ಲಕ್ಕುಂಡಿ (ಗದಗ): ಬರಗಾಲದ ಕಾರ್ಮೋಡ ಜಾನುವಾರುಗಳ ಮೇಲೆ ಕವಿದಿದ್ದು, ಆಹಾರದ ಕೊರತೆಯಿಂದ ಶನಿವಾರ ಗ್ರಾಮದ ಮೂರು ಜಾನುವಾರುಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಇಲ್ಲಿನ ಗೌಡ್ರ ಓಣಿ ನಿವಾಸಿಗಳಾದ ವೀರುಪಾಕ್ಷಪ್ಪ ಬೂದಿಹಾಳ ಅವರ ಹಸು, ನಾಗಪ್ಪ ನಂದಪ್ಪನವರ ಎತ್ತು ಹಾಗೂ ರಾಯಪ್ಪ ಉದ್ಧಾರ ಅವರ ಎಮ್ಮೆ ಸಾವನ್ನಪ್ಪಿವೆ.
`ಒಂದು ತಿಂಗಳಿಂದ ಮೇವಿನ ಕೊರತೆಯಿಂದ ಜಾನುವಾರುಗಳು ಬಳಲುತ್ತಿದ್ದವು. ಮಳೆ ಇಲ್ಲದೆ ಭೂಮಿಯಲ್ಲಿ ಹಸಿರಿಲ್ಲ, ಹೀಗಾಗಿ ಶೇಖರಿಸಿದ್ದ ಮೇವಿನಲ್ಲಿಯೇ ಇಲ್ಲಿಯವರೆಗೆ ಸಾಕಿದೆವು. ಆದರೆ ದಿನಗಳದಂತೆ ಅವುಗಳ ಆರೋಗ್ಯ ಹದಗೆಟ್ಟು ಇಂದು ಸತ್ತುಹೋದವು~ ಎಂದು ಜಾನುವಾರು ಕಳೆದುಕೊಂಡ ರೈತರು ಅಳಲು ತೊಡಿ ಕೊಂಡರು.
`ಗ್ರಾಮದಲ್ಲಿ ಎತ್ತು ಎಮ್ಮೆ , ಹಸು, ಆಡು, ಕುರಿ ಸೇರಿದಂತೆ ಸಾವಿರಾರು ಜಾನುವಾರುಗಳು ಮೇವಿನ ಕೊರತೆಯಿಂದ ಬಡಕಲಾಗುತ್ತಿವೆ. ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋದರೆ ಕೊಳ್ಳುವವರಿಲ್ಲ~ ಎಂದು ಶೇಖರಗೌಡ ರೋಣದ, ಹಾಲ್ಲಪ್ಪ ಹಳ್ಳಿ, ಚನ್ನಪ್ಪಗೌಡ ಪಾಟೀಲ ಬರಗಾಲದ ಪರಿಸ್ಥಿತಿ ವಿವರಿಸಿದರು.
ರೈತರು ಜಾನುವಾರುಗಳ ಮೇಲೆ ತೆಗೆದುಕೊಂಡ ಬ್ಯಾಂಕಿನ ಸಾಲ ಮನ್ನಾ ಮಾಡಬೇಕು. ಗ್ರಾಮದಲ್ಲಿಯೇ ಗೋ ಶಾಲೆಯನ್ನು ತೆರೆಯಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ. ಬಿ. ಮಾಡಲಗೇರಿ, ಸದಸ್ಯ ಪ್ರಕಾಶ ಅರಹುಣಸಿ, ರಾಮಣ್ಣ ಅಂಬಕ್ಕಿ, ಷಣ್ಮುಖಗೌಡ ರೋಣದ, ಮಂಜುನಾಥ ಕಿಲ್ಲೆದ, ಈರಣ್ಣ ಬಳೂಟಗಿ, ರಮೇಶ ಮಾಡಲಗೇರಿ, ಬಸನಗೌಡ ಪಾಟೀಲ, ನಾಗಪ್ಪ ಮಣ್ಣುರ, ಮಾಹಾಂತೇಶ ಸಜ್ಜನರ, ಹಾಲ್ಲಪ್ಪ ಹಳ್ಳಿ, ಶರಣಪ್ಪ ಕಮತರ ಆಗ್ರಹಿಸಿದ್ದಾರೆ.