ಬೆಂಗಳೂರು: `ಪಶ್ಚಿಮ ಏಷ್ಯಾದ ಕ್ರಾಂತಿಯೊಂದಿಗೆ ಮನುಷ್ಯನ ಆಳದಲ್ಲೇಳುವ ತೊಳಲಾಟವನ್ನು ಕಾದಂಬರಿಯಾಗಿಸಿದ್ದೇನೆ' ಎಂದು ಕಾದಂಬರಿಕಾರ ಜಾನ್ ಡಿ ಬಲಿಯನ್ ತಿಳಿಸಿದರು.
ಬೆಂಗಳೂರು ಸಾಹಿತ್ಯ ಹಬ್ಬವು ನಗರದಲ್ಲಿ ಗುರುವಾರ ಆಯೋಜಿಸಿದ್ದ ಜಾನ್ ಡಿ ಬಲಿಯನ್ ಅವರ `ಗ್ರೇ ವೋಲ್ವ್ಸ್ ಆ್ಯಂಡ್ ವೈಟ್ ಡವ್ಸ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದು.
`ಉದಾರೀಕರಣವು ಕಣ್ಣು ಬಿಡುವ ಕಾಲಘಟ್ಟದಲ್ಲಿ ಸ್ವೀಡನ್ ಮತ್ತು ಪ್ಯಾರಿಸ್ಗಳಲ್ಲಿ ನಡೆಯುವ ಕಥನದಲ್ಲಿ ಬಾಲಕನೊಬ್ಬ ಹಲವು ವೈರುಧ್ಯಗಳನ್ನು ಅನುಭವಿಸುತ್ತಾನೆ. ಇದನ್ನೇ ಕೃತಿಯ ರೂಪಕ್ಕೆ ಇಳಿಸಿದ್ದೇನೆ. ಬಾಲಕನ ಪಾತ್ರ ನಾಗರಿಕ ಮನೋಭಾವದ ಪ್ರತಿನಿಧಿಯಾಗಿ ಉಳಿಯುತ್ತದೆ' ಎಂದು ಹೇಳಿದರು.
`ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲಿಕ ಅಂಶಗಳು ಎಲ್ಲ ಕಾಲಘಟ್ಟದಲ್ಲೂ ಅಳವಡಿಕೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುವ ಸಂಘಟನೆಗಳು ಕೂಡ ಪ್ರಜಾಪ್ರಭುತ್ವದ ವಿರೋಧಿ ನಿಲುವನ್ನು ಹೊಂದಿರುವ ಸಾಧ್ಯತೆಯಿರುತ್ತದೆ. ಇವುಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ' ಎಂದು ತಿಳಿಸಿದರು.
ಚೀನಾದಲ್ಲಿನ ಭಾರತದ ಮಾಜಿ ರಾಯಭಾರಿ ಸಿ.ವಿ.ರಂಗನಾಥನ್, `ಕ್ರಾಂತಿಯೊಂದಿಗೆ ಬೆಸೆದುಕೊಂಡ ಸಾಮಾಜಿಕ ಬದ್ಧತೆ ಹಾಗೂ ನಾಗರಿಕ ಸಮಸ್ಯೆಯನ್ನು ಒಳಗೊಂಡ ಕೃತಿಯು ಸಾರ್ವಕಾಲಿಕ ಗುಣವನ್ನು ಹೊಂದಿರುತ್ತದೆ' ಎಂದು ತಿಳಿಸಿದರು. ಲೇಖಕಿ ಜಾಹ್ನವಿ ಬರುವಾ, ಉದ್ಯಮಿ ಹರೀಶ್ ಬಿಜೂರ್ ಇದ್ದರು.