ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾತಿ ಬಯಸುವ ಮಕ್ಕಳಿಗೆ ಅರ್ಜಿಯನ್ನು ಉಚಿತವಾಗಿ ವಿತರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದರೂ ಸೂಚನೆಯನ್ನು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಗಾಳಿಗೆ ತೂರಿವೆ.
ನಗರದ ಕೆಪಿಸಿಸಿ ಕಚೇರಿ ಸಮೀಪದಲ್ಲಿರುವ ಸೇಂಟ್ ಮೇರಿಸ್ ಶಾಲೆಯಲ್ಲಿ ಅರ್ಜಿ ನೀಡಲು ₨300 ನೀಡುವಂತೆ ಪೋಷಕರಿಗೆ ಶಾಲೆಯಲ್ಲಿ ಒತ್ತಡ ಹೇರಿದ ಘಟನೆ ಗುರುವಾರ ನಡೆದಿದೆ.
‘ಆರಂಭದಲ್ಲಿ ಆಯಾ ವಾರ್ಡ್ನವರಿಗೆ ಮಾತ್ರ ಅರ್ಜಿ ವಿತರಿಸಲಾಗುವುದು. ಶಾಲೆಯಿಂದ ಒಂದು ಕಿ.ಮೀ. ಗಿಂತ ದೂರದಲ್ಲಿದ್ದರೆ ಅರ್ಜಿ ನೀಡುವುದಿಲ್ಲ ಎಂದು ಶಾಲೆಯಲ್ಲಿ ತಿಳಿಸಲಾಯಿತು. ಕಾಯ್ದೆಯ ಬಗ್ಗೆ ಹೇಳಿದಾಗ ಅರ್ಜಿ ನೀಡಲು ಒಪ್ಪಿದರು. ಅರ್ಜಿ ಕೊಡಬೇಕಿದ್ದರೆ ನೀವು ₨ 300 ಕೊಡಬೇಕು ಎಂಬ ಒತ್ತಡ ಹೇರಿದರು’ ಎಂದು ಪೋಷಕ ಬಾಲಾಜಿ ದೂರಿದರು.
‘ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಹೊಸ ಹೊಸ ಗೊಂದಲಗಳು ಸೃಷ್ಟಿಯಾಗುತ್ತಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈ ವರೆಗೆ ಯಾವ ಖಾಸಗಿ ಶಾಲೆಗೂ ಅಧಿಕಾರಿಗಳು ಭೇಟಿ ನೀಡಿಲ್ಲ. ಇದರಿಂದ ಖಾಸಗಿ ಶಾಲೆಗಳಿಗೆ ಭಯ ಇಲ್ಲದಂತಾಗಿದೆ’ ಎಂದು ಆರ್ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹ ಜಿ.ರಾವ್ ದೂರಿದರು.