ಅಕ್ಕಿಆಲೂರ: `ನೈಜ ಅಭಿನಯದ ಮೂಲಕ ರಂಗಭೂಮಿಯ ಕಲಾವಿದರು ಜನಮನದಲ್ಲಿ ನೆಲೆಯೂರಿದ್ದಾರೆ. ಆದರೆ ಆಧುನಿಕತೆಯ ಪ್ರಭಾವದಿಂದಾಗಿ ಕಲಾವಿದರು ಶಾಶ್ವತ ನೆಲೆ ಕಾಣದೇ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ' ಎಂದು ಸಾಹಿತಿ ಪ್ರೊ.ಮಾರುತಿ ಶಿಡ್ಲಾಪುರ ವಿಷಾದಿಸಿದರು.
ಸಮೀಪದ ತಿಳವಳ್ಳಿಯ ಚಿತ್ತರಗಿಯ ವಿಜಯ ಮಹಾಂತೇಶ ನಾಟ್ಯ ಸಂಘದ ಆವರಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವೃತ್ತಿ ರಂಗಭೂಮಿ ಕುರಿತ ವಿಚಾರ ಸಂರ್ಕೀಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. `ಕನ್ನಡ ನಾಡಿನ ಖ್ಯಾತಿ ಹೆಚ್ಚಿಸುವಲ್ಲಿ ಇಲ್ಲಿನ ರಂಗಭೂಮಿ, ಕಲೆ, ಸಾಹಿತ್ಯ ಚಟುವಟಿಕೆಗಳು ಪ್ರಮುಖ ಕಾರಣ. ರಂಗಭೂಮಿಯಷ್ಟು ಮನರಂಜನೆ ಉಣಬಡಿಸುವ ಮಾಧ್ಯಮ ಬೇರೊಂದಿಲ್ಲ' ಎಂದು ನುಡಿದ ಅವರು, `ರಂಗ ಭೂಮಿ ಕೇವಲ ಮನರಂಜನೆಗೆ ಮಾತ್ರವೇ ಸೀಮಿತಗೊಳ್ಳದೇ ಬದುಕಿನ ಸನ್ಮಾರ್ಗಕ್ಕೆ ಉತ್ತಮ ಮಾರ್ಗದರ್ಶನ ನೀಡಬಲ್ಲದಾಗಿದೆ' ಎಂದರು.
ಕಲಾವಿದ ಸತೀಶ ಕುಲಕರ್ಣಿ ಮಾತನಾಡಿ, `ಸಾಹಿತ್ಯ, ಸಂಗೀತ ಹಾಗೂ ರಂಗ ಪರಿಕರಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ರಂಗ ಪ್ರದರ್ಶನ ನೀಡುವಂತಹ ಪ್ರಯತ್ನಗಳು ಈಚೆಗೆ ಕಡಿಮೆಯಾಗುತ್ತಿವೆ. ಕಲಾವಿದರು ಹಣಕ್ಕೆ ಆಸೆ ಪಡೆದೇ ಕಲಾ ಪ್ರತಿಭೆಯ ಮೂಲಕ ಕಲೆಯ ಆರಾಧಕರಾದಾಗ ಹಣ ತನ್ನಿಂದ ತಾನೇ ಹರಿದು ಬರುವುದರಲ್ಲಿ ಸಂಶಯವಿಲ್ಲ' ಎಂದರು.
ರಂಗಕಲಾವಿದ ಉದಯ ನಾಸಿಕ ಮಾತನಾಡಿ, `ಆಡಳಿತಾತ್ಮಕ ಭದ್ಧತೆ ಕಲ್ಪಿಸುವ ಮೂಲಕ ವೃತ್ತಿ ರಂಗಭೂಮಿ ಕಲಾವಿದರಿಗೆ ಆರ್ಥಿಕ ಅನುಕೂಲ ಒದಗಿಸುವ ಕಾರ್ಯ ಸಮುದಾಯ ಹಾಗೂ ಸರ್ಕಾರದಿಂದ ನಡೆಯಬೇಕಿದೆ. ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ಹಾಗೂ ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ರಂಗಭೂಮಿ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಇಲ್ಲದಂತಾಗಿದೆ' ಎಂದು ವಿಷಾದಿಸಿದರು.
ಉದ್ಯಮಿ ರಮೇಶ ಉಪ್ಪಾರ, ಚಿತ್ತರಗಿ ವಿಜಯ ಮಹಾಂತೇಶ ನಾಟ್ಯ ಸಂಘದ ಮುಖ್ಯಸ್ಥ ವೀರಯ್ಯಸ್ವಾಮಿ ಹಿರೇಮಠ, ಕಲಾವಿದರಾದ ನಂದಾ ಹೊಸಮನಿ, ರಾಜೇಶ್ವರಿ ಕುಮಾರ, ಯಮುನಪ್ಪ, ಆಂಜನಪ್ಪ ಈ ವೇಳೆ ಹಾಜರಿದ್ದರು.
ಶೇಷಗಿರಿ ಕಲಾತಂಡದ ಅಧ್ಯಕ್ಷ ಪ್ರಭು ಗುರಪ್ಪನವರ ಪ್ರಾಸ್ತವಿಕವಾಗಿ ಮಾತನಾಡಿದರು. ಉಪನ್ಯಾಸಕ ನಾಗರಾಜ ಧಾರೇಶ್ವರ ನಿರ್ವಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.