ಮೈಸೂರು: `ದೇಶಕ್ಕೆ ಉತ್ತಮ ಶಿಕ್ಷಣ ನೀತಿ, ಉದ್ಯೋಗ ನೀತಿಯನ್ನು ಕೊಡು ಗೆಯಾಗಿ ನೀಡಿದ ಕೀರ್ತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ' ಎಂದು ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಹನುಮಣ್ಣ ನಾಯಕ ದೊರೆ ಅಭಿಪ್ರಾಯಪಟ್ಟರು.
ವಿ.ವಿ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 122 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರ ಏಳಿಗೆಗಾಗಿ ಸಂವಿಧಾನವನ್ನು ದೇಶಕ್ಕೆ ಕೊಡುಗೆ ಯಾಗಿ ನೀಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್. ಎಲ್ಲಾ ಜಾತಿ, ಜನಾಂಗದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಶಿಕ್ಷಣ ನೀತಿ, ಉದ್ಯೋಗ ಭದ್ರತೆ ಕಲ್ಪಿಸಿ ಕೊಟ್ಟಿದ್ದಾರೆ' ಎಂದು ಹೇಳಿದರು.
`ಪ್ರತಿಯೊಂದು ಧರ್ಮದಲ್ಲಿ ಧರ್ಮಗ್ರಂಥಗಳು ಇರುವಂತೆ ನಮ್ಮ ದೇಶಕ್ಕೆ ಸಂವಿಧಾನವೇ ದೊಡ್ಡ ಗ್ರಂಥವಾಗಿದೆ. ಸಂವಿಧಾನ ಇಲ್ಲದೇ ಹೋಗಿದ್ದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗುತ್ತಿರಲಿಲ್ಲ. ಸಮಾಜದ ಎಲ್ಲ ಸ್ಥರದ ಜನರನ್ನು ಗಮನದಲ್ಲಿ ಇಟ್ಟುಕೊಂಡು ಸಂವಿಧಾನ ರಚಿಸಿರುವುದು ಶ್ಲಾಘ ನೀಯ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿ.ವಿ ಪ್ರಾಧ್ಯಾಪಕ ಹಾ.ಮ. ನಟರಾಜು ಮಾತನಾಡಿ, `ಸಮಾಜದಲ್ಲಿ ನಿರಂತರವಾಗಿ ಅಪಮಾನ, ಅವಮಾನಗಳನ್ನು ಅನುಭವಿಸಿ ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಅಂಬೇಡ್ಕರ್. ಅವರು ಸಮಾಜದಲ್ಲಿ ಅನುಭವಿಸಿದ ವ್ಯತಿರಿಕ್ತ ಯಾತನೆಗಳಿಂದಲೇ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತು' ಎಂದರು.
ವಿ.ವಿ ಕುಲಸಚಿವ ಡಾ.ಎಂ.ಬಸವಣ್ಣ, ಪ್ರಸಾರಾಂಗ ಗೌರವ ನಿರ್ದೇಶಕ ರಾ.ಸ.ನಂದಕುಮಾರ್ ಇದ್ದರು.