ಯಲಹಂಕ: ಈಜಲು ಹೋದ ಬಾಲಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲ್ಲೂಕು ಅರಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಅರಕರೆ ಗ್ರಾಮದ ಉಮೇಶ್ – ಅನಿತಾ ದಂಪತಿಯ ಪುತ್ರ ನಾಗರಾಜ್(15) ಹಾಗೂ ಅದೇ ಗ್ರಾಮದ ಕೃಷ್ಣಪ್ಪ–ಪಾವರ್ತಮ್ಮ ದಂಪತಿಯ ಪುತ್ರ ಮನೋಹರ್(14) ಮೃತಪಟ್ಟವರು. ಕಾಕೋಳು ಸರ್ಕಾರಿ ಪ್ರೌಢಶಾಲೆಯಲ್ಲಿ ನಾಗರಾಜ್ 10ನೇ ಹಾಗೂ ಮನೋಹರ್ 9ನೇ ತರಗತಿ ಓದುತ್ತಿದ್ದರು.
ಮಂಗಳವಾರ ಶಾಲೆಗೆ ರಜೆಯಿದ್ದ ಕಾರಣ ಇವರಿಬ್ಬರೂ ಮತ್ತೊಬ್ಬ ಗೆಳೆಯನೊಂದಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಊರ ಹೊರಗಿರುವ ಕುಂಟೆಯ ಬಳಿ ಬಂದಿದ್ದರು. ಇತ್ತೀಚೆಗೆ ಸುರಿದ ಬಾರೀ ಮಳೆಯಿಂದ ತುಂಬಿದ್ದ ಕುಂಟೆಗೆ ಇಬ್ಬರೂ ಈಜಲು ಇಳಿದಿದ್ದಾರೆ. ಕ್ಷಣಾರ್ಧದಲ್ಲೇ ಆಳಕ್ಕೆ ಹೋಗಿ ಕೆಸರಿನಲ್ಲಿ ಸಿಲುಕಿದ್ದಾರೆ. ಆಗ ದಂಡೆಯ ಮೇಲೆ ಕುಳಿತಿದ್ದ ಮತ್ತೊಬ್ಬ ಗೆಳೆಯ ನೆರವಿಗಾಗಿ ಸ್ಥಳೀಯರನ್ನು ಕೂಗಿದ್ದಾನೆ. ಆದರೆ ಸ್ಥಳೀಯರು ಕುಂಟೆ ಬಳಿ ಬರುವಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.
ನಂತರ ಅಗ್ನಿಶಾಮಕ ಸಿಬ್ಬಂದಿ ಜತೆ ಸ್ಥಳಕ್ಕೆ ಬಂದ ರಾಜಾನುಕುಂಟೆ ಪೊಲೀಸರು ಶೋಧಕಾರ್ಯ ನಡೆಸಿ ಮೃತದೇಹಗಳನ್ನು ಹೊರತೆಗೆದರು. ಪೋಷಕರು ಮೃತ ಬಾಲಕರಿಬ್ಬರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.
ಎಚ್ಚರಿಕೆ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಸ್.ಆರ್.ವಿಶ್ವನಾಥ್ , ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದರು. ‘ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಕೆರೆ, ಕುಂಟೆಗಳು ತುಂಬಿಕೊಂಡಿವೆ. ಹೀಗಾಗಿ ಈಜಲು ಹೋಗುವ ಮಕ್ಕಳು ನೀರಿನಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ಬಗ್ಗೆ ಪೋಷಕರು ಎಚ್ಚರವಹಿಸಬೇಕು’ ಎಂದರು