ತುಮಕೂರು: ಭಾರತದ ಅರ್ಥಿಕ ಸ್ಥಿತಿ ತೀರ ಹದಗೆಟ್ಟಿದ್ದು, ವಿದೇಶಿ ವ್ಯಾಮೋಹ, ಕೊಳ್ಳುಬಾಕ ಸಂಸ್ಕೃತಿಯಿಂದ ದೇಶ ಅರ್ಥಿಕ ಗಟ್ಟಿತನ ಕಳೆದುಕೊಳ್ಳುತ್ತಿದೆ ಎಂದು ಅರ್ಥಶಾಸ್ತ್ರಜ್ಞ ಡಾ.ಅಬ್ದುಲ್ ಅಜೀಜ್ ಅಭಿಪ್ರಾಯಪಟ್ಟರು.
ನಗರದ ಶ್ರೀದೇವಿ ಸ್ನಾತಕೋತ್ತರ ಕಾಲೇಜು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾರದೋ ಒತ್ತಡಕ್ಕೆ ಒಳಗಾಗಿ ದೇಶದ ಆರ್ಥಿಕ ನೀತಿ ರೂಪಿಸುತ್ತಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ದೇಶದ ಅಭಿವೃದ್ಧಿಗೆ ರಾಜಕೀಯ, ಸಾಮಾಜಿಕ ನೀತಿಗಳಿಗಿಂತ ಅರ್ಥಿಕ ನೀತಿ ಮಹತ್ವ ಪಡೆದುಕೊಳ್ಳುತ್ತದೆ. ದೇಶದ ಅರ್ಥಿಕ ಸ್ಥಿತಿಗತಿಯ ಬಗ್ಗೆ ಸ್ಪಷ್ಟ ತಿಳವಳಿಕೆ ಅಗತ್ಯವಿದೆ. ರಾಜಕೀಯ ಲಾಭಕ್ಕಾಗಿ ಅನಗತ್ಯ ಸಬ್ಸಿಡಿ ನೀಡಿ ಜನರ ದುಡಿಯುವ ಶಕ್ತಿ ಕಡಿಮೆ ಮಾಡುವ ಜೊತೆಗೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡಿ ಅರ್ಥಿಕ ಹಿಂಜರಿಕೆಗೆ ಕಾರಣವಾಗುತ್ತಿದ್ದಾರೆ ಎಂದು ಟೀಕಿಸಿದರು.
ಭಾರತ ಅರ್ಥಿಕ ಬಿಕ್ಕಟ್ಟಿನಿಂದ ಹೊರಬರಬೇಕಾದರೆ ಯುವ ಜನರು ಮನಸ್ಸು ಮಾಡಬೇಕು. ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆ ಬಳಸುವುದು ಅಭ್ಯಾಸ ಮಾಡಿಕೊಳ್ಳಬೇಕು. ಚಿನ್ನದ ಮೇಲಿನ ವ್ಯಾಮೋಹ ಬಿಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಕೆಲ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಮಾಡಬೇಕೆಂದು ಸಲಹೆ ನೀಡಿದರು.