ಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿಕಾರವು ಉಪ್ಪಳ್ಳಿಯಲ್ಲಿ ನಿರ್ಮಿಸುತ್ತಿರುವ ಬಡಾವಣೆಗೆ 130 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಹೊಸ ಬಡಾವಣೆಯಲ್ಲಿ ಗುಣಮಟ್ಟದ ಮೂಲಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ತಿಳಿಸಿದರು.
ನಗರ ಹೊರವಲಯದ ಉಪ್ಪಳ್ಳಿಯಲ್ಲಿ ಭಾನುವಾರ ನಡೆದ ಮಲೆಯಾಳಿ ತಿಯಾನ್ ಜನಾಂಗದ ಸಭೆಯಲ್ಲಿ ಮಾತನಾಡಿದ ಅವರು, ಈ ಹೊಸ ಬಡಾವಣೆಯಲ್ಲಿ ಮುಖ್ಯ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಮಾಡಿ, ಸೋಲಾರ್ ಬ್ಯಾಕ್ಅಪ್ ಇರುವ ವಿದ್ಯುತ್ ಸೌಲಭ್ಯ ಅಳವಡಿಸಲಾಗುವುದು. ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಜತೆಗೆ ಎಲ್ಲ ರೀತಿಯ ಮೂಲ ಸೌಕರ್ಯ ಒದಗಿಸಿ, ಮಾದರಿ ಲೇಔಟ್ ನಿರ್ಮಿಸಲಾಗುತ್ತಿದೆ. ಅಡೆ, ತಡೆ ನಿಭಾಯಿಸಿಕೊಂಡು ಈಗಿನ ವ್ಯವಸ್ಥೆಯ ನಡುವೆ ಗುದ್ದಾಡಿ ಕ್ಷೇತ್ರದಲ್ಲಿ ಹಿಂದೆಂದೂ ಆಗಿರದಂತಹ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.
ಜನರಿಗೆ ನಾಗರಿಕ ಪ್ರಜ್ಞೆ ಬರಬೇಕಿದೆ. ನಾಗರಿಕರಲ್ಲಿ ಸಾಮಾಜಿಕ ಕರ್ತವ್ಯ ಪ್ರಜ್ಞೆಯ ಅರಿವು ಮೂಡಿಸಲು ಸ್ವಚ್ಛತಾ ಆಂದೋಲನ ನಡೆಸಲಾಗಿದೆ. ಜನರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ ಎಂದ ಸಚಿವರು, ಸಿದ್ಧಾಂ ತದಲ್ಲಿ ನಂಬಿಕೆ ಇಟ್ಟು, ವಿಚಾರಕ್ಕಾಗಿ ಹೋರಾಟ ಮಾಡಿದವರು ನಾವು. ಅಧಿಕಾರದ ಆಸೆಗಾಗಿ ರಾಜಕಾರಣಕ್ಕೆ ಬಂದವರಲ್ಲ. ಜನರ ನಡುವೆ ಇದ್ದು, ಸಾಮಾಜಿಕ ಕಳಕಳಿ ಇಟ್ಟುಕೊಂಡು ರಾಜ ಕಾರಣದಲ್ಲಿ ಇದ್ದೇನೆ ಎಂದರು.
ಮಲೆಯಾಳಿ ತಿಯಾನ್ ಜನಾಂಗದ ಕಾರ್ಯ ಚಟು ವಟಿಕೆ ನೆಡಸಲು ಸಮುದಾಯ ಭವನದ ಅವಶ್ಯಕತೆ ಇದ್ದು, ಸೂಕ್ತ ನಿವೇಶನ ಒದಗಿಸುವಂತೆ ಮುಖಂಡರು ಸಚಿವರಿಗೆ ಇದೇ ಸಂದರ್ಭ ಮನವಿ ಮಾಡಿದರು.
ನಗರದ ಪೂವಯ್ಯ ಲೇಔಟ್ ಅಥವಾ ಉಪ್ಪಳ್ಳಿ ಭಾಗದಲ್ಲಿ ನಿವೇಶನ ಗುರುತಿಸುವಂತೆ ಸಿಡಿಎ ಅಧ್ಯಕ್ಷ ಬಿ.ರಾಜಪ್ಪಗೆ ಸಚಿವರು ಸೂಚಿಸಿದರು.
ನಗರಸಭೆ ಅಧ್ಯಕ್ಷ ಸಿ.ಆರ್.ಪ್ರೇಂಕುಮಾರ್, ಸಮಾಜದ ಮುಖಂಡರಾದ ಅಶೋಕ್, ಮಂಜು, ಕೃಷ್ಣ, ಚಂದ್ರು, ಸುಂದರ್, ವರಸಿದ್ಧಿ ವೇಣು ಗೋಪಾಲ್, ಸೀತಾರಾಂ ಭರೇಣ್ಯ ಇನ್ನಿತರರು ಇದ್ದರು.