ರಾಮನಗರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹರಡಿದ್ದ ಅಕ್ರಮ ಕಿಡ್ನಿ ಜಾಲವನ್ನು ಪತ್ತೆ ಹಚ್ಚಿ 10 ಕ್ಕೂ ಹೆಚ್ಚು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಕುಂಬಳಗೋಡು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಅವರಿಗೆ ಮುಖ್ಯಮಂತ್ರಿ ಪದಕ ದೊರೆತಿದೆ.
ಬೆಂಗಳೂರು ಹೊರವಲಯದಲ್ಲಿ ನಡೆದಿದ್ದ `ಬಾರ್ ಗರ್ಲ್ಸ್' ಮೇಲಿನ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನೂ ಇವರ ನೇತೃತ್ವದ ತಂಡ ಬಯಲಿಗೆ ಎಳೆದಿತ್ತು.
ಬೆಂಗಳೂರಿನಲ್ಲಿ ಮಂಗಳವಾರ ನಡೆಯುವ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭದಲ್ಲಿ ಈ ಪದಕವನ್ನು ನೀಡಿ ಗೌರವಿಸಲಾಗುತ್ತದೆ. ಜಿಲ್ಲೆಯಲ್ಲಿ ಈ ವರ್ಷ ಇವರೊಬ್ಬರಿಗೆ ಮಾತ್ರ ಮುಖ್ಯಮಂತ್ರಿ ಪದಕ ದೊರೆತಿರುವುದು ವಿಶೇಷ.