸೌದೆ, ತೆಂಗಿನಮೊಟ್ಟೆ, ಹಾಲು ಮುಂತಾದ ಜೀವನ ಅವಶ್ಯಕ ವಸ್ತು ಹೊತ್ತು ತರುವ ವಾಹನಗಳು ಶಾಲಾ ವಾಹನಗಳು ಸಂಚರಿಸಲು ಸಾಧ್ಯವಾಗದ ಕಾರಣ ಜನರು ಬವಣೆ ಪಡುವಂತಾಗಿದೆ.
ಇಲ್ಲಿ ರಸ್ತೆ ಅಗೆದಿರುವುದು ಗೊತ್ತಿಲ್ಲದೆ ಹಲವಷ್ಟು ಜನ ವೃದ್ದರು, ಮಕ್ಕಳು ರಾತ್ರಿ ವೇಳೆ ಬಂದು ಹೊಂಡದಲ್ಲಿ ಬಿದ್ದು ನೋವನ್ನು ಅನುಭವಿಸಿರುವ ಪ್ರಕರಣಗಳು ನಡೆದಿದೆ. ಈ ಪ್ರದೇಶದಲ್ಲಿ ಒಂದು ಅನುದಾನಿತ ಪ್ರೌಢಶಾಲೆ ಹಾಗೂ ಒಂದು ಖಾಸಗಿ ಪ್ರಾಥಮಿಕ ಶಾಲೆ ಇದ್ದು ನೂರಾರು ಮಕ್ಕಳು ಪ್ರತಿನಿತ್ಯ ಇದೆ ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ರಸ್ತೆ ಅಗೆತದ ಪರಿಣಾಮ ಅರ್ಧ ಕಿ.ಮೀ. ದೂರದ ಇನ್ನೊಂದು ರಸ್ತೆಯಲ್ಲಿ ಬಳಸಿ ಬರಬೇಕಾದ ಕಾರಣ ವೃದ್ದರು ಮತ್ತು ಮಕ್ಕಳು ತೀವ್ರ ಬವಣೆ ಪಡುವ ಸ್ಥಿತಿ ಉಂಟಾಗಿದೆ.
ಜನಸಂಪರ್ಕ ರಸ್ತೆಯ ಕಾಮಗಾರಿ ಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ತುರ್ತಾಗಿ ನಡೆಸಬೇಕು ಎಂಬ ಅರಿವಿಲ್ಲದೆ ಆಮೆಗತಿಯಲ್ಲಿ ನಡೆಸುತ್ತಿರುವ ಲೋಕೋಪಯೋಗಿ ಇಲಾಖೆ ಧೋರಣೆ ಬಗ್ಗೆ ಇಲ್ಲಿನ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೆ ಕಾಮಗಾರಿ ಪೂರ್ಣಗೊಳಿಸಿ ಜನರ ವಾಹನಗಳ ಸಂಚಾರಕ್ಕೆ ಅನುವು ಮಾಡದಿದ್ದಲ್ಲಿ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ಪ್ರಥಮ ಸ್ಥಾನ
ಪ್ರಥಮ ದರ್ಜೆ ಕಾಲೇಜಿನ ಬಾಲಕಿಯರ ವಾಲೀಬಾಲ್ ತಂಡವು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದೆ.
ಎಂ.ಬಿ. ಪ್ರೀತಿ, ಎಂ.ಡಿ. ದಿವ್ಯಾ, ಕೆ.ಸಿ ಸಹನಾ, ಬಿ.ಸಿ. ರಜನಿ, ಬಿ.ಚೈತ್ರ, ಎಸ್. ವಿ. ಅಶ್ವಿನಿ, ಎಂ.ಕೆ. ಭವಾನಿ, ಎಂ. ರಾಶಿ ತಂಡದ ಆಟಗಾರ್ತಿಯರಾಗಿದ್ದಾರೆ.
ಇದೆ ಕಾಲೇಜಿನ ಎಲ್.ಆರ್. ಕರೀಗೌಡ ಅಥ್ಲೆಟಿಕ್ ಸ್ಪರ್ಧೆಯ 400 ಹಾಗೂ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಪ್ರಾಂಶುಪಾಲ ಕೇಶವಯ್ಯ ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.