ಬದಿಯಡ್ಕ: ಪೆರ್ಲದ ವಾಣಿಜ್ಯ ತಪಾಸಣಾ ಕಚೇರಿಯ ಸಮೀಪದಲ್ಲಿ ಕವಲೊಡೆದ ರಸ್ತೆ ಅತ್ಯಂತ ಇಕ್ಕಟ್ಟಾಗಿದ್ದು, ಬಹುತೇಕ ಏಕಮುಖ ರಸ್ತೆಯಂತೆ ಗೋಚರಿಸುತ್ತದೆ. ಈ ರಸ್ತೆಯಲ್ಲಿ ಪ್ರತಿದಿನ ಅನೇಕ ಬಸ್ಸುಗಳು ಪೆರ್ಲದಿಂದ ಪುತ್ತೂರಿಗೆ ಸಂಚರಿಸುತ್ತವೆ.
ಸ್ವರ್ಗ, ಗಾಳಿಗೋಪುರ, ಎಡಮಲೆ, ಕೋಟೆ, ಸೈಪಂಗಲ್ಲು ಪ್ರದೇಶದಲ್ಲಿ ರಸ್ತೆಯು ತೀರಾ ಅಪಾಯಕಾರಿಯಾಗಿದೆ. ರಸ್ತೆಯ ಇಕ್ಕಡೆಗಳಲ್ಲೂ ಕೂಡಾ ಭಾರಿ ಹೊಂಡಗಳಿರುವ ಕಾರಣ ವಾಹನ ಚಾಲಕರು ವಾಹನವನ್ನು ಬದಿಗೆ ಸರಿಸಲು ಆತಂಕಪಡುತ್ತಾರೆ. ಈ ರಸ್ತೆಯ ವಿಸ್ತರಣೆ ಹಾಗೂ ಅಗತ್ಯವಿದ್ದಲ್ಲಿ ತಡೆಗೋಡೆ ನಿರ್ಮಾಣದ ಕಾಮಗಾರಿ ಕೂಡಲೇ ನಡೆಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಅಲ್ಲದೆ ರಸ್ತೆ ತುಂಬ ಹೊಂಡಗಳು ಬಿದ್ದಿವೆ. ಮಳೆಗಾಲದಲ್ಲಿ ನೀರಿನ ಹರಿಯುವಿಕೆಗೆ ಸೂಕ್ತ ಚರಂಡಿ ವ್ಯವಸ್ಥೆಯೂ ಇಲ್ಲ. ರಸ್ತೆಯ ಡಾಂಬರೀಕರಣವೂ ಹೆಚ್ಚಿನ ಕಡೆಗಳಲ್ಲೂ ಕಿತ್ತು ಹೋಗಿದೆ. ಕಿರು ಸೇತುವೆಯೊಂದು ಶಿಥಿಲವಾಗಿದೆ. ಸೇತುವೆಯ ಇಕ್ಕಡೆಯ ತಡೆಬೇಲಿಯೂ ಮುರಿದು ಹೋಗಿದೆ. ಪ್ರತೀ ದಿನ ನೂರಾರು ವಾಹನಗಳು ಸಂಚರಿಸುವ ಅಂತರರಾಜ್ಯ ಸಂಪರ್ಕ ರಸ್ತೆಯ ದುರವಸ್ಥೆಯನ್ನು ತಕ್ಷಣ ಪರಿಹರಿಸಬೇಕಿದೆ. ಲೋಕೋಪಯೋಗಿ ಇಲಾಖೆಯು ಈ ರಸ್ತೆಯ ಅಭಿವೃದ್ಧಿಗಾಗಿ ಸೂಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.