ಹಾಸನ: `ಕ್ರಮಬದ್ಧ ಹಾಗೂ ಲಯಬದ್ಧವಾಗಿ ಪ್ರಾಣಾಯಾಮ ಮತ್ತು ಯೋಗಾಸನ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದು' ಎಂದು ಹಾಸನ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಜಗದೀಶ್ ನುಡಿದರು.
ಹಾಸನದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಎಂ.ಸಿ.ಇ. ಸ್ಟಾಫ್ ಕ್ಲಬ್ ಮತ್ತು ನೌಕರರ ಕಲ್ಯಾಣ ಸಂಘ ಗಳ ವತಿಯಿಂದ ಸಂಸ್ಥೆಯ ಬೋಧಕ ಮತ್ತು ಬೋಧಕೇತರ ನೌಕರರಿಗಾಗಿ ಆಯೋಜಿಸಿದ್ದ ಯೋಗ ಮತ್ತು ಪ್ರಾಣಾಯಾಮ ಶಿಬಿರದಲ್ಲಿ ಮಾತನಾಡಿದ ಅವರು, `ಯುವಕರು ಹೆಚ್ಚು ಯೋಗ ಹಾಗೂ ಪ್ರಾಣಾಯಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳ ಬೇಕು' ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವಿ. ಸತ್ಯನಾರಾಯಣ, `ಮನುಷ್ಯನ ದೇಹದ ಜೀರ್ಣಾಂಗ, ಉಸಿರಾಟ ಪ್ರಕ್ರಿಯೆ, ನರಮಂಡಲ ಮುಂತಾದವು ಉತ್ತಮವಾಗಿ ಕಾರ್ಯನಿರ್ವಹಿಸಲು ಯೋಗಾಸನ ಮತ್ತು ಪ್ರಾಣಾಯಾಮ ಅತ್ಯಂತ ಉಪಯುಕ್ತ' ಎಂದರು.
ಉಪ ಪ್ರಾಂಶುಪಾಲ ಡಾ. ಕೆ.ಎಸ್. ಜಯಂತ, ಯೋಗ ಗುರು ಶಂಕರ ನಾರಾಯಣ ಶಾಸ್ತ್ರಿ ಹಾಜರಿದ್ದರು.