ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಆತ್ಮನಿವೇದನೆಗೆ ವೇದಿಕೆ ಸಜ್ಜು

Last Updated 26 ಜೂನ್ 2011, 19:30 IST
ಅಕ್ಷರ ಗಾತ್ರ

ಶ್ರೀಕ್ಷೇತ್ರ ಧರ್ಮಸ್ಥಳ: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ಆಣೆ- ಪ್ರಮಾಣದ `ಧರ್ಮ ರಾಜಕೀಯ~ ಕ್ಲೈಮಾಕ್ಸ್ ಹಂತ ತಲುಪಿದೆ. ಆಣೆ-ಪ್ರಮಾಣದಿಂದ ಈ ಇಬ್ಬರು ನಾಯಕರು ಹಿಂದೆ ಸರಿದರೂ, ತಮ್ಮ ಬೆಂಬಲಿಗರ ಜತೆ ಸೋಮವಾರ ಶ್ರೀಕ್ಷೇತ್ರಕ್ಕೆ ಆಗಮಿಸಿ, `ಮಾತು ಬಿಡ ಮಂಜುನಾಥ~ನ ಎದುರು ಆತ್ಮ ನಿವೇದನೆ ಮಾಡಿಕೊಳ್ಳುವುದು ಖಚಿತವಾಗಿದೆ.

ಬಿ.ಎಸ್.ಯಡಿಯೂರಪ್ಪ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಬೆಳಿಗ್ಗೆ ಕ್ಷೇತ್ರಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯಲಿದ್ದಾರೆ. ಅವರವರ ಭಕ್ತಿ-ಭಾವವನ್ನು ದೇವರೆದುರು ನಿವೇದಿಸಿಕೊಳ್ಳಲಿದ್ದಾರೆ. ಇಲ್ಲಿರುವುದು `ಭಕ್ತರು ಮತ್ತು ದೇವರ ಸಂಬಂಧ~ ಮಾತ್ರ ಎಂದು ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಸ್ಪಷ್ಟಪಡಿಸಿದರು.

ಬೀಡುವಿನಲ್ಲಿ (ಹೆಗ್ಗಡೆ ನಿವಾಸ) ಸುದ್ದಿಗಾರರ ಜತೆ ಭಾನುವಾರ ಸಂಜೆ ಮಾತನಾಡಿದ ಅವರು, `ಆಣೆ- ಪ್ರಮಾಣದಿಂದ ಇಬ್ಬರೂ ಹಿಂದೆ ಸರಿದಿರುವುದರಿಂದ ಇನ್ನು ಆ ವಿಷಯಕ್ಕೆ ಮಹತ್ವ ಇಲ್ಲ. ಇಬ್ಬರೂ ಕ್ಷೇತ್ರಕ್ಕೆ ಸೌಹಾರ್ದಯುತ ಭೇಟಿ ನೀಡುತ್ತಿದ್ದಾರೆ. ಮಂಜುನಾಥ ಸ್ವಾಮಿಯ ಮೇಲಿನ ಭಕ್ತಿಯಿಂದಷ್ಟೇ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇಲ್ಲಿ ಯಾವುದೇ ಒತ್ತಡ, ಗೊಂದಲ ಇಲ್ಲ~ ಎಂದರು.

`ಯಡಿಯೂರಪ್ಪ ಅವರು ಸೋಮವಾರ ಬೆಳಿಗ್ಗೆ 9 ಗಂಟೆಗೆ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಮಾಡಲಿದ್ದಾರೆ. ನಂತರ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಇಬ್ಬರು ನಾಯಕರಿಗೂ ಅವರವರ ಗೌರವ, ಸ್ಥಾನಮಾನಕ್ಕೆ ತಕ್ಕಂತೆ ಈ ವ್ಯವಸ್ಥೆ ಮಾಡುವುದು ಅನಿವಾರ್ಯ. ಈ ಸಂದರ್ಭದಲ್ಲಿ ಒಂದು ತಾಸು ಭಕ್ತರಿಗೆ ಕ್ಷೇತ್ರದೊಳಗೆ ಪ್ರವೇಶ ನಿರಾಕರಿಸಲಾಗುವುದು. ಹೀಗಾಗಿ ಭಕ್ತರಿಗೆ ಸ್ವಲ್ಪ ಅನಾನುಕೂಲವಾಗಬಹುದು~ ಎಂದು ಹೇಳಿದರು.

ಯಡಿಯೂರಪ್ಪ ಅವರ ಜತೆ 35 ಶಾಸಕರು, ಕುಮಾರಸ್ವಾಮಿ ಅವರೊಂದಿಗೆ 20 ಶಾಸಕರು ಬರುವ ಬಗ್ಗೆ ಕ್ಷೇತ್ರಕ್ಕೆ ಮಾಹಿತಿ ಬಂದಿದೆ. ಈ ಎಲ್ಲರಿಗೂ ಕ್ಷೇತ್ರದ ವತಿಯಿಂದ ಆತಿಥ್ಯ ವ್ಯವಸ್ಥೆ ಮಾಡಲಾಗಿದೆ ಎಂದು ವಿವರ ನೀಡಿದರು.

ಆತ್ಮಸಾಕ್ಷಿ ಪ್ರಾರ್ಥನೆ: ಆಣೆ- ಪ್ರಮಾಣ ಮಾಡುವ ಬಗ್ಗೆ ಶ್ರೀಕ್ಷೇತ್ರಕ್ಕೆ ಮೊದಲೇ ನಿಶ್ಚಿತವಾಗಿ ತಿಳಿಸಬೇಕು. ಈಗ ಆ ಮಾತು ಇಲ್ಲ. ಅವರವರ ಭಕ್ತಿ-ಭಾವನೆಯನ್ನು ದೇವರ ಮುಂದೆ ನಿವೇದಿಸಿಕೊಳ್ಳುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ದೇವರ ಮುಂದೆ ತಮ್ಮ ಆತ್ಮಸಾಕ್ಷಿಯಂತೆ ಪ್ರಾರ್ಥನೆ ಮಾಡಿಕೊಳ್ಳಬಹುದು ಎಂದರು.

`ಇಬ್ಬರೂ ನಾಯಕರು ಆಣೆ- ಪ್ರಮಾಣ ಮಾಡಿ ಹಿಂದೆ ಸರಿದಿರುವುದರಿಂದ ತಪ್ಪು ಕಾಣಿಕೆ ನೀಡಬೇಡವೇ ಎಂಬ ಪ್ರಶ್ನೆಗೆ, `ಪ್ರಮಾಣವೇ ಇಲ್ಲ ಎಂದ ಮೇಲೆ ತಪ್ಪು ಕಾಣಿಕೆ ಪ್ರಶ್ನೆಯೂ ಇಲ್ಲ. ಕ್ಷೇತ್ರದ ಹಳೆ ನಂಬಿಕೆ ಪ್ರಕಾರ ದೇವರ ಎದುರು ನಿಂತು ಪ್ರಮಾಣ ಮಾಡಬೇಕು. ಹಾಗೆ ಮಾಡಿದರೆ ಅದಕ್ಕೆ ಪರಿಹಾರ ಇಲ್ಲ. ಅಂತಹ `ಮಾತು~ ಹಿಂದೆ ಪಡೆಯಲು ಸಾಧ್ಯವೂ ಇಲ್ಲ~ ಎಂದರು.

`ಆಣೆ ತಕ್ಷಣಕ್ಕೆ ಪರಿಹಾರ. ಆಣೆ ಸತ್ಯದ ಪ್ರತಿಪಾದನೆಗಾಗಿ ಹೇಳುವಂತಹದ್ದು. ಮನಸ್ಸಿನ ಭಾವವನ್ನು ದೇವರ ಮುಂದೆ ನಿವೇದಿಸಿಕೊಳ್ಳುವ ಮೂಲಕ ರಕ್ಷಣೆ ಬಯಸುವುದು. ಅದನ್ನು ತಕ್ಷಣ ಹಿಂದೆಗೆಯುವ ಮಾತು ಇಲ್ಲ. ದೇವರಲ್ಲಿ ಏನು ಬೇಕಾದರೂ ನಿವೇದನೆ ಮಾಡಿಕೊಳ್ಳಬಹುದು. ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ~ ಎಂದರು.

ಪತ್ರ ಬಹಿರಂಗವಿಲ್ಲ: `ಆಣೆ- ಪ್ರಮಾಣ ಬಗ್ಗೆ ಕುಮಾರಸ್ವಾಮಿ ಅವರು ನನಗೆ ಪತ್ರ ಬರೆದಿದ್ದು ನಿಜ. ಈ ರೀತಿ ಎಷ್ಟೋ ಮಂದಿ ಭಕ್ತರು ಆತ್ಮನಿವೇದನೆ ಮಾಡಿಕೊಳ್ಳುತ್ತಾರೆ. ಅದೇ ರೀತಿ ಕುಮಾರಸ್ವಾಮಿ ಕೂಡಾ ಆತ್ಮನಿವೇದನೆ ಮಾಡಿಕೊಂಡಿದ್ದಾರೆ. ಹಾಗೆಂದು ಆ ಪತ್ರದಲ್ಲಿ ಸ್ಫೋಟಗೊಳ್ಳುವಂತಹ ಅಂಶಗಳೇನೂ ಇ್ಲ್ಲಲ~ ಎಂದು ಪ್ರಶ್ನೆಯೊಂದಕ್ಕೆ ನಗುತ್ತಲೇ ಹೆಗ್ಗಡೆ ಉತ್ತರಿಸಿದರು.

ಆದರೆ ಅದು ಖಾಸಗಿ ಪತ್ರ ವಾಗಿರುವುದರಿಂದ ಕುಮಾರಸ್ವಾಮಿ ಅವರಷ್ಟೇ ಅದನ್ನು ಬಹಿರಂಗಪಡಿಸಬಹುದೇ ಹೊರತು ನಾನಲ್ಲ~ ಎಂದರು.

ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಇಬ್ಬರು ನಾಯಕರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸಮಸ್ಯೆಯಂತೂ ಆಗಿದೆ. ಕನಿಷ್ಠ 150 ಕೊಠಡಿಗಳನ್ನು ರಾಜಕೀಯ ಮುಖಂಡರಿಗೆ ಮೀಸಲಿರಿಸಲಾಗಿದೆ. ಹೀಗಾಗಿ ಕೊಠಡಿಗಳೆಲ್ಲ ಭರ್ತಿ ಆಗಿವೆ ಎಂದರು.

`ರಾಜಕೀಯ ಬೆರೆಸಬಾರದು~
`ಧರ್ಮ-ರಾಜಕೀಯವನ್ನು ಪರಸ್ಪರ ಬೆರೆಸಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ ಧರ್ಮದಿಂದ ರಾಜಕೀಯ ದೂರ ಇರಬೇಕು. ರಾಜಕೀಯ ವ್ಯವಹಾರ ನಿತ್ಯದ್ದು. ಧಾರ್ಮಿಕತೆಯಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ~ ಎಂದು ಹೆಗ್ಗಡೆ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT