ಜೋಹಾನ್ಸ್ ಬರ್ಗ್(ಪಿಟಿಐ): ಉತ್ತರಾಖಂಡ ಪ್ರವಾಹ ಸಂತ್ರಸ್ತರಿಗೆ ಸಹಾಯ ಒದಗಿಸುವ ನಿಟ್ಟಿನಲ್ಲಿ ಭಾರತ ಮೂಲದವರು ದಕ್ಷಿಣ ಆಫ್ರಿಕಾದಲ್ಲಿ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಇಲ್ಲಿನ ಸ್ಥಳೀಯ ಅಭಿವೃದ್ಧಿ ಸಂಘಟನೆ `ಆತ್ಮದಾನ್' ಮತ್ತು `ಜೋಹಾನ್ಸ್ ಬರ್ಗ್ನ ಯುವಕ ಮಂಡಳ' ಸಂಘಟನೆಗಳು ಜಂಟಿಯಾಗಿ ದೇಣಿಗೆ ಸಂಗ್ರಹ ಕಾರ್ಯಕ್ರಮ ನಡೆಸುತ್ತಿವೆ. ಹಾಗೆಯೇ ಬಾಪ್ಸ್ ಚಾರಿಟಿ ಸಂಸ್ಥೆಯು ರಾಷ್ಟ್ರೀಯ ವಿಪತ್ತು ನಿಧಿಯನ್ನು ನೀಡಲು ಸಜ್ಜಾಗಿದೆ.
`ಉತ್ತರಾಖಂಡದ ಸಂತ್ರಸ್ತರಿಗೆ ಮನಃ ಪೂರ್ವಕವಾಗಿ ಧನಸಹಾಯ ನೀಡು ವಂತೆ ದಕ್ಷಿಣ ಆಫ್ರಿಕಾದ ಜನರಲ್ಲಿ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ಘಟನೆಗೂ ಮುಂಚೆ ಭಾರತದಲ್ಲಿ ಸುನಾಮಿ ಮತ್ತು ಭೂಕಂಪನವಾಗಿದ್ದಾಗಲೂ ನಾವು ಪರಿಹಾರಕ್ಕಾಗಿ ನಿಧಿ ಸಂಗ್ರಹಿಸಿದ್ದೆವು' ಎಂದು ಆತ್ಮದಾನ್ ಸಂಘಟನೆ ವಕ್ತಾರ ಈಶ್ವರ್ಲಾಲ್ ಗೋವನ್ ತಿಳಿಸಿದರು. ಭಾರತ ಮೂಲದ ಸಂಘಟನೆಗಳ ಈ ಕೆಲಸವನ್ನು ದಕ್ಷಿಣ ಆಫ್ರಿಕಾದಲ್ಲಿನ ಭಾರತದ ಹೈಕಮಿಷನರ್ ವೀರೇಂದ್ರ ಗುಪ್ತ ಶ್ಲಾಘಿಸಿದ್ದಾರೆ.