ಹುಬ್ಬಳ್ಳಿ: `ಉತ್ತರ ಕರ್ನಾಟಕ ಆಟೊ ಚಾಲಕರ ಸಂಘವನ್ನು ಕಟ್ಟುವ ಯೋಜನೆ ಇದೆ' ಎಂದು ಹುಬ್ಬಳ್ಳಿ ಆಟೊ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು.
ನಗರದ ಲಕ್ಷ್ಮಿ ವಾಣಿಜ್ಯ ಸಂಕೀರ್ಣದಲ್ಲಿಯ 3ನೇ ಮಹಡಿಯಲ್ಲಿ ಸಂಘದ ನೂತನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಕಳೆದ 6 ವರ್ಷಗಳಲ್ಲಿ 17 ಆಟೊ ಚಾಲಕರು ಮೃತಪಟ್ಟಿದ್ದು, ಅವರ ಕುಟುಂಬಗಳಿಗೆ ಆಟೊ ಚಾಲಕರ ಸಂಘದ ವತಿಯಿಂದ ತಲಾ ರೂ 30 ಸಾವಿರ ಪರಿಹಾರ ನೀಡಲಾಗಿದೆ. ಆಟೊ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇದರೊಂದಿಗೆ ಆಟೊ ಚಾಲಕರಿಗೆ ಸರ್ಕಾರದ ಸೌಲಭ್ಯಗಳನ್ನು ನಿರಂತರವಾಗಿ ಕೊಡಿಸಲು ಸಂಘ ಶ್ರಮಿಸಲಿದೆ' ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಧಾರವಾಡ ಶಹರ ಆಟೊ ಚಾಲಕರ ಸಂಘದ ಅಧ್ಯಕ್ಷ ಜೀವನ ಉತ್ಕುರಿ ಹಾಗೂ ಉದ್ಯಮಿ ಶ್ಯಾಮ್ ಬೆಕ್ಕಿನಕಣ್ಣವರ ಭಾಗವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಪುಂಡಲೀಕ ಬಡಿಗೇರ, ಸಂಘದ ಗೌರವ ಅಧ್ಯಕ್ಷ ಮುಸ್ತಾಕ್ ಕರ್ಜಗಿ, ಚಿದಾನಂದ ಸವದತ್ತಿ, ಬಸವರಾಜ ಉಣಕಲ್, ಲೋಕೇಶ ಚಿಕ್ಕಮಂಗಳೂರ, ಬಸವರಾಜ ಹುಡೇದ, ಅಂಬರೀಶ ಅಣೆ, ದುರ್ಗಪ್ಪ ಪೂಜಾರ, ಹನುಮಂತ ಮುಳುಗುಂದ, ಹಸನಸಾಬ್ ಬಡೇಖಾನ್ ಮೊದಲಾದವರು ಹಾಜರಿದ್ದರು.