ಗಂಗಾವತಿ: ವಿಜಯನಗರ ಕಾಲದಲ್ಲಿ ನಿರ್ಮಿಸಿದ್ದು ಎಂದು ಹೇಳಲಾಗುವ ಭವ್ಯ ವೆಂಕಟರಮಣ ದೇವಸ್ಥಾನದಿಂದ ಖ್ಯಾತಿಗಳಿಸಿರುವ ತಾಲ್ಲೂಕಿನ ವೆಂಕಟಗಿರಿ ಗ್ರಾಮದ ಜನ, ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಗ್ರಾಮದ ಮಾರ್ಗ ಮಧ್ಯೆ ಇರುವ 50ಕ್ಕೂ ಹೆಚ್ಚು ಅನಧಿಕೃತ ಇಟ್ಟಿಗೆಭಟ್ಟಿಗಳು ಹೊರ ಹಾಕುವ ಹೊಗೆ ಮತ್ತು ಬೂದಿಯಿಂದ ಗ್ರಾಮದ ಎಲ್ಲರೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒಂದೆಡೆ ಜನರ ಆರೋಗ್ಯದ ಮೇಲೆ ಇಟ್ಟಿಗೆ ಭಟ್ಟಿಗಳ ಕೆಟ್ ಪರಿಣಾಮ ಉಂಟು ಮಾಡಿದೆ. ಮತ್ತೊಂದೆಡೆ ಭಟ್ಟಿಗಳಿಂದ ಹೊರ ಬರುವ ಬೂದಿಯಿಂದ ಕೃಷಿಯ ಮೇಲೂ ವ್ಯತಿರಿಕ್ತ ಪರಿಣಾಮ ವಾಗುತ್ತಿದೆ. ಇದರಿಂದ ಇಳುವರಿ ಕುಸಿತದ ಭೀತಿ ರೈತರನ್ನು ಕಾಡುತ್ತಿದೆ.
ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರು ನೆಪಕ್ಕೆ ಆಗೊಮ್ಮೆ, ಈಗೊಮ್ಮೆ ಇಟ್ಟಿಗೆಭಟ್ಟಿ ಮಾಲಿಕರಿಗೆ ನೋಟಿಸ್ ಜಾರಿ ಮಾಡುತ್ತಾರೆ. ಬಳಿಕ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದಿಲ್ಲ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಂಬಂಧಿತ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಗ್ರಾಮದಲ್ಲಿ ಕ್ಷಯ ಹಾಗೂ ಬೂದಿಯಿಂದ ಚರ್ಮ ಸಂಬಂಧಿ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಕುಡಿಯುವ ನೀರಿನ ಸಮಸ್ಯೆ: ಗ್ರಾಮದ ಹೊರಭಾಗದಲ್ಲಿ ವೆಂಕಟಗಿರಿ ಮತ್ತು ಸುತ್ತಲಿನ ಹತ್ತು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ರೂ.8.7 ಕೋಟಿ ಮೊತ್ತದ ಕೆರೆ ಕಾಮಗಾರಿಗೆ 2012ರ ಆಗಸ್ಟ್ 16ರಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಚಾಲನೆ ನೀಡಿದ್ದರು.
‘14 ಎಕರೆ ಪ್ರದೇಶದಲ್ಲಿ 2.2 ಎಂ.ಎಲ್.ಡಿ ನೀರು ಸಂಗ್ರಹ ಸಾಮರ್ಥ್ಯದ ಕೆರೆ ನಿರ್ಮಾಣ ವಾಗಿದೆ. ಬಿಲ್ ಪಾವತಿಸಿಲ್ಲ ಎಂಬ ನೆಪಕ್ಕೆ ಗುತ್ತಿಗೆ ದಾರ ಕಾಮಗಾರಿಗೆ ತಡೆವೊಡ್ಡಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಎನ್. ಪಾಟೀಲ್ ತಿಳಿಸಿದ್ದಾರೆ.
ಗ್ರಾಮದ ಜನ ಇಂದಿಗೂ ಒಂದು ಹನಿ ಕೆರೆಯ ನೀರು ಕುಡಿದಿಲ್ಲ. ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ವಿದ್ದು, ಪರ್ಯಾಯ ಜಲಮೂಲ ಇಲ್ಲದೆ, ಫ್ಲೋರೈಡ್ ನೀರನ್ನು ಗ್ರಾಮ ಪಂಚಾಯಿತಿ ಸರಬರಾಜು ಮಾಡುತ್ತಿದೆ.
ಜನಪ್ರತಿನಿಧಿಗಳ ನಿಷ್ಕಾಳಜಿ
ಗ್ರಾಮದಲ್ಲಿ ನೀರು, ಚರಂಡಿ ಸ್ವಚ್ಛತೆ, ವಿದ್ಯುತ್ ಸಮಸ್ಯೆ ತೀವ್ರವಾಗಿತಿದೆ. ಇಟ್ಟಿಗೆ ಭಟ್ಟಿಗಳು ಹೊರ ಸೂಸುವ ಹೊಗೆ ಮತ್ತು ಬೂದಿಯಿಂದ ಜನರಿಗೆ ತೀವ್ರ ಸಂಕಷ್ಟ ಎದುರಾಗಿದೆ. ನಮ್ಮ ಪಾಲಿಗೆ ಚುನಾಯಿತರು ಇದ್ದೂ ಇಲ್ಲದಂತಾಗಿದೆ.
-ಲಿಂಗಪ್ಪ ಜಿ. ಗ್ರಾಮಸ್ಥ
ನೀರಿಗಾಗಿ ಹಾಹಾಕಾರ
ಗ್ರಾಮದಲ್ಲಿ ಕೆರೆ ಇದ್ದರೂ ಹನಿ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪರೀಕ್ಷಾ ಸಮಯದಲ್ಲಿ ವಿದ್ಯುತ್ ಕಡಿತದಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.
ಇರ್ಫಾನ್ ಅಹಮ್ಮದ್, ವಿದ್ಯಾರ್ಥಿ
ಕ್ಷಯ ರೋಗಿಗಳ ತವರು
ವಾರಕ್ಕೆ ಮೂರರಿಂದ ನಾಲ್ಕು ಹೊಸ ಕ್ಷಯರೋಗ ಪ್ರಕರಣ ಪತ್ತೆಯಾಗು ತ್ತಿವೆ. ತಾಲ್ಲೂಕಿನಲ್ಲಿ ವೆಂಕಟಗಿರಿ ಕ್ಷಯರೋಗಿಗಳ ತವರಾಗುತ್ತಿದೆ. ಇಟ್ಟಿಗೆಭಟ್ಟಿಗಳಿಂದ ಅಸ್ತಮಾ, ಅಲರ್ಜಿ, ಚರ್ಮರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
ಡಾ.ಮಂಜುಳಾ ಮಳೇಮಠ ಆಯುಷ್ ವೈದ್ಯಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.