ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ರಾಜಕೀಯ...

ಸುದ್ದಿ ಹಿನ್ನಲೆ..
Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ರಾಷ್ಟ್ರೀಯ ಆಹಾರ ಭದ್ರತಾ ಮಸೂದೆ ಜಾರಿಗೆ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆಯ ಮೊರೆ ಹೋಗಿರುವುದು ರಾಜಕೀಯ ವಲಯದಲ್ಲಿ ಆಶ್ಚರ್ಯದ ಜತೆಗೆ ತೀವ್ರ ಟೀಕೆಗೂ ಆಸ್ಪದ ಮಾಡಿಕೊಟ್ಟಿದೆ. ಸುಗ್ರೀವಾಜ್ಞೆ ಜಾರಿಗೆ ತರಲು ಸರ್ಕಾರ  ಆತುರ ತೋರಿರುವುದು ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಲೋಕಸಭೆಗೆ ಅವಧಿಗೆ ಮುಂಚೆಯೇ ಚುನಾವಣೆಗೆ ತೆರಳಲು ಕಾಂಗ್ರೆಸ್ ಹವಣಿಸುತ್ತಿದೆಯೇ  ಎನ್ನುವ ಪ್ರಶ್ನೆಗಳೂ ಈಗ ಉದ್ಭವಿಸಿವೆ. ಲೋಕಸಭೆಯಲ್ಲಿ ಈ ಮಸೂದೆ ಚರ್ಚೆಗೆ ಬಂದರೆ ಹಲವಾರು ತಿದ್ದುಪಡಿಗಳಿಗೆ ಪಟ್ಟು ಹಿಡಿಯುವುದಾಗಿ ಎಡಪಕ್ಷಗಳೂ ಹೇಳಿವೆ.

ದೇಶದ ಎರಡು ಮೂರಾಂಶದಷ್ಟು ಜನಸಂಖ್ಯೆ ರಿಯಾಯ್ತಿ ದರದಲ್ಲಿ ಆಹಾರ ಧಾನ್ಯ ಪಡೆಯುವ ಹಕ್ಕಿಗೆ ಚ್ಯುತಿ ತರಲು  ಪ್ರತಿಪಕ್ಷಗಳು ಹವಣಿಸುತ್ತಿವೆ ಎಂದು ಕಾಂಗ್ರೆಸ್ ಈ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಸಂಸತ್‌ನ ಮಳೆಗಾಲ ಅಧಿವೇಶನವು ಮಸೂದೆ ಅಂಗೀಕರಿಸದಿದ್ದರೆ  ಸುಗ್ರೀವಾಜ್ಞೆಯು ಸಹಜವಾಗಿಯೇ ರದ್ದಾಗಲಿದೆ.

ಲಾಭ
ಕಡು ಬಡ ಕುಟುಂಬದ (ಬಿಪಿಎಲ್) ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳೂ ತಲಾ 5 ಕೆಜಿ ಅಕ್ಕಿ, ಗೋಧಿ ಮತ್ತು ಒರಟು ಧಾನ್ಯಗಳನ್ನು ಕ್ರಮವಾಗಿ ರೂ 3, ರೂ 2 ಮತ್ತು ರೂ 1ರಂತೆ ನೀಡಲಾಗುವುದು. ಅತ್ಯಂತ ಕಡು ಬಡವರು `ಅಂತ್ಯೋದಯ ಅನ್ನ ಯೋಜನೆ'ಯಡಿ ಪ್ರತಿ ತಿಂಗಳೂ 35 ಕೆ.ಜಿಗಳಷ್ಟು ಆಹಾರ ಧಾನ್ಯ ಪಡೆಯುವುದು ಮುಂದುವರೆಯಲಿದೆ.

ಅಗತ್ಯವಾದ ಆಹಾರ ಧಾನ್ಯ
ಯೋಜನೆ ಜಾರಿಗೆ ಪ್ರತಿ ವರ್ಷ 612 ಲಕ್ಷ ಟನ್‌ಗಳಷ್ಟು ಆಹಾರ ಧಾನ್ಯ ಬೇಕಾಗುತ್ತದೆ. ಇದಕ್ಕೆ ್ಙ 1,24,747 ಕೋಟಿಗಳಷ್ಟು ಹಣ ವೆಚ್ಚವಾಗಲಿದೆ.  ಈಗಾಗಲೇ ಹಲವಾರು  ಕಲ್ಯಾಣ ಕಾರ್ಯಕ್ರಮಗಳು ಜಾರಿಯಲ್ಲಿ ಇರುವುದರಿಂದ ಹೆಚ್ಚುವರಿಯಾಗಿ  ್ಙ 23,800 ಕೋಟಿಗಳು ಮಾತ್ರ ಬೇಕಾಗಬಹುದು.

ಫಲಾನುಭವಿಗಳ ಆಯ್ಕೆ
ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯ ಸರ್ಕಾರಗಳು ತಮ್ಮದೇ ಆದ ನಿಯಮಗಳಡಿ ಫಲಾನುಭವಿಗಳನ್ನು ಗುರುತಿಸಬೇಕು. ಇದಕ್ಕೆ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಅಂಕಿ ಅಂಶಗಳನ್ನು ಆಧಾರವಾಗಿ ಇಟ್ಟುಕೊಳ್ಳಬೇಕಾಗುತ್ತದೆ.

ಹಣದುಬ್ಬರ ಏರಿಕೆ ಸಾಧ್ಯತೆ
ಆಹಾರ ಧಾನ್ಯಗಳ ಮಾರುಕಟ್ಟೆ ಮೇಲಿನ ವರ್ತಕರ ಹಿಡಿತ ಕೈತಪ್ಪಿ, ಭಾರತೀಯ ಆಹಾರ ನಿಗಮದಂತಹ  (ಎಫ್‌ಸಿಐ) ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನಿಯಂತ್ರಣ ಹೆಚ್ಚಲಿದೆ.

ಸ್ವಂತ ಬಳಕೆಗೆ ಧಾನ್ಯಗಳನ್ನು ಬೆಳೆಯುವ ಸಣ್ಣ ಹಿಡುವಳಿದಾರರು ಸಬ್ಸಿಡಿ  ಧಾನ್ಯಗಳು ಸುಲಭವಾಗಿ ದೊರೆಯುವುದರಿಂದ ಹೆಚ್ಚು ಹಣ ಗಳಿಸಲು ಇತರ ಆಹಾರ ಧಾನ್ಯಗಳನ್ನು ಬೆಳೆಯಲು ಮುಂದಾಗಬಹುದು. ಇದು ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಮತ್ತು ಬೆಲೆ ಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಹಣದುಬ್ಬರ ಹೆಚ್ಚಳಕ್ಕೆ  ಕಾರಣವಾಗುವ ಸಾಧ್ಯತೆಗಳಿವೆ.
 
ಮಹಿಳಾ ಸಬಲೀಕರಣ
ಯೋಜನೆಯು ಮಹಿಳಾ ಸಬಲೀಕರಣವನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆ ಇದೆ. ಗರ್ಭಿಣಿಯರು ಹೆಚ್ಚಿನ ಪ್ರಮಾಣದ ಪೌಷ್ಟಿಕ ಆಹಾರ ಪಡೆಯಲಿದ್ದಾರೆ. 

ಯೋಜನೆ ಜಾರಿಗೆ ದುಬಾರಿ ವೆಚ್ಚವಾಗಲಿದ್ದು ತೆರಿಗೆದಾರರ ಹಣದ ದುರ್ಬಳಕೆ ಆಗಲಿದೆ ಎನ್ನುವ ಕೂಗೂ ಕೇಳಿ ಬರುತ್ತಿದೆ. ಸುಲಭವಾಗಿ ಆಹಾರ ಸಿಗುವುದರಿಂದ ಜನರು ದುಡಿಯುವುದನ್ನೇ ಮರೆತು ಆಲಸಿಗಳಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಹಸಿವಿನ ಸೂಚ್ಯಂಕ
ದೇಶದಲ್ಲಿ  ಐದು ವರ್ಷದ ಒಳಗಿನ ಮಕ್ಕಳಲ್ಲಿ ಶೇ 42.5ರಷ್ಟು ಮಕ್ಕಳು  ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇತರ ದೇಶಗಳಿಗೆ ಹೋಲಿಸಿದರೆ ಇದು ವಿಶ್ವದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಇದೆ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ, 66ನೆ ಸ್ಥಾನದಲ್ಲಿ ಇದೆ. ಸಮೀಕ್ಷೆಯೊಂದರ ಪ್ರಕಾರ, ಛತ್ತೀಸಗಡ ಮತ್ತಿತರ ಕೆಲ ರಾಜ್ಯಗಳಲ್ಲಿನ ಹಸಿವಿನ ಮಟ್ಟವು ಸೂಡಾನ್‌ಗಿಂತ ಹೆಚ್ಚಿನ ಮಟ್ಟದಲ್ಲಿ ಇದೆ. ಈ ಹಿನ್ನೆಲೆಯಲ್ಲಿ, ದೇಶದಲ್ಲಿನ `ಹಸಿವಿನ ಸಾವುಗಳಿಗೆ' ಈ ಯೋಜನೆ ಸೂಕ್ತ ಉತ್ತರವೂ ಆಗಲಾರದು.

ಇತರ ದೇಶಗಳಿಗೆ ಆದರ್ಶ
`ಆಹಾರ ಹಕ್ಕು' ಯೋಜನೆಯು  ವಿಶ್ವದಲ್ಲಿಯೇ ಅತಿದೊಡ್ಡ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವಾಗಿದೆ. ಆಹಾರ ಸುರಕ್ಷತಾ ಮಸೂದೆ ಬಗ್ಗೆ ಹಲವಾರು ದೇಶಗಳಿಗೂ ಇದೇ ಬಗೆಯ ಮಸೂದೆ ಜಾರಿಗೆ ಉತ್ತೇಜನ ನೀಡಲಿದೆ ಎಂದು ವಿಶ್ವಸಂಸ್ಥೆ  ಅಭಿಪ್ರಾಯಪಟ್ಟಿದೆ.

ಸಂಗ್ರಹ - ವಿತರಣೆ
ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಆಹಾರ ಧಾನ್ಯಗಳ ಸಂಗ್ರಹ ಮತ್ತು ವಿತರಣಾ ವ್ಯವಸ್ಥೆ ಸಾಕಷ್ಟು ಬಲಪಡಿಸಬೇಕಾಗಿದೆ. ಗೋದಾಮು, ಸಾಗಾಣಿಕೆ ಮುಂತಾದ ಮೂಲ ಸೌಕರ್ಯಗಳ ಕೊರತೆ ಯೋಜನೆ ಜಾರಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ.

ಒಂದೆಡೆ ರಾಜ್ಯ ಸರ್ಕಾರ ಇದೇ 10ರಿಂದ `ಅನ್ನಭಾಗ್ಯ' ಯೋಜನೆ ಜಾರಿಗೆ ತರುತ್ತಿದೆ. ಇನ್ನೊಂದೆಡೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯೂ  ಮುಂದಿನ ಐದಾರು ತಿಂಗಳಲ್ಲಿ ಜಾರಿಗೆ ಬರಲಿದೆ. ಈ ಸೌಲಭ್ಯಗಳ ವಿಸ್ತರಣೆಯಲ್ಲಿ ಫಲಾನುಭವಿಗಳು ಎರಡೂ ಯೋಜನೆಗಳ ಪ್ರಯೋಜನ ಪಡೆದು, ಯೋಜನೆಯ ದುರ್ಬಳಕೆಯಾಗುವ ಸಾಧ್ಯತೆಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT