ಧುಬ್ರಿ, ಅಸ್ಸಾಂ (ಪಿಟಿಐ): ಬಿರುಗಾಳಿಗೆ ಸಿಲುಕಿ ಬ್ರಹ್ಮಪುತ್ರ ನದಿಯಲ್ಲಿ ಮುಳುಗಿದ ಹಬೆಚಾಲಿತ ದೋಣಿಯಲ್ಲಿದ್ದ ಇನ್ನೂ ನೂರು ಜನರ ಪತ್ತೆಗೆ ಕಾರ್ಯಾಚರಣೆ ಬುಧವಾರವೂ ಮುಂದುವರೆದಿದ್ದು, ಇನ್ನೂ ಐದು ಶವಗಳನ್ನು ರಕ್ಷಣಾ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಈವರೆಗೆ 108 ಮಂದಿಯ ಶವಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ದುರಂತದಲ್ಲಿ ಸುಮಾರು 250 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಧುಬ್ರಿ ಜಿಲ್ಲಾಧಿಕಾರಿ ಕುಮುದ್ ಚಂದ್ರ ಕಲಿತಾ,ಪೊಲೀಸ್ ವರಿಷ್ಠ ಪ್ರದೀಪ ಚಂದ್ರ ಸಾಲೊಯಿ ಪತ್ತೆಕಾರ್ಯದ ಉಸ್ತುವಾರಿ ವಹಿಸಿಕೊಂಡಿದಾರೆ.
ಶವಗಳನ್ನು ನೀರಿನಿಂದ ಹೊರ ತೆಗೆಯುವ ಸಂಬಂಧ ಬಾಂಗ್ಲಾ ದೇಶದ ನೆರವು ಕೋರಲಾಗಿದೆ. ಹಾಗಾಗಿ ಭಾರತ ಮತ್ತು ಬಾಂಗ್ಲಾ ದೇಶ ಅಧಿಕಾರಿಗಳು ಗುರುವಾರ ಸಭೆ ನಡೆಸಿ ಚರ್ಚಿಸಲಿದ್ದಾರೆ. ಸೈಯದ್ ಅಲಿ ಎಂಬಾತ ಈ ದೋಣಿಯ ಮಾಲೀಕನಾಗಿದ್ದು, ಪರವಾನಗಿ ಇಲ್ಲದೇ ದೋಣಿ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಹುಲ್ ಭೇಟಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಬುಧವಾರ ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಪರಿಶೀಲಿಸಿದರು.