ವಿರಾಜಪೇಟೆ: ಸರ್ಕಾರದ ಇ-ಸ್ಟ್ಯಾಪಿಂಗ್ನಿಂದಾಗಿ ನಕಲಿ ಸ್ಟ್ಯಾಂಪ್ ದಂಧೆಗೆ ಪೂರ್ಣವಾಗಿ ಕಡಿವಾಣ ಬೀಳಲಿದ್ದು, ಇದರಿಂದ ಗ್ರಾಹಕರಿಗೆ ಸುಲಭ ರೀತಿಯಲ್ಲಿ ನಿಗದಿತ ಮೌಲ್ಯದ ಸ್ಟ್ಯಾಂಪ್ ಪೇಪರ್ಗಳು ದೊರೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ತಿಳಿಸಿದರು. ವಿರಾಜಪೇಟೆಯ ಟೌನ್ಬ್ಯಾಂಕ್ನಲ್ಲಿ ಬುಧವಾರ ತಾಲ್ಲೂಕಿನಲ್ಲಿ ಪ್ರಥಮವಾಗಿ ಆರಂಭವಾದ ಇ-ಸ್ಟಾಂಪಿಂಗ್ ಯಂತ್ರವನ್ನು ಉದ್ಘಾಟಿಸಿದ ಅವರು ಈಗ ಜೈಲು ಶಿಕ್ಷೆಗೊಳಗಾಗಿರುವ ತೆಲಗಿ ಸಹಚರರಿಂದ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಸುಮಾರು ರೂ.25ಸಾವಿರ ಕೋಟಿ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಹಗರಣದಲ್ಲಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಶಾಮಿಲಾಗಿದ್ದರೂ ಪ್ರಭಾವಿಗಳ ಕೈವಾಡದಿಂದಾಗಿ ಕೆಲವರು ಮಾತ್ರ ಶಿಕ್ಷೆ ಅನುಭವಿಸುವಂತಾಗಿದೆ ಎಂದರು.
ಪ್ರಸ್ತುತ ಸರ್ಕಾರದ ಇಂದಿನ ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯ ಮೌಲ್ಯದ ಪೇಪರುಗಳನ್ನು ಮುಕ್ತವಾಗಿ ಗ್ರಾಹಕರು ಖರೀದಿಸಬಹುದಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೂ ನಿರ್ದಿಷ್ಟ ಲಾಭ ಬರಲಿದೆ. ಈ ವ್ಯವಸ್ಥೆ ನಗರ, ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿಯೂ ಜಾರಿಗೆ ಬರಬೇಕು. ಇ-ಸ್ಟ್ಯಾಪಿಂಗ್ ಸೌಲಭ್ಯ ಸಹಕಾರ ಕ್ಷೇತ್ರದ ಮೂಲಕ ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕು ಎಂದರು. ಬ್ಯಾಂಕ್ನ ಅಧ್ಯಕ್ಷ ಕೆ.ಎಂ.ಸೋಮಯ್ಯ ಮಾತನಾಡಿ ತಾಲ್ಲೂಕಿನಲ್ಲಿ ಪ್ರಥಮವಾಗಿ ವಿರಾಜಪೇಟೆಯ ಟೌನ್ಬ್ಯಾಂಕ್ನಲ್ಲಿ ಇ.ಸ್ಟ್ಯಾಂಪಿಂಗ್ ವ್ಯವಸ್ಥೆಗೊಳಿಸಲಾಗಿದೆ. ವ್ಯವಸ್ಥೆಯಿಂದ ಬ್ಯಾಂಕ್ಗೆ ಲಾಭಾಂಶ ಇಲ್ಲದಿದ್ದರೂ ಗ್ರಾಹಕರಿಗೆ ಸೇವೆಯ ಮನೋಭಾವದಿಂದ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಂ.ಎಂ.ನಂಜಪ್ಪ, ನಿರ್ದೇಶಕರಾ ಕೆ.ಡಬ್ಲ್ಯು.ಬೋಪಯ್ಯ, ಕೆ.ಎಂ.ಚರ್ಮಣ, ಐ.ಎಂ.ಕಾವೇರಮ್ಮ ರಚನ್ಮೇದಪ್ಪ, ಎನ್.ಸಿ.ಬೆಳ್ಯಪ್ಪ, ಬಿ.ಜಿ.ರಘುನಾಥ್ನಾಯಕ್, ಕೆ.ಬಿ.ಪ್ರತಾಪ್, ಚೆಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಶಿಕಾವೇರಪ್ಪ, ಸಾಬು ನಾಣಯ್ಯ ವ್ಯವಸ್ಥಾಪಕ ಸಿ.ಎಸ್.ಪ್ರಕಾಶ್ ಉಪ ನೋಂದಣಾಧಿಕಾರಿ ಚಲುವರಾಜ್ ಉಪಸ್ಥಿರಿದ್ದರು.