ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಶಾಲೆಯಲ್ಲಿ ನಿತ್ಯ ಗಾಂಧಿ ಸ್ಮೃತಿ..!

Last Updated 7 ಜನವರಿ 2012, 5:35 IST
ಅಕ್ಷರ ಗಾತ್ರ

ಬಳ್ಳಾರಿ: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಅನೇಕ ಮಹನಿಯರಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಅಗ್ರಪಟ್ಟ. ಅವರ ತತ್ವಾದರ್ಶಗಳನ್ನು ಪಾಲಿಸಬೇಕು, ಅವರ ಮಾರ್ಗದಲ್ಲೇ ನಡೆಯಬೇಕು ಎಂಬ ಮಾತುಗಳು ಕೇಳಿಬರುತ್ತವಾದರೂ, ಅದನ್ನು ಕಾರ್ಯರೂಪಕ್ಕೆ ತರುವವರ ಸಂಖ್ಯೆ ಮಾತ್ರ ವಿರಳ.

ಆದರೆ, ಜಿಲ್ಲೆಯ ಹಗರಿ ಬೊಮ್ಮಹಳ್ಳಿ ತಾಲ್ಲೂಕಿನ ಅಂಕಸಮುದ್ರ ಎಂಬ ಪುಟ್ಟ ಗ್ರಾಮದಲ್ಲಿ ಮಾತ್ರ ಈ ಮಾತಿಗೆ ಅಪವಾದ ಎಂಬಂತೆ ಮಹಾತ್ಮ ಗಾಂಧೀಜಿ ಅವರ ಸ್ಮರಣೆ ನಿತ್ಯನೂತನ.

ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿ ಗಳ ಮನದಲ್ಲಿ ಗಾಂಧೀಜಿ ಅವರ ತತ್ವಾದರ್ಶಗಳನ್ನು ಅಚ್ಚೊತ್ತ ಬೇಕು ಎಂಬ ಉದ್ದೇಶದಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು `ಗಾಂಧಿ~ ಟೋಪಿ~ ಹಾಕಿಕೊಳ್ಳುವುದನ್ನು ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ, ಈ ಶಾಲೆಯ ಪ್ರತಿ ವಿದ್ಯಾರ್ಥಿ ನಿತ್ಯವೂ `ಗಾಂಧಿ~ ಟೋಪಿ ಧರಿಸಿಯೇ ಪಾಠ- ಪ್ರವಚನ ಆಲಿಸಲು ಕುಳಿತು ಕೊಳ್ಳುತ್ತಾನೆ.

1ರಿಂದ 7ನೇ ತರಗತಿವರೆಗಿನ ಈ ಶಾಲೆಯ ಪ್ರತಿ ವಿದ್ಯಾರ್ಥಿ ನಿತ್ಯ ಮನೆಯಿಂದ ಅಚ್ಚ ಬಿಳಿ ಬಣ್ಣದ ಚೂಪನೆಯ ಗಾಂಧಿ ಟೋಪಿ ತಲೆ ಮೇಲೆ ಹಾಕಿಕೊಂಡು ಬರುತ್ತಾನೆ. ಮತ್ತೆ ಮನೆಗೆ ಮರಳುವವರೆಗೂ ಆ ಟೋಪಿ ತಲೆಯ ಮೇಲೆ ರಾರಾಜಿಸುತ್ತದೆ.

ಕೆಲವು ವರ್ಷಗಳ ಹಿಂದೆ ಗ್ರಾಮದ ರೈತರೊಬ್ಬರು ದಾನ ನೀಡಿದ ಜಾಗೆಯಲ್ಲಿ ಶಾಲೆಯ ಹೊಸ ಕಟ್ಟಡ ನಿರ್ಮಿಸಿದಾಗ, ಆಗಿನ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೈಗೊಂಡ ನಿರ್ಧಾರಗಳು ಇಂದಿಗೂ ಮುನ್ನಡೆದುಕೊಂಡು ಬಂದಿವೆ.

ಮುಗಿಲೆತ್ತರದ ಮರಗಳು: ಕೇವಲ ಗಾಂಧೀಜಿ ಅವರ ತತ್ವಾದರ್ಶ ಪಾಲನೆ ಮಾತ್ರವಲ್ಲ, ಪರಿಸರ ಪ್ರೇಮ, ಗಿಡ- ಮರಗಳ ಅಸ್ತಿತ್ವ ಕುರಿತ ಜಾಗೃತಿ ಯನ್ನೂ ಮೂಡಿಸಿದ ಆಗಿನ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ನೆರವಿನಿಂದ ಶಾಲೆಯ ಆವರಣದಲ್ಲಿ ನೆಟ್ಟ ಗಿಡಗಳು ಇದೀಗ ಮಗಿಲೆತ್ತರಕ್ಕೆ ಬೆಳೆದು ಹೆಮ್ಮರವಾಗಿವೆ.

ಶಾಲೆಯ ಆವರಣ ಪ್ರವೇಶಿಸು ತ್ತಿದ್ದಂತೆಯೇ ತಂಪಾದ ವಾತಾವರಣ ಪ್ರತಿಯೊಬ್ಬ ಮನಸ್ಸಿಗೂ ಮುದ ನೀಡುತ್ತದೆ. ತೆಂಗು, ತೇಗ, ಬೇವು, ಅಶೋಕ, ಹುಣಸೆ ಮತ್ತಿತರ ನೂರಾರು ಮರಗಳು ಶಾಲೆಗೆ ಶೋಭೆ ನೀಡಿವೆ.

`ದಸರಾ ಹಾಗೂ ಬೇಸಿಗೆ ವೇಳೆ ಶಾಲೆಗೆ ರಜೆ ನೀಡಿದ ಸಂದರ್ಭ ಗ್ರಾಮಸ್ಥರೇ ಈ ಮರಗಳನ್ನು ಜತನ ದಿಂದ ಕಾಪಾಡಿ, ನೀರುಣಿಸಿ ಬೆಳೆಸಿ ಸಂರಕ್ಷಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ತೆಂಗಿನ ಮರಗಳು ನೀಡುವ ಸಾವಿರಾರು ತೆಂಗಿನ ಕಾಯಿಗಳನ್ನು ನಿತ್ಯ ಮಕ್ಕಳಿಗೆ ಸಿದ್ಧಪಡಿಸುವ ಬಿಸಿಯೂಟದ ಸಾಂಬಾರಿ ನಲ್ಲಿ ಸೇರಿಸಲಾಗುತ್ತದೆ. ಮಿಕ್ಕವನ್ನು ಮಾರಾಟ ಮಾಡಿ, ಶಾಲೆಯ  ಖರ್ಚಿಗೆ ಬಳಸಲಾಗುತ್ತದೆ~ ಎಂದು ಮುಖ್ಯಾಧ್ಯಾಪಕ ಶೇಖರಗೌಡ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಈ ಶಾಲೆಯ ಅಭಿವೃದ್ಧಿಗೆಂದೇ ರೈತರು ಒಂದಷ್ಟು ಜಮೀನನ್ನು ದಾನ ನೀಡಿದ್ದು, ಆ ಜಮೀನಿನಿಂದ ಪ್ರತಿ ವರ್ಷವೂ ಬರುವ ಆದಾಯವನ್ನು ಶಾಲೆಯ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಗಳಿಗೂ, ಕಟ್ಟಡ ನಿರ್ಮಾಣಕ್ಕೂ ಬಳಸಲಾಗುತ್ತದೆ ಎಂದೂ ಅವರು ಹೇಳಿದರು.

`ಗಾಂಧಿ ಟೋಪಿ ಹಾಕಿಕೊಂಡು ಶಾಲೆಗೆ ಬರುವುದೇ ಹೆಮ್ಮೆಯ ವಿಷಯ. ಈ ಪದ್ಧತಿ ನಮ್ಮಲ್ಲಿ ಶಿಸ್ತನ್ನು ರೂಢಿಸು ತ್ತದೆ. ಟೋಪಿಯು ಸಮವಸ್ತ್ರದ ಒಂದು ಭಾಗವಾಗಿದೆ~ ಎಂದು ಅನೇಕ ವಿದ್ಯಾರ್ಥಿಗಳು ಹೇಳುತ್ತಾರೆ.

ಈ ಶಾಲೆಯ ವಿದ್ಯಾರ್ಥಿನಿಯರು ಟೋಪಿ ಹಾಕಿಕೊಳ್ಳುವುದನ್ನು ಕಡ್ಡಾಯ ಮಾಡಿಲ್ಲ. ಆದರೆ, ತಮಗೂ ಟೋಪಿ ಹಾಕಿಕೊಳ್ಳುವಂತೆ ಸೂಚಿಸಿದರೆ ಒಳ್ಳೆಯದು ಎಂದು ಅನೇಕ ವಿದ್ಯಾರ್ಥಿನಿ ಯರು ಬಯಸುತ್ತಾರೆ.

ಅಲ್ಲದೆ, ಪಕ್ಕದಲ್ಲೇ ಇರುವ ಪ್ರೌಢಶಾಲೆಯಲ್ಲಿ ಓದುತ್ತಿರುವ 8ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು, `ನಮಗೂ ಗಾಂಧಿ ಟೋಪಿ ಹಾಕಿಕೊಳ್ಳು ವುದನ್ನು ಕಡ್ಡಾಯ ಮಾಡಿದರೆ ಚೆನ್ನಾಗಿರುತ್ತದೆ~ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT