ಉಡುಪಿ: `ಚೆಲ್ಲಾಪಿಲ್ಲಿ' ಚಲನಚಿತ್ರಕ್ಕೆ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಗ್ಬಾಸ್ನಲ್ಲಿ ಗೆದ್ದ ನಂತರ ನಟನಿಗಿಂತ ಹೆಚ್ಚಾಗಿ ಒಬ್ಬ ವ್ಯಕ್ತಿಯಾಗಿ ಗುರುತಿಸುತ್ತಿರುವುದು ಖುಷಿ ಕೊಟ್ಟಿದೆ' ಎಂದು ನಾಯಕ ನಟ ವಿಜಯ ರಾಘವೇಂದ್ರ ಹೇಳಿದರು.
`ಚೆಲ್ಲಾಪಿಲ್ಲಿ' ಚಿತ್ರ ಯಶಸ್ವಿಯಾಗಿ ನಾಲ್ಕನೇ ವಾರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಉಡುಪಿಯ ಕಲ್ಪನಾ ಚಿತ್ರಮಂದಿರಕ್ಕೆ ಅವರು ಭಾನುವಾರ ಕುಟುಂಬ ಸಮೇತರಾಗಿ ಭೇಟಿ ನೀಡಿದರು.
ತುಳು ನಾಟಕ ಹಾಗೂ ರಂಗಭೂಮಿಯ ಬಗ್ಗೆ ಅಭಿಪ್ರಾಯವೇನು ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತುಳು ರಂಗಭೂಮಿಯಲ್ಲಿ ಪ್ರತಿಭಾವಂತ ನಟರಿದ್ದು ಎಲೆ ಮರೆಯ ಕಾಯಿಯಂತಿದ್ದಾರೆ. ಈ ಹಿಂದೆ ಬಂದಿರುವ `ಒರಿಯರ್ದೊರಿ ಅಸಲ್', `ಆಮೆಟ್ ಅಸಲ್ ಈಮೆಟ್ ಕುಸಲ್' ಹಾಗೂ `ತೆಲಿಕೆದ ಬೊಳ್ಳಿ' ಸಿನಿಮಾಗಳ ಮೂಲಕ ಹಲವಾರು ಕಲಾವಿದರ ಪ್ರತಿಭೆ ಜನರಿಗೆ ಗೊತ್ತಾಗಿದೆ ಎಂದರು.
ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಮುಂದಿನ ಚಲನಚಿತ್ರ ರಣತಂತ್ರದ ಶೂಟಿಂಗ್ ಅರ್ಧಕ್ಕೆ ನಿಂತಿದ್ದು, ಪುನಃ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
`ಮಂಗಳೂರು ಸ್ವಂತ ಊರಾದ್ದರಿಂದ ಖುಷಿಯಾಗಿದೆ. ಚಿತ್ರಕ್ಕೆ ಜನರಿಂದ ಸಿಕ್ಕಿರುವ ಪ್ರತಿಕ್ರಿಯೆ ಖುಷಿ ಕೊಟ್ಟಿದೆ `ಎಂದು ನಾಯಕಿ ನಟಿ ಐಶ್ವರ್ಯ ನಾಗ್ ಹೇಳಿದರು. ನಿರ್ದೇಶಕ ಸಾಯಿಕೃಷ್ಣ, ನಿರ್ಮಾಪಕ ಸುದೇಶ್ ಭಂಡಾರಿ ಜೊತೆಗಿದ್ದರು.
ವಿಜಯರಾಘವೇಂದ್ರ, ಐಶ್ವರ್ಯ ನಾಗ್ ಮತ್ತು ಚಿತ್ರ ತಂಡದವರು ಪ್ರೇಕ್ಷಕರ ಜೊತೆಗೆ ಕುಳಿತು ಸ್ವಲ್ಪ ಸಮಯ ಚಿತ್ರ ವೀಕ್ಷಿಸಿದರು.