ಕೋಲಾರ: ಕಾಂಗ್ರೆಸ್ ಮುಖಂಡರು ಮತ್ತು ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನಡುವೆ ನಡೆಯುತ್ತಿರುವ ಆರೋಪ, ಪ್ರತ್ಯಾರೋಪಗಳ ಸಮರ ಕೊನೆಯಾಗಬೇಕು. ಇಲ್ಲವಾದಲ್ಲಿ ಬಿಜೆಪಿ ಮುಖಂಡ ರಿಂದ ತಾವು ಹಣ ಪಡೆದಿಲ್ಲ ಎಂದು ಶಾಸಕ ಎಂ. ನಾರಾಯಣಸ್ವಾಮಿ ಬೆಳಗಾನಹಳ್ಳಿ ಮಾರಮ್ಮ ದೇಗುಲದಲ್ಲಿ ಪ್ರಮಾಣಿಸಬೇಕು.
ಯಾವುದೇ ಆರೋಪ ಆಧಾರ ಸಮೇತ ಮಾಡಲಿ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ಕುಮಾರ್ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗಾರರೊಡನೆ ಗುರುವಾರ ಮಾತ ನಾಡಿದ ಅವರು, ಚುನಾವಣೆ ಪ್ರಚಾರ ಸಂದರ್ಭದಲ್ಲಿ ಒಬ್ಬರ ಮೇಲೊಬ್ಬರು ಆರೋಪಗಳನ್ನು ನಡೆಸುವುದು ಸಹಜ. ಆದರೆ ಶಾಸಕರು ಚುನಾವಣೆಯಲ್ಲಿ ಗೆದ್ದ ನಂತರವೂ ಕಾಂಗ್ರೆಸ್ ಹಾಗೂ ಪಕ್ಷದ ನಾಯಕರ ಬಗ್ಗೆ ಹಗುರವಾಗಿ, ಜನತೆಗೆ ತಪ್ಪು ಸಂದೇಶ ರವಾನಿಸುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ತಪ್ಪು ಎಂದರು.
ಈಚೆಗಷ್ಟೇ ಬಂಗಾರಪೇಟೆಯಲ್ಲಿ ನಡೆದ ಅಭಿ ನಂದನಾ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ನಾರಾ ಯಣಸ್ವಾಮಿ ಬಗ್ಗೆ ಏನೊಂದೂ ಮಾತನಾಡಲಿಲ್ಲ. ಆದರೆ ಬಿಜೆಪಿ ಚುನಾವಣಾ ಪ್ರಚಾರ ವೈಖರಿ ಬಗ್ಗೆ ಮಾತನಾಡಿದ್ದರು. ಆದರೆ ಶಾಸಕ ನಾರಾಯಣಸ್ವಾಮಿ ಅದನ್ನು ಅಪಾರ್ಥ ಮಾಡಿಕೊಂಡು ಸಂಸದರ ಬಗ್ಗೆ ಹಲವು ಟೀಕೆ ಮಾಡುತ್ತಿದ್ದಾರೆ ಎಂದರು.
ಬಂಗಾರಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ನಾರಾಯಣಸ್ವಾಮಿ ಮಾತನಾಡಿ ಒಮ್ಮೆ ಜನತಾ ದಳದಿಂದ, ಇನ್ನೊಮ್ಮೆ ಪಕ್ಷೇತರರಾಗಿ ಸ್ಪರ್ಧಿಸಿ ಸೋತು ಮನೆ ಸೇರಿದ್ದ ನಾರಾಯಣಸ್ವಾಮಿಗೆ ಮತ್ತೆ ರಾಜಕೀಯ ಭವಿಷ್ಯತ್ತು ಕೆ.ಎಚ್.ಮುನಿಯಪ್ಪ ಅವ ರಿಂದ ಪ್ರಾರಂಭವಾಯಿತು ಎಂಬುದು ಇಡೀ ಜಿಲ್ಲೆಗೇ ಗೊತ್ತಿದೆ.
ನಾರಾಯಣಸ್ವಾಮಿ ಜೊತೆಯಲ್ಲಿ ಬಂದಂ ತಹ ತಿಮ್ಮರಾಯನಾಯಕ್, ವೆಂಕಟ ರಾಮಿರೆಡ್ಡಿ, ನಾರಾಯಣಸ್ವಾಮಿ ಅವರ ಮಗಳೂ ಸೇರಿದಂತೆ ಕ್ಷೇತ್ರದ ಸಾಕಷ್ಟು ಜನ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಅಭ್ಯರ್ಥಿಗಳ ಗೆಲುವಿಗೆ ಕೆ.ಎಚ್.ಮುನಿಯಪ್ಪ ಕಾರಣ ಎಂದರು.
ಕೆ.ಎಚ್.ಮುನಿಯಪ್ಪ ಬೆಂಬಲದಿಂದಲೇ ರಾಜ ಕೀಯ ಭವಿಷ್ಯತ್ತನ್ನು ರೂಪಿಸಿಕೊಂಡ ಶಾಸಕ ನಾರಾ ಯಣಸ್ವಾಮಿ, ಪ್ರತಿ ಲೋಕಸಭಾ ಚುನಾವಣೆ ಯಲ್ಲಿಯೂ ಮುನಿಯಪ್ಪ ಅವರ ವಿರುದ್ಧವಾಗಿಯೇ ಕೆಲಸ ಮಾಡಿದರು. ಪಕ್ಷದಲ್ಲಿಯೇ ತಮ್ಮದೇ ಆದ ಬೆಂಬಲಿಗರ ಗುಂಪು ಸೃಷ್ಟಿಸಿದರು. ತಮ್ಮ ಕುಲಸ್ಥರಿಗಷ್ಟೇ ಸಹಾಯ ಮಾಡುತ್ತಾ ಬಂದರು. ಹೀಗೆ ಪಕ್ಷದಲ್ಲಿದ್ದುಕೊಂಡೇ ಗುಂಪುಗಾರಿಕೆ ಹುಟ್ಟು ಹಾಕಿ ದರು. ಕೊನೆಗೊಮ್ಮೆ ಪಕ್ಷವನ್ನೇ ಬಿಟ್ಟು ಹಣ, ಅಧಿಕಾರದ ಹಿಂದೆ ಹೋದರು. ಪಕ್ಷ ಬಿಟ್ಟು ಹೋದರೂ ಮುನಿಯಪ್ಪನವರ ವಿರುದ್ಧ ಹಲ್ಲು ಮಸೆಯುವುದನ್ನು ಬಿಟ್ಟಿಲ್ಲ ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಮುಖ ಪಾರ್ಥಸಾರಥಿ, ಜಿ.ಪಂ.ನ ಮಾಜಿ ಅಧ್ಯಕ್ಷ ಜನಘಟ್ಟ ವೆಂಕಟ ಮುನಿಯಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಎಪಿಸಿ ಎಂಎಸ್ ಮಾಜಿ ಅಧ್ಯಕ್ಷ ಬಿ.ಹೊಸರಾಯಪ್ಪ, ಚಿಕ್ಕ ಹೊಸಹಳ್ಳಿ ಮಂಜುನಾಥ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.