ಪುಣೆ (ಪಿಟಿಐ): ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಣ್ಣಾ ಹಜಾರೆ ಅವರ ಆರೋಗ್ಯ ಸುಧಾರಿಸ್ದ್ದಿದ್ದರೂ, ಇನ್ನೂ ಒಂದು ವಾರ ಕಾಲ ಅವರು ಅಲ್ಲೇ ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಜೊತೆಗೆ, ಒಂದು ತಿಂಗಳವರೆಗೆ ಉಪವಾಸ ಮಾಡದೇ ಇರುವಂತೆ ಅವರಿಗೆ ಸಲಹೆ ನೀಡಿದ್ದಾರೆ.
`ಶ್ವಾಸಕೋಶದಲ್ಲಿನ ಸೋಂಕಿಗಾಗಿ ಅಣ್ಣಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ~ ಎಂದು ಡಾ. ಪರಾಗ್ ಸಂಚೇತಿ ತಿಳಿಸಿದ್ದಾರೆ. ಅಣ್ಣಾ ಅವರ ಕಾರ್ಯದರ್ಶಿ ಸುರೇಶ್ ಪಥಾರೆ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಘಾಟ್ನಲ್ಲಿ ಪ್ರಾರ್ಥನೆ: ಅಣ್ಣಾ ಶೀಘ್ರ ಗುಣಮುಖರಾಗಲೆಂದು ಹಾರೈಸಿ ಭ್ರಷ್ಟಾಚಾರ ವಿರುದ್ಧ ಭಾರತ (ಐಎಸಿ) ಸಂಘಟನೆ ರಾಜ್ಘಾಟ್ನಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿತು.
ನನ್ನ ಬಗ್ಗೆ ಚಿಂತಿಸಬೇಡಿ: `ನನ್ನ ಆರೋಗ್ಯದ ಬಗ್ಗೆ ಚಿಂತಿಸಬೇಡಿ, ಮೊದಲಿಗಿಂತ ಈಗ ನನ್ನ ಆರೋಗ್ಯ ಸುಧಾರಿಸಿದೆ, ಇನ್ನು ಕೆಲವೇ ದಿನಗಳಲ್ಲಿ ಸರಿಹೋಗುತ್ತೇನೆ~ ಎಂದು ಅಣ್ಣಾ ಹಜಾರೆ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ.
ಅನಾರೋಗ್ಯದಿಂದಾಗಿ ಮುಂಬೈನಲ್ಲಿ ತಮ್ಮ ಉಪವಾಸ ಸತ್ಯಾಗ್ರಹವನ್ನು ದಿಢೀರ್ ಮೊಟಕುಗೊಳಿಸಿದ ಬಳಿಕ ಇದೇ ಮೊದಲ ಬಾರಿಗೆ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಕೊಂಡೇ ಅಣ್ಣಾ ಈ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.
`ನನಗೆ ತೀವ್ರ ಅನಾರೋಗ್ಯವಾಗಿದೆ ಎಂದು ಭಾವಿಸಿರುವುದು ಸರಿಯಲ್ಲ. ಅಷ್ಟರ ಮಟ್ಟಿಗೆ ನನ್ನ ಆರೋಗ್ಯ ಹದಗೆಟ್ಟಿಲ್ಲ~ ಎಂದು ಅವರು ಹೇಳಿದ್ದಾರೆ.