ಹನುಮಸಾಗರ: ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀದೇವಿ ಹಳ್ಳೂರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಹ್ಲಾದ ಕಟ್ಟಿ ಹಾಗೂ ಸದಸ್ಯರು ಬುಧವಾರ ಪರಿಶೀಲಿಸಿದರು.
ಕ್ರಿಯಾಯೋಜನೆಯಲ್ಲಿದ್ದಂತೆ ಬಹುತೇಕ ಕಾಮಗಾರಿಗಳು ಈಗಾಗಲೇ ಮುಗಿದಿವೆ. ಕೆಲವೊಂದು ಕಾಮಗಾರಿಗಳ ಕೊನೆಯ ಹಂತದ ಕೆಲಸಗಳು ಮಾತ್ರ ಬಾಕಿ ಇದ್ದು ಬೇಗನೆ ಮುಗಿಸಲು ಹಾಗೂ ಯೋಜನೆಯಲ್ಲಿದ್ದಂತೆ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಹೇಳಿದರು.
ಕಾಮಗಾರಿಗಳನ್ನು ಪರಿಶೀಲಿಸಿದ ನಂತರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಹ್ಲಾದ ಕಟ್ಟಿ ಸುದ್ದಿಗಾರರೊಂದಿಗೆ ಮಾತನಾಡಿ ಗ್ರಾಪಂ ಕ್ರಿಯಾಯೋಜನೆಯಂತೆ ಒಟ್ಟು ರೂ. 2.80 ಕೋಟಿ ಬಜೆಟ್ನಲ್ಲಿ ಶೇ. 60ರಂತೆ ಈಗ ಸುಮಾರು 60 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳು ಮುಗಿದಿವೆ ಎಂದರು.ಇದರಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಗಮನ ನೀಡಿರುವುದರಿಂದ ಕಾಡು ರಸ್ತೆಗಳೆಲ್ಲ ಈಗ ಉತ್ತಮ ರಸ್ತೆಗಳಾಗಿ ರೂಪತಾಳಿವೆ ಎಂದು ಹೇಳಿದರು.
ಈ ಬಾರಿ ಉದ್ಯೋಗ ಖಾತರಿ ಯೋಜನೆಯ ಕಾಮಗಾರಿಗಳು ಗುತ್ತಿಗೆದಾರ ಬಸವರಾಜ ಹಳ್ಳೂರ ಹಾಗೂ ಬಸವರಾಜ ಬಾಚಲಾಪುರ ಅವರ ಮಾರ್ಗದರ್ಶನದಲ್ಲಿ ನಡೆದಿರುವುದರಿಂದ ಇಲ್ಲಿ ನಡೆದ ಕೆಲಸಗಳು ತಾಲ್ಲೂಕಿನಲ್ಲಿಯೇ ಮಾದರಿಯಾಗಿವೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹೇಳಿದರು.