ನವದೆಹಲಿ, (ಪಿಟಿಐ): ತನ್ನ ಆರ್ಥಿಕ ತೊಂದರೆಗಳ ನಿವಾರಣೆಗಾಗಿ ಮತ್ತು ರಕ್ಷಣಾ ವ್ಯವಸ್ಥೆಯ ಸುಧಾರಣೆಗಾಗಿ ಹೆಚ್ಚುವರಿ ಸಂಪನ್ಮೂಲ ಕ್ರೋಢೀಕರಣ ಗೊಳಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಯು ಪ್ರಯಾಣಿಕರ ದರ ಹೆಚ್ಚಳದ ಸಾಧ್ಯತೆ ಕುರಿತ ಪ್ರಸ್ತಾವನೆಗಳನ್ನು ಪರಿಶೀಲಿಸುತ್ತಿದೆ.
ಕಳೆದ ಎಂಟು ವರ್ಷಗಳಿಂದ ರೈಲು ಪ್ರಯಾಣಿಕರ ದರವನ್ನು ಪರೀಷ್ಕರಿಸಿಯೇ ಇಲ್ಲ. ಜೊತೆಗೆ ಯೋಜನಾ ಆಯೋಗ ಮತ್ತು ರೈಲ್ವೆ ಸಂಘಗಳು ದರ ಹೆಚ್ಚಳ ಕುರಿತು ಒತ್ತಡ ಹೇರುತ್ತಿರುವುದು ಈ ಬೆಳವಣಿಗೆಗೆ ಕಾರಣ ಎನ್ನಲಾಗಿದೆ.
ಈಚೆಗೆ ಸಂಸದೀಯ ಸಮಿತಿಯೂ ಸಹ ಹಣದುಬ್ಬರದ ಹಿನ್ನೆಲೆಯಲ್ಲಿ ಪ್ರಯಾಣೀಕರ ದರ ಹೆಚ್ಚಳ ಹೆಚ್ಚಳಕ್ಕೆ ಸಲಹೆ ನೀಡಿತ್ತು. ಜೊತೆಗೆ ಕೇಂದ್ರದ ಮಹಾ ಲೇಖಪಾಲರೂ (ಸಿಎಜಿ) ರೈಲ್ವೆಯು ತನ್ನ ಆರ್ಥಿಕ ಸದೃಢತೆಗಾಗಿ ವಿವೇಚನೆಯಿಂದ ದರ ಹೆಚ್ಚಳಮಾಡಬೇಕು ಎಂದು ಒತ್ತಾಯಿಸಿದ್ದರು..
ರೈಲು ದರ ಹೆಚ್ಚಳ ಕುರಿತು ಚಿಂತನೆ ನಡೆದಿದೆಯೇ ಹೊರತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ದರ ಹೆಚ್ಚಳ ಎಂದಿನಿಂದ ಜಾರಿಗೆ ಬರಲಿದೆ? ಜೊತೆಗೆ ದರ ಹೆಚ್ಚಳದ ಪ್ರಮಾಣ ಎಷ್ಟಿರಬಹುದು? ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಆ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ ಎಂದ ಸಪ್ಷಪಡಿಸಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಸಾಮಾನ್ಯ ದರ್ಜೆಯ ಪ್ರಯಾಣಿಕರ ದರದಲ್ಲಿ ಅಷ್ಟೇನು ಹೆಚ್ಚಳವಿರದು ಎಂಬ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.
ಡೀಸೆಲ್ ಮತ್ತು ವಿದ್ಯುತ್ ಗಾಗಿಯೇ ರೈಲ್ವೆಯ ಒಟ್ಟು ವೆಚ್ಚದ ಬಾಬತ್ತಿನಲ್ಲಿ ಶೇ 18 ರಷ್ಟುನ್ನು ಮೀಸಲಿರಿಸಿದೆ. ಈ ಇಂಧನಗಳ ವೆಚ್ಚದ ಆಧಾರದ ಮೇಲೆ ದರ ಹೆಚ್ಚಳದ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.