ನಾಗಪುರ: `ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಶತಕ ನನ್ನ ಪಾಲಿಗೆ ತುಂಬಾ ಅನಿವಾರ್ಯವಾಗಿತ್ತು. ಪ್ರಮುಖವಾಗಿ ದೀರ್ಘ ಅವಧಿ ಬ್ಯಾಟ್ ಮಾಡಲು ಸಾಧ್ಯವಾಗಿದ್ದು ಖುಷಿ ನೀಡಿದೆ. ಏಕೆಂದರೆ ಈ ಪಿಚ್ನಲ್ಲಿ ಬ್ಯಾಟ್ ಮಾಡುವುದು ಸುಲಭವಲ್ಲ' ಎಂದು ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ನುಡಿದಿದ್ದಾರೆ.
`ಕ್ರಿಕೆಟ್ನ್ಲ್ಲಲಿ ಏಳುಬೀಳು ಸಾಮಾನ್ಯ. ಎಲ್ಲಾ ಇನಿಂಗ್ಸ್ಗಳಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಿಲ್ಲ. ನಾನು ಈ ಸರಣಿಯ ಹಿಂದಿನ ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿರಬಹುದು. ಕೆಲ ತಪ್ಪುಗಳನ್ನೂ ಎಸಗಿದ್ದೇನೆ. ಆದರೆ ಭರವಸೆ ಕಳೆದುಕೊಳ್ಳಲಿಲ್ಲ. ನನ್ನ ಸಾಮರ್ಥ್ಯದ ಮೇಲೆ ನನಗೆ ನಂಬಿಕೆ ಇದೆ. ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿದ್ದೇನೆ ಎಂಬ ವಿಶ್ವಾಸವಿದೆ' ಎಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶನಿವಾರ ಶತಕ ಗಳಿಸಿದ ಬಳಿಕ ಅವರು ಹೇಳಿದರು.
ನಾಯಕ ದೋನಿ ಕೇವಲ 1 ರನ್ನಿಂದ ಶತಕ ತಪ್ಪಿಸಿಕೊಂಡ ಬಗ್ಗೆ ವಿರಾಟ್ ನಿರಾಶೆ ವ್ಯಕ್ತಪಡಿಸಿದರು. `ಖಂಡಿತ ಇದು ತುಂಬಾ ನಿರಾಶೆಗೆ ಕಾರಣವಾಯಿತು. ಇಡೀ ದಿನ ಅವರು ಅಂಗಳದಲ್ಲಿದ್ದು ತಂಡವನ್ನು ಅಪಾಯದಿಂದ ಪಾರು ಮಾಡಿದರು. ಅವರು ಶತಕ ಪೂರೈಸಬೇಕಿತ್ತು. ಆಕ್ರಮಣಕಾರಿ ಬ್ಯಾಟ್ಸ್ಮನ್ ಆಗಿರುವ ಅವರು ಈ ರೀತಿ ಇನಿಂಗ್ಸ್ ಕಟ್ಟಿದ್ದು ವಿಶೇಷವಾಗಿತ್ತು' ಎಂದರು.
`ಈ ಪಂದ್ಯ ನನಗೆ ವಿಶೇಷ ಅನುಭವ ನೀಡಿದೆ. ತಂಡ ಒಂದು ಹಂತದಲ್ಲಿ ಕೇವಲ 71 ರನ್ಗೆ 4 ವಿಕೆಟ್ ಕಳೆದುಕೊಂಡ್ದ್ದಿದ ಕಾರಣ ನಾನು ಒತ್ತಡಕ್ಕೆ ಒಳಗಾಗಿದ್ದು ನಿಜ. ಆದರೆ ಈ ರೀತಿಯ ಸನ್ನಿವೇಶದಲ್ಲಿ ಬ್ಯಾಟ್ ಮಾಡಲು ಇಷ್ಟಪಡುತ್ತೇನೆ. ಇದು ಉತ್ತಮ ಆಟಗಾರನಾಗಿ ರೂಪುಗೊಳ್ಳಲು ಸಹಾಯ ಮಾಡುತ್ತದೆ' ಎಂದು ವಿವರಿಸಿದರು.