ದಾವಣಗೆರೆ: ಜಿಲ್ಲೆಯಲ್ಲಿ ಅಡಿಕೆ ಬೆಳೆ ಕೊಳೆರೋಗ ಬಾಧೆಗೆ ತುತ್ತಾಗಿದ್ದು, ₨ 167 ಕೋಟಿ ನಷ್ಟ ಉಂಟಾಗಿದೆ. ಸರ್ಕಾರ ಕೂಡಲೇ ಅಡಿಕೆ ಬೆಳೆಗಾರರಿಗೆ ಎಕರೆಗೆ ₨ 1ಲಕ್ಷ ಪರಿಹಾರ ನೀಡಬೇಕು ಎಂದು ಅಡಿಕೆ ಬೆಳೆಗಾರರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ 34,008 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಬಾರಿ ವಾಡಿಕೆಗಿಂದ ಶೇ 15.18 ಮಿ.ಮೀ. ಅಧಿಕ ಮಳೆಯಾಗಿದೆ. ಇದರಿಂದಾಗಿ ಅಡಿಕೆ ಬೆಳೆಗೆ ಕೊಳೆರೋಗ ಬಾಧೆ ತಗುಲಿದೆ.
ಹೀಗಾಗಿ, ಜಿಲ್ಲೆಯ ಅಡಿಕೆ ಬೆಳೆ ನೆಲಕಚ್ಚಿದೆ. ಬೆಳೆಕೈಕೊಟ್ಟ ಕಾರಣ ಕಬ್ಬೂರಿನಂತಹ ಗ್ರಾಮದಲ್ಲಿ ರೈತರು ಬೇಸತ್ತು ಅಡಿಕೆ ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಚನ್ನಗಿರಿ ತಾಲ್ಲೂಕಿನಲ್ಲಿ 18,325 ಅಡಿಕೆ ಬೆಳೆ ವಿಸ್ತೀರ್ಣ ಇದೆ. ಅದರಲ್ಲಿ 10,262 ಹೆಕ್ಟೇರ್ ಪ್ರದೇಶದಲ್ಲಿ ಕೊಳೆರೋಗ ಬಾಧಿಸಿದೆ. ಒಟ್ಟಾರೆ ಈ ತಾಲ್ಲೂಕಿನಲ್ಲಿ ₨ 98 ಕೋಟಿ ನಷ್ಟ ಉಂಟಾಗಿದೆ.
ಅದೇ ರೀತಿಯಲ್ಲಿ ದಾವಣಗೆರೆಯಲ್ಲಿ ₨ 43 ಕೋಟಿ, ಹರಿಹರ ತಾಲ್ಲೂಕಿನಲ್ಲಿ ₨ 2.40 ಕೋಟಿ, ಹೊನ್ನಾಳಿ ತಾಲ್ಲೂಕಿನಲ್ಲಿ ₨ 24 ಕೋಟಿ ನಷ್ಟ ಸಂಭವಿಸಿದೆ ಎಂದು ರೈತರಾದ ಶಿವಕುಮಾರ್, ಆರ್.ವಿ. ಚಂದ್ರಪ್ಪ, ಕೆ.ಬಿ. ಶಿವಕುಮಾರ್ ತಿಳಿಸಿದರು.
ಇನ್ನು 15 ದಿನಗಳಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಅಡಿಕೆ ಬೆಳೆಗಾರರಿಗೆ ತಕ್ಷಣ ಪರಿಹಾರ ಕೊಡಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದಿರು ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಸದಸ್ಯರಾದ ಜಿ.ಎಸ್. ರೇವಣಸಿದ್ದಪ್ಪ, ಓಂಕಾರಪ್ಪ, ರೈತರಾದ ಬಿ. ಶಿವಮೂರ್ತಿ, ಷಡಾಕ್ಷರಪ್ಪ, ಎಂ.ಎಸ್. ರೇವಣಸಿದ್ದಪ್ಪ ಉಪಸ್ಥಿತರಿದ್ದರು.