ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಚಿತ ಸವಲತ್ತಿನ ಆಮಿಷದಡಿ ಉಡುಗಿದ ‘ಧ್ವನಿ’

ಅಕ್ಷರ ಗಾತ್ರ

ಡಿಸೆಂಬರ್ ೨೩, ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ. ಅವರ ಜನ್ಮ ದಿನವನ್ನು ದೇಶ­ದಲ್ಲಿ ರೈತ ದಿನವೆಂದು ಪರಿಗಣಿಸಲಾಗಿದೆ. ಆಕಸ್ಮಿಕವೋ, ಉದ್ದೇಶಪೂರ್ವಕವೋ ಡಿಸೆಂಬರ್ ೨೩ರಂದು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗ­ದಿಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು­­ಕೊಂಡು ದಾವಣಗೆರೆ ಬಂದ್‌ಗೆ ಕರೆ ನೀಡ­ಲಾಗಿತ್ತು. ಬಂದ್ ಬಹುತೇಕ ಯಶಸ್ವಿ­ಯಾಯಿ­ತೆಂದು ವರದಿಯಾಗಿದೆ.

ಕೃಷಿ ಚಟುವಟಿಕೆಗಳಿಗೆ ಆಡುಭಾಷೆಯಲ್ಲಿ ‘ಆರಂಬ’ ಎಂದು ಕರೆಯುತ್ತಾರೆ. ಕೃಷಿ ಚಟು­ವಟಿ­ಕೆಗಳು ನಿರಂತರವಾಗಿ ವರ್ಷಪೂರ್ತಿ ನಡೆ­ಯು­ತ್ತವೆ. ಅದಕ್ಕೆ ಒಂದು ಪೂರ್ಣವಿರಾಮ ಇರು­-ವು­ದಿಲ್ಲ. ಬಿಸಿಲು, ಮಳೆ, ಚಳಿ ಯಾವುದನ್ನೂ ಲೆಕ್ಕಿ­ಸದೆ ರಜೆಯೂ ಇಲ್ಲದೆ ರೈತರು  ದುಡಿ­ಯು­ತ್ತಾರೆ. ಪ್ರತಿ ದುಡಿಮೆಗೂ ಸಂಬಳ, ಭತ್ಯೆ, ಕಮಿಷನ್, ದಿನಗೂಲಿ - ಹೀಗೆ ಯಾವುದಾದರೂ ಒಂದು ರೂಪದಲ್ಲಿ ಪ್ರತಿಫಲವಾಗಿ ಹಣ ಕೈಗೆ ಬರು­ತ್ತದೆ.

ಆದರೆ ರೈತ, ಹಣದ ಮುಖ ನೋಡು­ವುದು ಕೃಷಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಾರಾಟ­ವಾದ ನಂತರ. ಯಾವುದೇ ಸರ್ಕಾರ ಆಡಳಿತ ನಡೆಸುತ್ತಿ­ದ್ದಾಗ ಪ್ರತಿಪಕ್ಷಗಳು ಸರ್ಕಾರವನ್ನು ‘ರೈತ ವಿರೋಧಿ’ ಎಂದೇ ಹೇಳುತ್ತವಾದರೂ ಆಡಳಿತಾ­ರೂಢ ಸರ್ಕಾರ ಕೃಷಿ ಉತ್ಪನ್ನಗಳು ಮಾರುಕಟ್ಟೆಗೆ ಬರು­ವುದಕ್ಕೆ ಮೊದಲೇ ವೈಜ್ಞಾನಿಕ ಬೆಲೆ ನಿಗದಿ­ಪಡಿಸುವಲ್ಲಿ, ಖರೀದಿ ಕೇಂದ್ರಗಳನ್ನು ತೆರೆ
ಯು­­­ವಲ್ಲಿ ತಡಮಾಡುತ್ತದೆ, ಇಲ್ಲವೇ ರೈತರ ಪ್ರತಿ­­­ಭಟನೆಯಾಗುವರೆಗೂ ಆ ಬಗ್ಗೆ ಗಮನ ಹರಿಸು­­ವುದಿಲ್ಲ.

ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರ­­ಗಳನ್ನು ತೆರೆ­ಯುವುದು, ವೈಜ್ಞಾನಿಕ ಬೆಲೆ ನಿಗದಿ ಮಾಡು­­ವುದು ಸರ್ಕಾರದ ಜವಾಬ್ದಾರಿಯಾ­ಗಿದೆ. ಆದರೆ, ಅದನ್ನು ಸರ್ಕಾರಗಳು ರೈತ­ರಿಗೆ ಮಾಡು­­ತ್ತಿರುವ ಉಪಕಾರ ಎಂದು ಭಾವಿಸಿವೆ! ಸುಗ್ಗಿ ಹಂಗಾಮಿನಲ್ಲಿ ಭತ್ತ, ಜೋಳ, ಮುಸುಕಿನ ಜೋಳ, ತೊಗರಿ ಮುಂತಾದ ಬೆಳೆಗಳು ಕಟಾವಿನ ನಂತರ ಒಟ್ಟಿಗೆ ಮಾರು­ಕಟ್ಟೆಗೆ ಬರುವುದರಿಂದ, ಆವಕ ಹೆಚ್ಚಾಗಿ ಸಹಜವಾಗಿ ದರ ಕುಸಿಯುತ್ತದೆ. ಇದನ್ನು ಅರ್ಥ ಮಾಡಿಕೊಳ್ಳಲು ವಿಶೇಷ ಪರಿಣತಿ ಬೇಕಾಗಿಲ್ಲ.

ರೈತರು ಸಾಲ ಮಾಡಿ ಬೆಳೆ ಬೆಳೆದು ಮಾರು­ಕಟ್ಟೆಗೆ ಬಂದು ಕೃಷಿ ಉತ್ಪನ್ನಗಳನ್ನು ಸಿಕ್ಕಿದಷ್ಟು ದರಕ್ಕೆ ಮಾರುವ ಒತ್ತಡದಲ್ಲಿರುತ್ತಾರೆ. ಅಂತಹ ಸಮಯದಲ್ಲಿ ಯಾವುದೇ ಸರ್ಕಾರವಿದ್ದರೂ– ಶೈಕ್ಷಣಿಕ ವೇಳಾಪಟ್ಟಿ ಇರುವಂತೆ ಕೃಷಿ ಮಾರು­ಕಟ್ಟೆಗೂ ಒಂದು ವೇಳಾಪಟ್ಟಿ ಮಾಡಿ, ಹೆಚ್ಚಿನ ಆವಕವನ್ನು ಸರ್ಕಾರವೇ ಖರೀದಿಸಿ ನಂತರ ಪ್ರತಿ ತಿಂಗಳೂ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಯ ಬಗೆಗೂ ಯೋಚಿಸ­ಬಹುದು.

ಹಿಂದಿನ ವಾರದ ಪತ್ರಿಕೆಗಳಲ್ಲಿ ದ್ರಾಕ್ಷಿ, ತೊಗರಿ, ಮುಸುಕಿನಜೋಳ, ಭತ್ತ ಇತ್ಯಾದಿ ಬೆಳೆ­ಗಳು ಹಿಂದಿನ ವರ್ಷಕ್ಕಿಂತ ಕಡಿಮೆ ಬೆಲೆಗೆ ಮಾರಾಟ­ವಾಗಿರುವುದಾಗಿ ವರದಿಯಾಗಿದೆ. ಹುಣಿಸೆ­­ಹಣ್ಣು ೨೦೧೨ರ ಬೆಲೆಗಿಂತ ಕಡಿಮೆ ಬೆಲೆಗೆ ೨೦೧೩ರ ಫೆಬ್ರುವರಿಯಲ್ಲಿ ಮಾರಾಟ­ವಾಗಿತ್ತು. ಕೃಷಿ ಕಾರ್ಮಿಕರು ಸಿಗುವುದೇ ದುಸ್ತರ­ವಾಗಿರುವ ಈ ದಿನಗಳಲ್ಲಿ ಕಾರ್ಮಿಕರು ಕೇಳಿ­ದಷ್ಟು ಕೂಲಿ ಕೊಡಬೇಕಾಗಿದೆ. ಆದರೆ ಕೃಷಿ ಉತ್ಪನ­ಗಳ ಬೆಲೆ ಮಾರುಕಟ್ಟೆಯಲ್ಲಿ ಕುಸಿಯು­ವುದು ಸೋಜಿಗವೇ ಸರಿ.   

ಪ್ರತಿಯೊಂದು ಬೆಳೆಯೂ ಇದೇ ಸಮಸ್ಯೆಯ ಸುಳಿ­ಯಲ್ಲಿ ಸಿಲುಕಿದೆ. ಒಬ್ಬ ಕೃಷಿಕಳಾಗಿ ನಾನು ಸಾಕಷ್ಟು ವರ್ಷಗಳಿಂದ ಗಮನಿಸುತ್ತಿರುವಂತೆ ವಿವಿಧ ರೀತಿಯ ಲಾಬಿಗಳು ರೈತರ ವಿರುದ್ಧವಾಗಿ ಸದ್ದಿಲ್ಲದೆ ಕೆಲಸ ಮಾಡುತ್ತಿವೆ. ರೈತರ ಉತ್ಪನ್ನ­ಗಳಿಗೆ ಉತ್ಪಾದನಾ ವೆಚ್ಚವೂ ಸಿಗದಂತೆ ನೋಡಿ­ಕೊಳ್ಳುತ್ತಿವೆ. ಹೀಗಾಗಿ ರೈತರು ಪ್ರತಿಯೊಂದು ಕೃಷಿ ಉತ್ಪಾದನೆಯಲ್ಲೂ ನಷ್ಟವನ್ನು ಅನುಭವಿಸಿ ಕೃಷಿ­ಯನ್ನೇ ನಂಬಿಕೊಂಡು ಜೀವನ ನಿರ್ವ­ಹಣೆ ಮಾಡುವುದು ಕಷ್ಟ ಎನ್ನುವ ಸ್ಥಿತಿಗೆ ಬಂದಿದ್ದಾರೆ. 

ಕರ್ನಾಟಕದಲ್ಲಿ ಭತ್ತದ  ಹಂಗಾಮು ಆರಂಭ­ವಾಗುವ ಸ್ವಲ್ಪದಿನಗಳ ಮೊದಲು ಬಾಸುಮತಿ­ಯೇತರ ಸಣ್ಣ ಅಕ್ಕಿಯ ರಫ್ತನ್ನು ನಿಷೇಧಿಸಲು ಚಿಂತಿಸ­­ಲಾಗುತ್ತಿದೆ ಎಂಬ ಹೇಳಿಕೆಯೊಂದು ಕೃಷಿ ಸಚಿವಾಲಯದಿಂದ ಹೊರ ಬೀಳುತ್ತದೆ. ದಾಸ್ತಾನು­ಗಾರರು, ಅಕ್ಕಿಗಿರಣಿ ಮಾಲೀಕರು ಇದೇ ನೆಪ ಒಡ್ಡಿ ಸುಗ್ಗಿಯ ಸಮಯದಲ್ಲಿ ರೈತರ ಬಳಿ ಕಡಿಮೆ ದರದಲ್ಲಿ ಭತ್ತ ಖರೀದಿಸಿ ಸಂಗ್ರಹಿ­ಸುತ್ತಾರೆ.

ಆದರೆ ಮುಂದೆ ಯಾವುದೇ ರಫ್ತು ನಿಷೇಧವೂ ಜಾರಿಯಾಗದೆ, ಅಕ್ಕಿ ಧಾರಣೆ ಏರಿಕೆಯಾಗಿ ವರ್ತಕರು ಲಾಭ ಮಾಡಿಕೊಳ್ಳಲು ಕಾರಣ­ವಾಗುತ್ತದೆ. ಭತ್ತಕ್ಕೆ ಬೆಂಬಲ ಬೆಲೆ ಎಂದು ಸರ್ಕಾರಗಳು ದರ ನಿಗದಿ ಮಾಡಿದರೂ ಅದರ ಬೆಲೆ ಭತ್ತದ ಉತ್ಪಾದನಾ ವೆಚ್ಚ ಹಾಗೂ ಮಾರು­ಕಟ್ಟೆ ಬೆಲೆಗಿಂತ ಕಡಿಮೆಯಾಗಿಯೇ ಇರುತ್ತದೆ.

ಕೆಲವು ವರ್ಷಗಳ ಹಿಂದೆ ಕರ್ನಾಟಕ ರೇಷ್ಮೆ­ನಾಡು ಎಂದೇ ಕರೆಸಿಕೊಳ್ಳುತ್ತಿತ್ತು. ರೇಷ್ಮೆ ಕೃಷಿ ಬಗ್ಗೆ ನಿರಂತರ ಸಂಶೋಧನೆಗಳು ನಡೆದು ರೈತ­ರಿಗೆ ಕರ್ನಾಟಕ ಸರ್ಕಾರ ಪ್ರೋತ್ಸಾಹ ನೀಡು­ತ್ತಿತ್ತು. ರೇಷ್ಮೆ ಕೃಷಿ ವಿಸ್ತರಣೆ­ಯನ್ನೂ ಸಮ­ರ್ಪಕ­­ವಾಗಿ ನಿರ್ವಹಿಸಿ ಅನೇಕ ಕೃಷಿ ಕುಟುಂಬ­ಗಳು ವಾಣಿಜ್ಯ ಬೆಳೆಯಾಗಿ ರೇಷ್ಮೆ­ಯನ್ನೇ ಅವಲಂಬಿಸಿ ಜೀವನ ಸಾಗಿ­ಸು­ತ್ತಿದ್ದಾಗಲೇ ಕೇಂದ್ರ ಸರ್ಕಾರವು ಚೀನಾದಿಂದ ಆಮದಾಗುವ ರೇಷ್ಮೆ ನೂಲಿನ ಮೇಲಿನ ಸುಂಕವನ್ನು ತಗ್ಗಿಸಿತು.

ಹೀಗಾಗಿ ರೇಷ್ಮೆ ಕೃಷಿಯಲ್ಲಿ (ಗೂಡು ಉತ್ಪಾ­ದನೆ) ತೊಡಗಿ-ದ್ದ­ವ­ರಿಗೆ ತೀವ್ರ ಹಿನ್ನಡೆ ಉಂಟಾ-­ಯಿತು. ನಂತರದ ದಿನ­ಗಳಲ್ಲಿ ರೇಷ್ಮೆ ಕೃಷಿ ನೆಲ­ಕಚ್ಚಿತು. ಬಳಿಕ ಎಷ್ಟೇ ಬೆಂಬ­ಲ ನೀಡಿದರೂ ಮತ್ತೆ ರೇಷ್ಮೆ ಕೃಷಿ ಉಚ್ಛ್ರಾ­ಯ ಸ್ಥಿತಿಗೆ ಬರಲಾಗಲಿಲ್ಲ. ಅದನ್ನು ನಂಬಿ ಜೀವನ ಸಾಗಿಸು­ತ್ತಿದ್ದವರು ಪರ್ಯಾಯ ಮಾರ್ಗ­­­ವನ್ನು ಕಂಡು­ಕೊಳ್ಳ­ಬೇಕಾ­­­ಯಿತು.

ಆಗ ಹೈನುಗಾರಿಕೆಗೆ ಸಾಕಷ್ಟು ಪ್ರೋತ್ಸಾಹ ದೊರೆ­ಯುತ್ತಿದ್ದುದರಿಂದ ಕೃಷಿ ಜೊತೆಯಲ್ಲಿ ಆಧುನಿಕ ರೀತಿಯ ಕ್ರಮಗಳನ್ನು ಅಳ­ವಡಿಸಿ­ಕೊಂಡು ಬಹುತೇಕರು ಹೈನುಗಾರಿಕೆಯಲ್ಲಿ ತೊಡಗಿ­ಕೊಂಡರು. ಹಾಲು ಉತ್ಪಾದಕರ ಸಹ­ಕಾರ ಸಂಘಗಳು ಹಳ್ಳಿ ಹಳ್ಳಿಯಲ್ಲೂ ಆರಂಭ­ಗೊಂಡು ಹಾಲು ಉತ್ಪಾದಕರಿಗೆ ಹಾಲು ಮಾರಾಟಕ್ಕೆ ಅನುಕೂಲವಾಯಿತು. ವಾರ­ಕ್ಕೊಮ್ಮೆ ಸಂಘಗಳಿಂದ ಹಣವೂ ಬರು­ತ್ತಿದ್ದು­ದರಿಂದ ಹೆಚ್ಚೂ ಕಡಿಮೆ ಪ್ರತಿ ಕುಟುಂಬ­ವೂ ಹೈನುಗಾರಿಕೆಯಲ್ಲಿ ತೊಡಗಿತು.

ಹಾಲು ಒಕ್ಕೂಟಕ್ಕೆ ಹಾಲಿನ ಹೊಳೆಯೇ ಹರಿದು ಬಂದು ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ಪರಿ­ವರ್ತಿಸಿ, ನೂರಾರು ಟನ್‌ಗಟ್ಟಲೆ ಹಾಲಿನ ಪುಡಿ ಸಂಗ್ರಹ­ವಾಗಿ, ವಿದೇಶಗಳಿಗೆ ರಫ್ತು ಮಾಡ­ಲಾಗುತ್ತಿತ್ತು. ಆದರೆ ಸರ್ಕಾರ, ಭಾರತದಲ್ಲಿ ಕುಪೋಷಣೆ ಇದೆ ಎಂಬ ನೆಪದಿಂದ ಹಾಲಿನ ಪುಡಿ ರಫ್ತು ನಿಷೇಧಿಸಿತು. ಒಕ್ಕೂಟಗಳಲ್ಲಿ ಸಂಗ್ರಹ­ಗೊಂಡ ಹಾಲಿನ ಪುಡಿಯನ್ನು ಕೇಂದ್ರ ಸರ್ಕಾರವೂ ಖರೀದಿ­ಸದೆ ಹಾಲು ಒಕ್ಕೂಟಗಳಿಗೆ ನಷ್ಟ ಉಂಟಾಗಿ ಲೀಟರ್ ಹಾಲಿಗೆ ₨  ೨೪ ಇದ್ದ ಸಂಗ್ರ­ಹಣಾ ಬೆಲೆಯನ್ನು ₨ ೧೮ ಕ್ಕೆ ಇಳಿಸ­ಲಾಯಿತು. ಸರ್ಕಾರಗಳು ಪ್ರೋತ್ಸಾಹಧನವನ್ನು ಪ್ರಕಟಿಸಿ­ದ್ದರೂ ಕಳೆದ ಎಂಟು ತಿಂಗಳಿಂದ ಆ ಹಣವೂ ಬಂದಿಲ್ಲ. ಹಾಗಾಗಿ ಹೈನುಗಾರಿಕೆ ಸಹ ರೈತರ ಜೀವನ ಕಟ್ಟಿಕೊಡಲು ವಿಫಲವಾಯಿತು.

ಹಿಂದೆ ತೆಂಗಿನ ಬೆಳೆಗೆ ನುಸಿ ರೋಗ ಬಂದು ಬೆಳೆ­ಗಾರರು ಕಂಗಾಲಾಗಿದ್ದಾಗ ಸರ್ಕಾರ ನೀರಾ ಉತ್ಪಾ­ದಿಸಲು ಅನುಮತಿ ನೀಡಿತ್ತು. ಆದರೆ ಆ ನೀರಾ­ವನ್ನು ತೋಟಗಳಲ್ಲೇ ಮಾರುವಂತೆ ಒತ್ತಡ ಹೇರಲಾಗಿತ್ತು. ಎಲ್ಲಾ ತೋಟಗಳಲ್ಲೂ ನೀರಾ ಇಳಿಸಿದರೆ ಅಷ್ಟೂ ನೀರಾ ಮಾರಾಟ­ವಾಗು­ವುದು ಸಾಧ್ಯವಾಗುತ್ತಿರಲಿಲ್ಲ. ಇದರ ದುರ್ಲಾಭ­ವನ್ನು ಪಡೆದ ಪೊಲೀಸ್ ಮತ್ತು ಅಬಕಾರಿ ಸಿಬ್ಬಂದಿ, ಆಗ ಇದ್ದ ಸಾರಾಯಿ ಲಾಬಿಯೊಂದಿಗೆ ಸೇರಿ, ನೀರಾ ಸಾಗಾಣಿಕೆಗೆ ಸರ್ಕಾರ ಅನುಮತಿ­ಯನ್ನು ನೀಡಿಲ್ಲವೆಂದು ನೀರಾ ಇಳಿಸುವ ತೆಂಗು ಬೆಳೆಗಾರ­ರಿಗೆ ಇನ್ನಿಲ್ಲದ ಕಿರುಕುಳ ನೀಡಿತು.

ಇದೇ ರೀತಿಯ ಶೋಷಣೆ ರೈತರಿಗೆ ತರಕಾರಿ ಬೆಳೆ­ಗಳಲ್ಲಿ, ಔಷಧಿ ಸಸ್ಯಗಳ ಬೆಳೆಗಳಲ್ಲಿ, ತೋಟ­ಗಾರಿಕೆ ಬೆಳೆಗಳಲ್ಲಿ ನಿರಂತರವಾಗಿ ಆಗುತ್ತಿದೆ. ಸರ್ಕಾರಗಳು ರೈತರಿಗೆ ಕೆಲವು ಉಚಿತ ಸವಲತ್ತು­ಗಳ ಆಸೆ ತೋರಿಸಿ ಅವರನ್ನು ಧ್ವನಿ ಇಲ್ಲ­ದ­ವರಂತೆ ಮಾಡಿವೆ. ಇತ್ತ ಕೃಷಿಯನ್ನು ಬಿಡ­ಲಾಗದೆ, ಅತ್ತ ಜೀವನೋಪಾಯಕ್ಕಾಗಿ ಪರ್ಯಾಯ ಮಾರ್ಗವೂ ತೋಚದೆ ರೈತರು ನಿರಂತರ­ವಾಗಿ ಒತ್ತಡದಲ್ಲಿ ಇರುವಂತಾಗಿದೆ.
ಸಿ.ಎಸ್. ಅನುರಾಧ, ರಾಯರಹುಂಡಿ, ಟಿ. ನರಸೀಪುರ ತಾಲ್ಲೂಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT