ನವದೆಹಲಿ (ಪಿಟಿಐ): ಆಗಸ್ಟ್ 6ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರವು ಶೇ 9.03ಕ್ಕೆ ಇಳಿದಿದ್ದರೂ, ಜನಸಾಮಾನ್ಯರ ಮೇಲಿನ ಹೊರೆ ಕಡಿಮೆಯಾಗಿಲ್ಲ.
ಬೇಳೆಕಾಳುಗಳನ್ನು ಹೊರತುಪಡಿಸಿ ಇತರ ಎಲ್ಲ ಸರಕುಗಳ ಬೆಲೆಗಳು ದುಬಾರಿ ಮಟ್ಟದಲ್ಲಿಯೇ ಇವೆ.
`ಆಹಾರ ಪದಾರ್ಥಗಳ ಬೆಲೆಗಳ ಏರಿಕೆಯು ಶೇ 9ಕ್ಕಿಂತ ಹೆಚ್ಚಿಗೆ ಇರುವುದು ಸ್ವೀಕಾರಾರ್ಹವಲ್ಲ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಬಣ್ಣಿಸಿದ್ದಾರೆ. ಸರ್ಕಾರ ಕೈಗೊಂಡಿರುವ ಕಠಿಣ ಕ್ರಮಗಳು ಮತ್ತು ಮುಂಗಾರು ಮಳೆಯು ಬೆಲೆಗಳ ಮಟ್ಟದ ಮೇಲಿನ ಒತ್ತಡ ಕಡಿಮೆ ಮಾಡುವ ನಿರೀಕ್ಷೆ ಇದೆ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಸಗಟು ಬೆಲೆ ಸೂಚ್ಯಂಕ ಆಧರಿಸಿ ನಿರ್ಧರಿಸಲಾಗುವ ಆಹಾರ ಹಣದುಬ್ಬರವು ಹಿಂದಿನ ವಾರ ಶೇ 9.90ರಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಬೇಳೆಕಾಳು ಬೆಲೆಗಳು ಶೇ 5.63ರಷ್ಟು ಅಗ್ಗವಾಗಿದ್ದರೂ, ಉಳಿದೆಲ್ಲ ಪದಾರ್ಥಗಳು ತುಟ್ಟಿಯಾಗಿಯೇ ಉಳಿದಿವೆ.
ಈರುಳ್ಳಿ ಶೇ 38, ಹಣ್ಣು ಶೇ 26, ಮೊಟ್ಟೆ, ಮಾಂಸ ಮತ್ತು ಮೀನು ಶೇ 10, ಹಾಲು ಶೇ 10, ದವಸಧಾನ್ಯ ಮತ್ತು ತರಕಾರಿಗಳು ಕ್ರಮವಾಗಿ ಶೇ 6 ಮತ್ತು ಶೇ 3ರಷ್ಟು ತುಟ್ಟಿಯಾಗಿವೆ.