ಹೊಸನಗರ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಕಂದಾಯ ಇಲಾಖೆಯ ಕಸಬಾ ಪ್ರಭಾರ ರಾಜಸ್ವ ನಿರೀಕ್ಷಕರನ್ನು(ಆರ್ಐ) ಅಮಾನತು ಮಾಡುವಂತೆ ಒತ್ತಾಯಿಸಿ ಬುಧವಾರ ತಾಲ್ಲೂಕು ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಎರಡು ವರ್ಷಗಳಿಂದ ಕಸಬಾ ಪ್ರಭಾರ ರಾಜಸ್ವ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಎಂಬುವವರು ರೈತ ಹಾಗೂ ಕೂಲಿ ಕಾರ್ಮಿಕರಿಂದ ಹಾಡು ಹಗಲೇ ಲಂಚ ವಸೂಲಿ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ವಿದ್ಯಾರ್ಥಿಗಳ ಶುಲ್ಕ ರಿಯಾಯಿತಿ ಹಾಗೂ ಪ್ರೋತ್ಸಾಹ ಧನದ ಆದಾಯ ಪ್ರಮಾಣಪತ್ರಕ್ಕೂ ಸಹ ಹಣ ವಸೂಲಿ ಮಾಡುತ್ತಿದ್ದಾರೆ. ಸಂಧ್ಯಾ ಸುರಕ್ಷಾ, ವಿಧವಾವೇತನ, ಅಂಗವಿಕಲ, ಭಾಗ್ಯಲಕ್ಷ್ಮೀ ಯೋಜನೆಯ ಶಿಫಾರಸಿಗೆ ಸಹ ಹಣ ಕೇಳುತ್ತಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಜಮೀನು ಖಾತೆ ಬದಲಾವಣೆಯಿಂದ ಹಿಡಿದು ಪ್ರತಿಯೊಂದಕ್ಕೂ ದರ ನಿಗದಿ ಮಾಡಿರುವ ಕಸಬಾ ರಾಜಸ್ವ ನಿರೀಕ್ಷಕರು ಹಣ ನೀಡದ ಬಡವರಿಗೆ ಕಚೇರಿ ಅಲೆಯುವಂತೆ ಮಾಡುತ್ತಾರೆ ಎಂದು ದೂರಿದರು.
ಕಸಬಾ ಆರ್ಐ ಅವರನ್ನು ಕೂಡಲೇ ಅಮಾನತು ಮಾಡಿ ಬೇರೆ ಕಡೆ ವರ್ಗಾಯಿಸಬೇಕು ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ತಹಶೀಲ್ದಾರ್ಗೆ ನೀಡಿದ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.
ಜೆಸಿಬಿ ಶ್ರೀಧರ್, ಹೆಬೈಲು ರಾಜುಗೌಡ, ಎಂ.ಟಿ. ಟಾಕಪ್ಪ, ರಾಮಚಂದ್ರ, ಹೆಚ್.ವಿ. ಲೋಕೇಶ್, ಜೆ. ಆನಂದ್, ಕೆ.ಟಿ. ಯೋಗೀಶ್, ಕೃಷ್ಣಮೂರ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.