ಗಾಜಿಯಾಬಾದ್ (ಪಿಟಿಐ): ಆರುಷಿ ಕೊಲೆ ಪ್ರಕರಣದ ಸಂಬಂಧ ಆರಂಭದಲ್ಲಿ ಬಂಧನಕ್ಕೊಳಗಾಗಿ ಬಳಿಕ ಬಿಡುಗಡೆ ಗೊಂಡಿದ್ದ ಮೂವರು ಮನೆಕೆಲಸಗಾರರ ಪರ ವಕೀಲರೊಬ್ಬರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡಿದ್ದು, ಸೂಕ್ತ ಭದ್ರತೆ ಒದಗಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಆರುಷಿಯ ಮನೆ ಕೆಲಸಗಾರರಾಗಿದ್ದ ಕೃಷ್ಣ, ರಾಜ್ಕುಮಾರ್ ಮತ್ತು ವಿಜಯ್ ಮಂಡಲ್ ಅವರ ವಕೀಲರಾದ ನರೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿದ್ದಾರೆ.
‘ನನಗೆ ಪ್ರಾಣಾಪಾಯವಿದೆ. ಯಾವುದೇ ರೀತಿಯಲ್ಲಿ ತೊಂದರೆ ಆದರೂ ಅದಕ್ಕೆ ಸರ್ಕಾರ ಮತ್ತು ಗಾಜಿಯಾಬಾದ್ನ ಪೊಲೀಸ್ ಆಡಳಿತ ಹೊಣೆ’ ಎಂದು ಯಾದವ್ ಹೇಳಿದ್ದಾರೆ.