ನವದೆಹಲಿ (ಪಿಟಿಐ): ನವೆಂಬರ್ನಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ `ಜಿ-20~ ಹಣಕಾಸು ಸಚಿವರ ಶೃಂಗಸಭೆಯಲ್ಲಿ ಯೂರೋಪ್ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವ ಭರವಸೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ಭಾನುವಾರ ಇಲ್ಲಿ ಬ್ಯಾಂಕ್ ಆಫ್ಮಹಾರಾಷ್ಟ್ರದ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವಾರ ನಡೆಯಲಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ವಾರ್ಷಿಕ ಸಭೆಯಲ್ಲೂ ಜಾಗತಿಕ ಆರ್ಥಿಕ ಬಿಕ್ಕಟ್ಟು ಪ್ರಮುಖವಾಗಿ ಚರ್ಚೆಗೆ ಬರಲಿದೆ ಎಂದರು. ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳು ಆರ್ಥಿಕ ಬಿಕ್ಕಟ್ಟಿನಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಜಾಗತಿಕ ನೀತಿಯೊಂದರ ಅಗತ್ಯವಿದೆ ಎಂದರು.
ಪ್ಯಾರಿಸ್ನಲ್ಲಿ ನಡೆಯಲಿರುವ `ಜಿ-20~ ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿಗೆ ಸಮರ್ಥ ಪರಿಹಾರವೊಂದನ್ನು ಕಂಡುಕೊಳ್ಳುವ ಭರವಸೆ ಇದೆ. ಆದರೆ, ತಕ್ಷಣಕ್ಕೆ ಈ ಬಿಕ್ಕಟ್ಟು ಶಮನಕ್ಕೆ ಯಾವುದೇ `ಸಿದ್ಧ ಪರಿಹಾರಗಳಿಲ್ಲ~ ಎಂದರು.
ಆರ್ಥಿಕ ಹಿಂಜರಿತಕ್ಕೆ ಒಳಗಾಗಿ ಚೇತರಿಸಿಕೊಳ್ಳುತ್ತಿದೆ ಎನ್ನುವ ವೇಳೆಗಾಗಲೇ ಮತ್ತೊಮ್ಮೆ ಆರ್ಥಿಕ ಹಿಂಜರಿತ ಭೀತಿಗೆ ಸಿಲುಕಿರುವ ಯೂರೋಪ್ ಒಕ್ಕೂಟದ ಕುರಿತು `ಐಎಂಎಫ್~ ಸಭೆಯಲ್ಲಿ ಮುಖ್ಯವಾಗಿ ಚರ್ಚೆ ನಡೆಯಲಿದೆ.
ಗ್ರೀಸ್, ಇಟಲಿ, ಪೋರ್ಚುಗಲ್ನಲ್ಲಿ ಸಾಲದ ಬಿಕ್ಕಟ್ಟು ಉಲ್ಬಣಿಸಿದ್ದು, ಆರ್ಥಿಕ ವೃದ್ಧಿ ದರ ಗಣನೀಯವಾಗಿ ಕುಸಿದಿದೆ. ಆರ್ಥಿಕ ಪ್ರಾಬಲ್ಯ ಹೊಂದಿರುವ ಫ್ರಾನ್ಸ್ ಮತ್ತು ಜರ್ಮನಿಯಲ್ಲೂ ಬಿಕ್ಕಟ್ಟಿನ ಬಿಸಿ ಕಾಣಿಸಿಕೊಂಡಿದೆ ಎಂದರು.
ಯೂರೋಪ್ನಲ್ಲಿ ಕಾಣಿಸಿಕೊಂಡಿರುವ ಬಿಕ್ಕಟ್ಟು, ದೇಶದ ರಫ್ತು ಮತ್ತು ಇತರೆ ವ್ಯಾಪಾರ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಪ್ರಣವ್ ಹೇಳಿದರು.
ಮಾರ್ಚ್ 2012ರ ವೇಳೆಗೆ 74 ಸಾವಿರ ಗ್ರಾಮಗಳನ್ನು ಬ್ಯಾಂಕಿಂಗ್ ಸೇವಾ ವ್ಯಾಪ್ತಿಗೆ ತರುವ ಗುರಿಯನ್ನು ಸರ್ಕಾರ ಹೊಂದಿದೆ. ಈಗಾಗಲೇ 29,800 ಗ್ರಾಮಗಳನ್ನು ಈ ಯೋಜನೆ ವ್ಯಾಪ್ತಿಗೆ ತರಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.