ಗುಲ್ಬರ್ಗ: ಕರ್ನಾಟಕ ಜ್ಞಾನ ಆಯೋಗ ಮತ್ತು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಎಂ. ಮದನಗೋಪಾಲ ಶಿಫಾರಸಿನ ಅನ್ವಯ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಅಂತರರಾಷ್ಟ್ರೀಯ ಆಹಾರ, ಇಂಧನ ಮತ್ತು ಜಲ ಸಂರಕ್ಷಣೆ ಸಂಸ್ಥೆ (ಐಐಎಫ್ಇಡಬ್ಲ್ಯುಎಸ್)ಯ ಪೂರ್ವಭಾವಿ ಸಭೆ ಶನಿವಾರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಜರುಗಿತು.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಆಹಾರ, ಇಂಧನ ಮತ್ತು ಜಲ ಸಮಸ್ಯೆ ತೀವ್ರವಾಗಿದ್ದು, ಆ ನಿಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನೆ ಮಾಡುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಆಹಾರ, ಇಂಧನ ಮತ್ತು ಜಲ ಸಂರಕ್ಷಣೆ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಆರ್ಥಿಕ ಅಡಚಣೆ ಆಗದಂತೆ ಈ ಭಾಗವನ್ನು ಹೇಗೆ ಮುನ್ನಡೆಸಬಹುದು ಎಂಬುದನ್ನು ಈ ಸಂಸ್ಥೆ ಮೂಲಕ ತೋರಿಸಿಕೊಡಲಾಗುತ್ತದೆ ಎಂದು ಅಮೆರಿಕದ ಕೊಲೆರಾಡೊ ವಿಶ್ವವಿದ್ಯಾಲಯದ ಡಾ. ಅಜೇಯ ಕೆ. ಜಾ ವಿವರಿಸಿದರು.
ಇಲ್ಲಿ ಸ್ಥಾಪಿಸಲಾಗುವ ಸಂಸ್ಥೆಯು ಕೇವಲ ಅಧ್ಯಯನ ಮತ್ತು ಸಂಶೋಧನೆಗೆ ಮಾತ್ರ ಸೀಮಿತವಾಗಿರದೇ, ಈ ಭಾಗದ ದಿನ ನಿತ್ಯದ ಸಮಸ್ಯೆ-ಸವಾಲುಗಳಿಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಾಗುವುದು ಎಂದರು.
ಆಹಾರ, ಇಂಧನ ಮತ್ತು ಜಲದ ಅಪವ್ಯಯ ತಪ್ಪಿಸುವುದು ಹಾಗೂ ಸಂರಕ್ಷಣೆ ಕುರಿತು ಅನೀಲ ಪಟೇಲ್ ಪ್ರಾಯೋಗಿಕವಾಗಿ ತಿಳಿಸಿದರು. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ, ಕುಲಸಚಿವ ಡಾ. ಎಸ್.ಎಲ್.ಹಿರೇಮಠ, ಹಣಕಾಸು ಅಧಿಕಾರಿ ಪ್ರೊ. ಬಿ.ಎಂ. ಕನ್ನೆಳ್ಳಿ, ಪ್ರೊ. ದಯಾನಂದ, ಪ್ರೊ. ಗದ್ಗಿಮಠ, ಪ್ರೊ. ಜಿ.ಆರ್. ನಾಯಕ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.