ಡಿಸೆಂಬರ್ ೨೩, ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ. ಅವರ ಜನ್ಮ ದಿನವನ್ನು ದೇಶದಲ್ಲಿ ರೈತ ದಿನವೆಂದು ಪರಿಗಣಿಸಲಾಗಿದೆ. ಆಕಸ್ಮಿಕವೋ, ಉದ್ದೇಶಪೂರ್ವಕವೋ ಡಿಸೆಂಬರ್ ೨೩ರಂದು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಾವಣಗೆರೆ ಬಂದ್ಗೆ ಕರೆ ನೀಡಲಾಗಿತ್ತು. ಬಂದ್ ಬಹುತೇಕ ಯಶಸ್ವಿಯಾಯಿತೆಂದು ವರದಿಯಾಗಿದೆ.
ಕೃಷಿ ಚಟುವಟಿಕೆಗಳಿಗೆ ಆಡುಭಾಷೆಯಲ್ಲಿ ‘ಆರಂಬ’ ಎಂದು ಕರೆಯುತ್ತಾರೆ. ಕೃಷಿ ಚಟುವಟಿಕೆಗಳು ನಿರಂತರವಾಗಿ ವರ್ಷಪೂರ್ತಿ ನಡೆಯುತ್ತವೆ. ಅದಕ್ಕೆ ಒಂದು ಪೂರ್ಣವಿರಾಮ ಇರು-ವುದಿಲ್ಲ. ಬಿಸಿಲು, ಮಳೆ, ಚಳಿ ಯಾವುದನ್ನೂ ಲೆಕ್ಕಿಸದೆ ರಜೆಯೂ ಇಲ್ಲದೆ ರೈತರು ದುಡಿಯುತ್ತಾರೆ. ಪ್ರತಿ ದುಡಿಮೆಗೂ ಸಂಬಳ, ಭತ್ಯೆ, ಕಮಿಷನ್, ದಿನಗೂಲಿ - ಹೀಗೆ ಯಾವುದಾದರೂ ಒಂದು ರೂಪದಲ್ಲಿ ಪ್ರತಿಫಲವಾಗಿ ಹಣ ಕೈಗೆ ಬರುತ್ತದೆ.
ಆದರೆ ರೈತ, ಹಣದ ಮುಖ ನೋಡುವುದು ಕೃಷಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟವಾದ ನಂತರ. ಯಾವುದೇ ಸರ್ಕಾರ ಆಡಳಿತ ನಡೆಸುತ್ತಿದ್ದಾಗ ಪ್ರತಿಪಕ್ಷಗಳು ಸರ್ಕಾರವನ್ನು ‘ರೈತ ವಿರೋಧಿ’ ಎಂದೇ ಹೇಳುತ್ತವಾದರೂ ಆಡಳಿತಾರೂಢ ಸರ್ಕಾರ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರುವುದಕ್ಕೆ ಮೊದಲೇ ವೈಜ್ಞಾನಿಕ ಬೆಲೆ ನಿಗದಿಪಡಿಸುವಲ್ಲಿ, ಖರೀದಿ ಕೇಂದ್ರಗಳನ್ನು ತೆರೆ
ಯುವಲ್ಲಿ ತಡಮಾಡುತ್ತದೆ, ಇಲ್ಲವೇ ರೈತರ ಪ್ರತಿಭಟನೆಯಾಗುವರೆಗೂ ಆ ಬಗ್ಗೆ ಗಮನ ಹರಿಸುವುದಿಲ್ಲ.
ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರಗಳನ್ನು ತೆರೆಯುವುದು, ವೈಜ್ಞಾನಿಕ ಬೆಲೆ ನಿಗದಿ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದರೆ, ಅದನ್ನು ಸರ್ಕಾರಗಳು ರೈತರಿಗೆ ಮಾಡುತ್ತಿರುವ ಉಪಕಾರ ಎಂದು ಭಾವಿಸಿವೆ! ಸುಗ್ಗಿ ಹಂಗಾಮಿನಲ್ಲಿ ಭತ್ತ, ಜೋಳ, ಮುಸುಕಿನ ಜೋಳ, ತೊಗರಿ ಮುಂತಾದ ಬೆಳೆಗಳು ಕಟಾವಿನ ನಂತರ ಒಟ್ಟಿಗೆ ಮಾರುಕಟ್ಟೆಗೆ ಬರುವುದರಿಂದ, ಆವಕ ಹೆಚ್ಚಾಗಿ ಸಹಜವಾಗಿ ದರ ಕುಸಿಯುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಪರಿಣತಿ ಬೇಕಾಗಿಲ್ಲ.
ರೈತರು ಸಾಲ ಮಾಡಿ ಬೆಳೆ ಬೆಳೆದು ಮಾರುಕಟ್ಟೆಗೆ ಬಂದು ಕೃಷಿ ಉತ್ಪನ್ನಗಳನ್ನು ಸಿಕ್ಕಿದಷ್ಟು ದರಕ್ಕೆ ಮಾರುವ ಒತ್ತಡದಲ್ಲಿರುತ್ತಾರೆ. ಅಂತಹ ಸಮಯದಲ್ಲಿ ಯಾವುದೇ ಸರ್ಕಾರವಿದ್ದರೂ– ಶೈಕ್ಷಣಿಕ ವೇಳಾಪಟ್ಟಿ ಇರುವಂತೆ ಕೃಷಿ ಮಾರುಕಟ್ಟೆಗೂ ಒಂದು ವೇಳಾಪಟ್ಟಿ ಮಾಡಿ, ಹೆಚ್ಚಿನ ಆವಕವನ್ನು ಸರ್ಕಾರವೇ ಖರೀದಿಸಿ ನಂತರ ಪ್ರತಿ ತಿಂಗಳೂ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯ ಬಗೆಗೂ ಯೋಚಿಸಬಹುದು.
ಹಿಂದಿನ ವಾರದ ಪತ್ರಿಕೆಗಳಲ್ಲಿ ದ್ರಾಕ್ಷಿ, ತೊಗರಿ, ಮುಸುಕಿನಜೋಳ, ಭತ್ತ ಇತ್ಯಾದಿ ಬೆಳೆಗಳು ಹಿಂದಿನ ವರ್ಷಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗಿರುವುದಾಗಿ ವರದಿಯಾಗಿದೆ. ಹುಣಿಸೆಹಣ್ಣು ೨೦೧೨ರ ಬೆಲೆಗಿಂತ ಕಡಿಮೆ ಬೆಲೆಗೆ ೨೦೧೩ರ ಫೆಬ್ರುವರಿಯಲ್ಲಿ ಮಾರಾಟವಾಗಿತ್ತು. ಕೃಷಿ ಕಾರ್ಮಿಕರು ಸಿಗುವುದೇ ದುಸ್ತರವಾಗಿರುವ ಈ ದಿನಗಳಲ್ಲಿ ಕಾರ್ಮಿಕರು ಕೇಳಿದಷ್ಟು ಕೂಲಿ ಕೊಡಬೇಕಾಗಿದೆ. ಆದರೆ ಕೃಷಿ ಉತ್ಪನಗಳ ಬೆಲೆ ಮಾರುಕಟ್ಟೆಯಲ್ಲಿ ಕುಸಿಯುವುದು ಸೋಜಿಗವೇ ಸರಿ.
ಪ್ರತಿಯೊಂದು ಬೆಳೆಯೂ ಇದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಒಬ್ಬ ಕೃಷಿಕಳಾಗಿ ನಾನು ಸಾಕಷ್ಟು ವರ್ಷಗಳಿಂದ ಗಮನಿಸುತ್ತಿರುವಂತೆ ವಿವಿಧ ರೀತಿಯ ಲಾಬಿಗಳು ರೈತರ ವಿರುದ್ಧವಾಗಿ ಸದ್ದಿಲ್ಲದೆ ಕೆಲಸ ಮಾಡುತ್ತಿವೆ. ರೈತರ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚವೂ ಸಿಗದಂತೆ ನೋಡಿಕೊಳ್ಳುತ್ತಿವೆ. ಹೀಗಾಗಿ ರೈತರು ಪ್ರತಿಯೊಂದು ಕೃಷಿ ಉತ್ಪಾದನೆಯಲ್ಲೂ ನಷ್ಟವನ್ನು ಅನುಭವಿಸಿ ಕೃಷಿಯನ್ನೇ ನಂಬಿಕೊಂಡು ಜೀವನ ನಿರ್ವಹಣೆ ಮಾಡುವುದು ಕಷ್ಟ ಎನ್ನುವ ಸ್ಥಿತಿಗೆ ಬಂದಿದ್ದಾರೆ.
ಕರ್ನಾಟಕದಲ್ಲಿ ಭತ್ತದ ಹಂಗಾಮು ಆರಂಭವಾಗುವ ಸ್ವಲ್ಪದಿನಗಳ ಮೊದಲು ಬಾಸುಮತಿಯೇತರ ಸಣ್ಣ ಅಕ್ಕಿಯ ರಫ್ತನ್ನು ನಿಷೇಧಿಸಲು ಚಿಂತಿಸಲಾಗುತ್ತಿದೆ ಎಂಬ ಹೇಳಿಕೆಯೊಂದು ಕೃಷಿ ಸಚಿವಾಲಯದಿಂದ ಹೊರ ಬೀಳುತ್ತದೆ. ದಾಸ್ತಾನುಗಾರರು, ಅಕ್ಕಿಗಿರಣಿ ಮಾಲೀಕರು ಇದೇ ನೆಪ ಒಡ್ಡಿ ಸುಗ್ಗಿಯ ಸಮಯದಲ್ಲಿ ರೈತರ ಬಳಿ ಕಡಿಮೆ ದರದಲ್ಲಿ ಭತ್ತ ಖರೀದಿಸಿ ಸಂಗ್ರಹಿಸುತ್ತಾರೆ.
ಆದರೆ ಮುಂದೆ ಯಾವುದೇ ರಫ್ತು ನಿಷೇಧವೂ ಜಾರಿಯಾಗದೆ, ಅಕ್ಕಿ ಧಾರಣೆ ಏರಿಕೆಯಾಗಿ ವರ್ತಕರು ಲಾಭ ಮಾಡಿಕೊಳ್ಳಲು ಕಾರಣವಾಗುತ್ತದೆ. ಭತ್ತಕ್ಕೆ ಬೆಂಬಲ ಬೆಲೆ ಎಂದು ಸರ್ಕಾರಗಳು ದರ ನಿಗದಿ ಮಾಡಿದರೂ ಅದರ ಬೆಲೆ ಭತ್ತದ ಉತ್ಪಾದನಾ ವೆಚ್ಚ ಹಾಗೂ ಮಾರುಕಟ್ಟೆ ಬೆಲೆಗಿಂತ ಕಡಿಮೆಯಾಗಿಯೇ ಇರುತ್ತದೆ.
ಕೆಲವು ವರ್ಷಗಳ ಹಿಂದೆ ಕರ್ನಾಟಕ ರೇಷ್ಮೆನಾಡು ಎಂದೇ ಕರೆಸಿಕೊಳ್ಳುತ್ತಿತ್ತು. ರೇಷ್ಮೆ ಕೃಷಿ ಬಗ್ಗೆ ನಿರಂತರ ಸಂಶೋಧನೆಗಳು ನಡೆದು ರೈತರಿಗೆ ಕರ್ನಾಟಕ ಸರ್ಕಾರ ಪ್ರೋತ್ಸಾಹ ನೀಡುತ್ತಿತ್ತು. ರೇಷ್ಮೆ ಕೃಷಿ ವಿಸ್ತರಣೆಯನ್ನೂ ಸಮರ್ಪಕವಾಗಿ ನಿರ್ವಹಿಸಿ ಅನೇಕ ಕೃಷಿ ಕುಟುಂಬಗಳು ವಾಣಿಜ್ಯ ಬೆಳೆಯಾಗಿ ರೇಷ್ಮೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾಗಲೇ ಕೇಂದ್ರ ಸರ್ಕಾರವು ಚೀನಾದಿಂದ ಆಮದಾಗುವ ರೇಷ್ಮೆ ನೂಲಿನ ಮೇಲಿನ ಸುಂಕವನ್ನು ತಗ್ಗಿಸಿತು.
ಹೀಗಾಗಿ ರೇಷ್ಮೆ ಕೃಷಿಯಲ್ಲಿ (ಗೂಡು ಉತ್ಪಾದನೆ) ತೊಡಗಿ-ದ್ದವರಿಗೆ ತೀವ್ರ ಹಿನ್ನಡೆ ಉಂಟಾ-ಯಿತು. ನಂತರದ ದಿನಗಳಲ್ಲಿ ರೇಷ್ಮೆ ಕೃಷಿ ನೆಲಕಚ್ಚಿತು. ಬಳಿಕ ಎಷ್ಟೇ ಬೆಂಬಲ ನೀಡಿದರೂ ಮತ್ತೆ ರೇಷ್ಮೆ ಕೃಷಿ ಉಚ್ಛ್ರಾಯ ಸ್ಥಿತಿಗೆ ಬರಲಾಗಲಿಲ್ಲ. ಅದನ್ನು ನಂಬಿ ಜೀವನ ಸಾಗಿಸುತ್ತಿದ್ದವರು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು.
ಆಗ ಹೈನುಗಾರಿಕೆಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದ್ದುದರಿಂದ ಕೃಷಿ ಜೊತೆಯಲ್ಲಿ ಆಧುನಿಕ ರೀತಿಯ ಕ್ರಮಗಳನ್ನು ಅಳವಡಿಸಿಕೊಂಡು ಬಹುತೇಕರು ಹೈನುಗಾರಿಕೆಯಲ್ಲಿ ತೊಡಗಿಕೊಂಡರು. ಹಾಲು ಉತ್ಪಾದಕರ ಸಹಕಾರ ಸಂಘಗಳು ಹಳ್ಳಿ ಹಳ್ಳಿಯಲ್ಲೂ ಆರಂಭಗೊಂಡು ಹಾಲು ಉತ್ಪಾದಕರಿಗೆ ಹಾಲು ಮಾರಾಟಕ್ಕೆ ಅನುಕೂಲವಾಯಿತು. ವಾರಕ್ಕೊಮ್ಮೆ ಸಂಘಗಳಿಂದ ಹಣವೂ ಬರುತ್ತಿದ್ದುದರಿಂದ ಹೆಚ್ಚೂ ಕಡಿಮೆ ಪ್ರತಿ ಕುಟುಂಬವೂ ಹೈನುಗಾರಿಕೆಯಲ್ಲಿ ತೊಡಗಿತು.
ಹಾಲು ಒಕ್ಕೂಟಕ್ಕೆ ಹಾಲಿನ ಹೊಳೆಯೇ ಹರಿದು ಬಂದು ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ, ನೂರಾರು ಟನ್ಗಟ್ಟಲೆ ಹಾಲಿನ ಪುಡಿ ಸಂಗ್ರಹವಾಗಿ, ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ ಸರ್ಕಾರ, ಭಾರತದಲ್ಲಿ ಕುಪೋಷಣೆ ಇದೆ ಎಂಬ ನೆಪದಿಂದ ಹಾಲಿನ ಪುಡಿ ರಫ್ತು ನಿಷೇಧಿಸಿತು. ಒಕ್ಕೂಟಗಳಲ್ಲಿ ಸಂಗ್ರಹಗೊಂಡ ಹಾಲಿನ ಪುಡಿಯನ್ನು ಕೇಂದ್ರ ಸರ್ಕಾರವೂ ಖರೀದಿಸದೆ ಹಾಲು ಒಕ್ಕೂಟಗಳಿಗೆ ನಷ್ಟ ಉಂಟಾಗಿ ಲೀಟರ್ ಹಾಲಿಗೆ ₨ ೨೪ ಇದ್ದ ಸಂಗ್ರಹಣಾ ಬೆಲೆಯನ್ನು ₨ ೧೮ ಕ್ಕೆ ಇಳಿಸಲಾಯಿತು. ಸರ್ಕಾರಗಳು ಪ್ರೋತ್ಸಾಹಧನವನ್ನು ಪ್ರಕಟಿಸಿದ್ದರೂ ಕಳೆದ ಎಂಟು ತಿಂಗಳಿಂದ ಆ ಹಣವೂ ಬಂದಿಲ್ಲ. ಹಾಗಾಗಿ ಹೈನುಗಾರಿಕೆ ಸಹ ರೈತರ ಜೀವನ ಕಟ್ಟಿಕೊಡಲು ವಿಫಲವಾಯಿತು.
ಹಿಂದೆ ತೆಂಗಿನ ಬೆಳೆಗೆ ನುಸಿ ರೋಗ ಬಂದು ಬೆಳೆಗಾರರು ಕಂಗಾಲಾಗಿದ್ದಾಗ ಸರ್ಕಾರ ನೀರಾ ಉತ್ಪಾದಿಸಲು ಅನುಮತಿ ನೀಡಿತ್ತು. ಆದರೆ ಆ ನೀರಾವನ್ನು ತೋಟಗಳಲ್ಲೇ ಮಾರುವಂತೆ ಒತ್ತಡ ಹೇರಲಾಗಿತ್ತು. ಎಲ್ಲಾ ತೋಟಗಳಲ್ಲೂ ನೀರಾ ಇಳಿಸಿದರೆ ಅಷ್ಟೂ ನೀರಾ ಮಾರಾಟವಾಗುವುದು ಸಾಧ್ಯವಾಗುತ್ತಿರಲಿಲ್ಲ. ಇದರ ದುರ್ಲಾಭವನ್ನು ಪಡೆದ ಪೊಲೀಸ್ ಮತ್ತು ಅಬಕಾರಿ ಸಿಬ್ಬಂದಿ, ಆಗ ಇದ್ದ ಸಾರಾಯಿ ಲಾಬಿಯೊಂದಿಗೆ ಸೇರಿ, ನೀರಾ ಸಾಗಾಣಿಕೆಗೆ ಸರ್ಕಾರ ಅನುಮತಿಯನ್ನು ನೀಡಿಲ್ಲವೆಂದು ನೀರಾ ಇಳಿಸುವ ತೆಂಗು ಬೆಳೆಗಾರರಿಗೆ ಇನ್ನಿಲ್ಲದ ಕಿರುಕುಳ ನೀಡಿತು.
ಇದೇ ರೀತಿಯ ಶೋಷಣೆ ರೈತರಿಗೆ ತರಕಾರಿ ಬೆಳೆಗಳಲ್ಲಿ, ಔಷಧಿ ಸಸ್ಯಗಳ ಬೆಳೆಗಳಲ್ಲಿ, ತೋಟಗಾರಿಕೆ ಬೆಳೆಗಳಲ್ಲಿ ನಿರಂತರವಾಗಿ ಆಗುತ್ತಿದೆ. ಸರ್ಕಾರಗಳು ರೈತರಿಗೆ ಕೆಲವು ಉಚಿತ ಸವಲತ್ತುಗಳ ಆಸೆ ತೋರಿಸಿ ಅವರನ್ನು ಧ್ವನಿ ಇಲ್ಲದವರಂತೆ ಮಾಡಿವೆ. ಇತ್ತ ಕೃಷಿಯನ್ನು ಬಿಡಲಾಗದೆ, ಅತ್ತ ಜೀವನೋಪಾಯಕ್ಕಾಗಿ ಪರ್ಯಾಯ ಮಾರ್ಗವೂ ತೋಚದೆ ರೈತರು ನಿರಂತರವಾಗಿ ಒತ್ತಡದಲ್ಲಿ ಇರುವಂತಾಗಿದೆ.
–ಸಿ.ಎಸ್. ಅನುರಾಧ, ರಾಯರಹುಂಡಿ, ಟಿ. ನರಸೀಪುರ ತಾಲ್ಲೂಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.