ಬೆಳಗಾವಿ: ಉತ್ತಮ ಫಲಿತಾಂಶ ದಿಂದಾಗಿ ಸಂತಸದಿಂದ ಇರಬೇಕಾಗಿದ್ದ ವಿದ್ಯಾರ್ಥಿನಿಯೊಬ್ಬಳು ಆರ್ಥಿಕ ಸಂಕಷ್ಟ ದಿಂದಾಗಿ ಎಂಜಿನಿಯರಿಂಗ್ ಸೇರಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಡಗಾವಿ ನಿವಾಸಿ ಸವಿತಾ (ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿನಿ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಳು. ಸಕಾಲಕ್ಕೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಸವಿತಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 94 ರಷ್ಟು ಅಂಕ ಗಳಿಸಿದ್ದರು. ಜತೆಗೆ ಸಿಇಟಿಯಲ್ಲಿ 6 ಸಾವಿರಕ್ಕಿಂತ ಕಡಿಮೆ ರ್ಯಾಂಕ್ ಪಡೆದಿದ್ದಾರೆ. ಎಂಜಿನಿಯರಿಂಗ್ ಮಾಡಬೇಕು ಎಂಬ ಕನಸು ಹೊಂದಿದ್ದಾರೆ.
ಸವಿತಾಳ ತಂದೆ ಭಾರತ್ ನಗರದಲ್ಲಿ ಚಹಾ ಅಂಗಡಿ ನಡೆಸುತ್ತಿದ್ದಾರೆ. ಐವರು ಸದಸ್ಯರನ್ನು ಹೊಂದಿದ ಕುಟುಂಬದ ಆದಾಯದ ಮೂಲವೇ ಈ ಅಂಗಡಿ. ಇತ್ತೀಚೆಗೆ ನಡೆದ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಅಂಗಡಿಯನ್ನು ತೆರವುಗೊಳಿಸಲಾಗಿತ್ತು. ಹೀಗಾಗಿ ಸಾಕಷ್ಟು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ.
ಉತ್ತಮ ಅಂಕ ಗಳಿಸಿದ್ದ ಸವಿತಾ ಮನೆಯಲ್ಲಿ ಎಂಜಿನಿಯರಿಂಗ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅದಕ್ಕಾಗಿ ಸಿದ್ಧತೆಗಳನ್ನೂ ಆರಂಭಿಸಿ ದ್ದರು. ಆದರೆ ಆರ್ಥಿಕ ಸ್ಥಿತಿ ಉತ್ತಮ ವಾಗಿಲ್ಲದ್ದರಿಂದ ಎಂಜಿನಿಯರಿಂಗ್ ಓದಿಸುವ ಬಗೆಗೆ ಅನುಮಾನಗೊಂಡು ಮನ ನೊಂದಿದ್ದ ಸವಿತಾ ಆತ್ಯಹತ್ಯೆಗೆ ಯತ್ನಿಸಿದ್ದರು.
`ಪ್ರಜಾವಾಣಿ~ಯೊಂದಿಗೆ ಮಾತ ನಾಡಿದ ಸವಿತಾಳ `ತಂದೆ ರಸ್ತೆ ಅಗಲೀಕರಣದಲ್ಲಿ ಅಂಗಡಿ ಕಳೆದುಕೊಂಡ ನಂತರ ಆರ್ಥಿಕ ಪರಿಸ್ಥಿತಿ ಸರಿಯಾಗಿರ್ಲಲಿವಲ್ಲ. ಆದ್ದರಿಂದ ಮಗಳ ಮುಂದಿನ ವಿದ್ಯಾಭ್ಯಾಸದ ಕುರಿತು ಹಿಂದೇಟು ಹಾಕಿದ್ದೆ. ಈಗ ಮಗಳ ಆಸೆ ಈಡೇರಿಸಲು ಸಾಧ್ಯವಿದ್ದಷ್ಟು ಪ್ರಯತ್ನಿಸುತ್ತೇನೆ ಜೊತೆಗೆ ಅವಳ ಓದಿಗೆ ಎಲ್ಲ ರೀತಿಯ ನೆರವು ಒದಗಿಸಲು ಎಸ್ಬಿಐ ಬ್ಯಾಂಕಿನ ಅಧಿಕಾರಿಗಳು ಸಾಲ ನೀಡುವ ಭರವಸೆ ನೀಡಿದ್ದಾರೆ~ ಎಂದರು.