ನವದೆಹಲಿ (ಪಿಟಿಐ): ದೆಹಲಿಯಲ್ಲಿ ಸರ್ಕಾರ ರಚನೆಗೆ ಇರುವ ಸಾಧ್ಯತೆಗಳ ಅನ್ವೇಷಣೆಗಾಗಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಇನ್ನು ಕೆಲವು ದಿನಗಳ ಕಾಲಾವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.
ಸರ್ಕಾರ ರಚನೆಗೆ ಎಎಪಿ ಎಷ್ಟು ಸಮಯ ಕೋರಿದೆ ಎಂಬುದನ್ನು ತಿಳಿಸುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರನ್ನು ಸರ್ಕಾರ ಕೇಳಿದೆ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ದೆಹಲಿಯಲ್ಲಿ ಸರ್ಕಾರ ರಚನೆಗೆ (ಎಎಪಿ) ಇನ್ನಷ್ಟು ಕಾಲಾವಕಾಶ ನೀಡಲಿದ್ದೇವೆ. ಇದು ಪ್ರಜಾತಾಂತ್ರಿಕ ವ್ಯವಸ್ಥೆ’ ಎಂದು ಶಿಂಧೆ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರ ಸರ್ಕಾರ ಅವಸರಿಸುತ್ತಿಲ್ಲ ಹಾಗೂ ಕನಿಷ್ಟ ಮುಂಬರುವ ಸೋಮವಾರ ತನಕವಾದರೂ ಕಾಯಲು ಅದು ಸಿದ್ಧವಿದೆ ಎಂಬುದು ಶಿಂಧೆ ಅವರ ಹೇಳಿಕೆ ಸೂಚಿಸುತ್ತಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ದೆಹಲಿ ವಿಧಾನಸಭೆ ಅತಂತ್ರ ಫಲಿತಾಂಶ ಕಂಡಿದೆ.