ಮುಂಬೈ, (ಪಿಟಿಐ): ಗಲಭೆಪೀಡಿತ ಈಜಿಪ್ಟ್ನಿಂದ 300 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ.
ಭಯಭೀತರಾಗಿದ್ದ ಭಾರತೀಯರನ್ನು ಹೊತ್ತ ಏರ್ಇಂಡಿಯಾ ವಿಶೇಷ ವಿಮಾನ ಮಧ್ಯಾಹ್ನ ಇಲ್ಲಿಗೆ ಆಗಮಿಸಿತು.
ಈಜಿಪ್ಟ್ ಸರ್ಕಾರದ ವಿರುದ್ಧ ದೇಶದಾದ್ಯಂತ ಸಾರ್ವಜನಿಕರು ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿರುವುದರಿಂದ ಅಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಭಯಭೀತರಾಗಿದ್ದರು. ಅವರನ್ನು ಕರೆತರಲು ವಿಶೇಷವಾಗಿ ನಿಯೋಜಿಸಿದ್ದ ಬೋಯಿಂಗ್ 747-800 ವಿಮಾನವು ಭಾನುವಾರ ಕೈರೋಗೆ ತೆರಳಿ ಸೋಮವಾರ ಹಿಂತಿರುಗಿತು.
ಇನ್ನಷ್ಟು ಮಂದಿಯನ್ನು ಕರೆತರಲು ಏರ್ ಇಂಡಿಯಾ ಮತ್ತೆ ಸೋಮವಾರ ಇನ್ನೊಂದು ವಿಮಾನವನ್ನು ಕಳುಹಿಸಲು ನಿರ್ಧರಿಸಿದೆ.
ಪ್ರಸ್ತುತ ದೊರೆತಿರುವ ಅಂದಾಜಿನ ಪ್ರಕಾರ, ಪ್ರವಾಸಿಗರು ಸೇರಿದಂತೆ ಸುಮಾರು 600 ಭಾರತೀಯರು ಈಜಿಪ್ಟ್ನಲ್ಲಿರುವುದಾಗಿ ತಿಳಿದುಬಂದಿದೆ.