ಮಂಗಳೂರು: ಕನ್ನಡ ನಾಡು–ನುಡಿಗೆ ಸೇವೆ ಸಲ್ಲಿಸಿದ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಡಾ.ಡಿ.ಕೆ.ಚೌಟ, ಹಿರೇಮಗಳೂರು ಕಣ್ಣನ್ ಸೇರಿ 15 ಸಾಧಕರಿಗೆ ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಪ್ರಶಸ್ತಿ ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಇಲ್ಲಿ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡ್ನಾಕೂಡು ಚಿನ್ನಸ್ವಾಮಿ, ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಲೇಖಕ ಫಕೀರ್ ಮೊಹಮ್ಮದ್ ಕಟ್ಪಾಡಿ, ಡಾ.ಬಿ.ಎಂ.ಹೆಗ್ಡೆ, ಜಯಂತ ಕಾಯ್ಕಿಣಿ, ಅನುವಾದಕಿ ಉಮಾ ಕುಲಕರ್ಣಿ, ಡಾ.ಕಮಲಾ ಹಂಪನಾ, ಡಾ.ಪಿ.ದಯಾನಂದ ಪೈ, ಡಾ.ನಾ.ಮೊಗಸಾಲೆ, ಕುಂಬ್ಳೆ ಸುಂದರ ರಾವ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ಬಾಸೆಲ್ ಮಿಷನ್, ಶಿವಮೊಗ್ಗದ ಕರ್ನಾಟಕ ಸಂಘಕ್ಕೆ ಸಂಸ್ಥೆಗಳ ನೆಲೆಯಲ್ಲಿ ಪ್ರಶಸ್ತಿ ನೀಡಲಾಗುವುದು. ಇದೇ 22ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ₨25 ಸಾವಿರ ನಗದು ಒಳಗೊಂಡಿರುವ ಪ್ರಶಸ್ತಿ ಸನ್ಮಾನ, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ. ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರೂ ಸಮಾರೋಪದಲ್ಲಿ ಭಾಗವಹಿಸುವರು ಎಂದು ಹೇಳಿದರು.
ಇದೇ 20ರಂದು ಸಂಜೆ 6ಕ್ಕೆ ನಡೆಯುವ ಆಳ್ವಾಸ್ ವಿರಾಸತ್ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಉದ್ಘಾಟಿಸುವರು. ನಿಟ್ಟೆ ಡಾ.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು.
ಸಮ್ಮೇಳನಾಧ್ಯಕ್ಷ ಡಾ.ಬಿ.ಎ.ವಿವೇಕ ರೈ, ಅಬುದಾಬಿಯ ಸರ್ವೋತ್ತಮ ಶೆಟ್ಟಿ, ಬಹರೇನ್ ಕನ್ನಡ ಸಂಘದ ರಾಜ್ ಕುಮಾರ್ ಭಾಗವಹಿಸುವರು ಎಂದರು.
10 ಕವಿಗಳ ಕವಿತಾ ವಾಚನ: ನುಡಿಸಿರಿಯ ಕವಿ ಸಮಯದಲ್ಲಿ ಕನ್ನಡದ ಪ್ರಸಿದ್ಧ ಕವಿಗಳಾದ ಡಾ.ಕೆ.ಎಸ್.ನಿಸಾರ್ ಅಹಮ್ಮದ್, ಎಚ್.ಡುಂಡಿರಾಜ್್, ಲಕ್ಕೂರ್ ಸಿ.ಆನಂದ, ಡಾ.ಸಿದ್ದಲಿಂಗಯ್ಯ, ಡಾ.ನಾ.ದಾ.ಶೆಟ್ಟಿ, ಸುಬ್ರಾಯ ಚೊಕ್ಕಾಡಿ, ಡಾ.ದೊಡ್ಡರಂಗೇಗೌಡ, ಡಾ.ಎಚ್.ಎಸ್.ವೆಂಕಟೇಶಮೂರ್ತಿ, ಡಾ.ಬಿ.ಟಿ.ಲಲಿತಾ ನಾಯಕ್, ಸುಕನ್ಯಾ ಮಾರುತಿ ಭಾಗವಹಿಸಲಿದ್ದು, ಕವಿತಾ ವಾಚನ ಮಾಡುವರು. ಆ ಕವಿತೆಗೆ ರಾಗ, ನೃತ್ಯ ಸಂಯೋಜನೆಯನ್ನೂ ಮಾಡಲಾಗುವುದು. ಕಲಾವಿದ ವಿಲಾಸ್ ಕುಮಾರ್ ಅವರ ಚಿತ್ರವೂ ಮೆರುಗು ನೀಡಲಿದೆ.
ಆಶಯ, ವಿಷಯ, ಸಮನ್ವಯ ದೃಷ್ಟಿಯಲ್ಲಿ ಸಮ್ಮೇಳನದಲ್ಲಿ ಮೂರು ಸಮಾವೇಶ ಗೋಷ್ಠಿಗಳು ನಡೆಯಲಿವೆ. ಇದೇ 20ರಂದು ನಡೆಯಲಿರುವ ಸಾಹಿತ್ಯಗೋಷ್ಠಿಯಲ್ಲಿ ಡಾ.ಚಂದ್ರಶೇಖರ ಕಂಬಾರ, ಡಾ.ಎಸ್.ಎಲ್.ಭೈರಪ್ಪ ಭಾಗವಹಿಸುವರು, ಇದೇ 21ರಂದು ರಾಜಕಾರಣ ಕುರಿತ ಗೋಷ್ಠಿಯಲ್ಲಿ ಎಂ.ಸಿ.ನಾಣಯ್ಯ, ಸುರೇಶ್ ಕುಮಾರ್ ಮತ್ತು ಬಿ.ಎಲ್.ಶಂಕರ್ ಭಾಗವಹಿಸುವರು. 22ರಂದು ನಡೆಯುವ ಮಾಧ್ಯಮ ಗೋಷ್ಠಿಯಲ್ಲಿ ಪದ್ಮರಾಜ ದಂಡಾವತಿ, ವಿಶ್ವೇಶ್ವರ ಭಟ್ ಮತ್ತು ಟಿ.ಎನ್.ಸೀತಾರಾಂ ಭಾಗವಹಿಸುವರು.
ನಾಲ್ಕು ಗೋಷ್ಠಿ: ವಿಶ್ವ ಕನ್ನಡ ಎಂಬ ಗೋಷ್ಠಿಯಲ್ಲಿ ಹೊರದೇಶದಲ್ಲಿ ಕನ್ನಡ, ಹೊರನಾಡಿನಲ್ಲಿ ಕನ್ನಡ ಮತ್ತು ಗಡಿನಾಡಿನಲ್ಲಿ ಕನ್ನಡ ಕುರಿತು ಡಾ.ನಾಗ ಐತಾಳ್ ಅಮೆರಿಕ, ಡಾ.ಪುರುಷೋತ್ತಮ ಬಿಳಿಮಲೆ ದೆಹಲಿ ಮತ್ತು ಡಾ.ಬಸವರಾಜ ಜಗಜಂಪಿ ಬೆಳಗಾವಿ ಅವರು ಮಾತನಾಡಲಿದ್ದಾರೆ. ಕನ್ನಡ ಸಾಹಿತ್ಯದ ಲೋಕದೃಷ್ಟಿಯಲ್ಲಿ ವಚನ ಸಾಹಿತ್ಯ, ದಾಸ ಸಾಹಿತ್ಯ, ಕನ್ನಡ ಮತ್ತು ಅವಕಾಶ, ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ, ಶಿಕ್ಷಣ ಮತ್ತು ಕನ್ನಡ ಮಾಧ್ಯಮ, ಕನ್ನಡ ಸಾಹಿತ್ಯ ಸಮಾಜ ಚಿಂತನೆ ಗೋಷ್ಠಿಯಲ್ಲಿ ಹಳೆಗನ್ನಡ ಸಾಹಿತ್ಯ, ಹೊಸಗನ್ನಡ ಸಾಹಿತ್ಯದ ಕುರಿತು ವಿಷಯ ಮಂಡನೆ ಆಗಲಿದೆ ಎಂದು ವಿವರಿಸಿದರು.
ಡಾ.ಹಂಪ ನಾಗರಾಜಯ್ಯ, ಧರಣೀದೇವಿ ಮಾಲಗತ್ತಿ, ಡಾ.ಪಿ.ಕೆ. ರಾಜಶೇಖರ, ಕೆ.ಎಸ್.ಪುಟ್ಟಣ್ಣಯ್ಯ ವಿಶೇಷ ಉಪನ್ಯಾಸ ನೀಡುವರು. ರತ್ನಾಕರವರ್ಣಿ, ಸರಸ್ವತಿ ಬಾಯಿ ರಾಜವಾಡೆ, ಪೇಜಾವರ ಸದಾಶಿವ ರಾವ್, ಪ್ರೊ.ಎಸ್.ವಿ.ಪರಮೇಶ್ವರ ಭಟ್ಟ ಮೊದಲಾದವರ ಕುರಿತು ಉಪನ್ಯಾಸವೂ ಇದೆ.
ವಿದ್ಯಾರ್ಥಿ ಸಿರಿ, ಜಾನಪದ ಸಿರಿ, ಕೃಷಿ ಮೇಳ: ಪಂಜೆ ಮಂಗೇಶರಾಯ ವೇದಿಕೆಯಲ್ಲಿ ನಡೆಯಲಿರುವ ವಿದ್ಯಾರ್ಥಿ ಸಿರಿ ಸಮ್ಮೇಳನ ಲೇಖಕಿ ವೈದೇಹಿ ಅವರ ಮಾತಿನೊಂದಿಗೆ ಇದೇ 20ರಂದು ಬೆಳಿಗ್ಗೆ 9ಕ್ಕೆ ಚಾಲನೆಗೊಳ್ಳಲಿದೆ. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಕವಿಗೋಷ್ಠಿ, ಅಭಿನಯ ಗೀತೆ, ವಿಶೇಷ ಉಪನ್ಯಾಸ, ಕವಿ ಸಮಯ ಮೊದಲಾದ ಕಾರ್ಯಕ್ರಮಗಳೂ ನಡೆಯಲಿವೆ. ಜನಪದ ವಾದ್ಯ, ಕುಣಿತ,ಪ್ರಾತ್ಯಕ್ಷಿಕೆಗಳೂ ಮೆರುಗು ನೀಡಲಿವೆ. ಮಕ್ಕಳ ಸಾಹಿತ್ಯಕ್ಕೆ ಕೊಡುಗೆ ನೀಡಿದ ನಾ.ಡಿಸೋಜ, ಶರಣಪ್ಪ ಕಾಂಚಾಣಿ, ಎಳೆಯರ ಗೆಳೆಯ ಮುಳಿಯ ಕಾಸರಗೋಡು ಅವರನ್ನು, ಮುಂಬೈಯ ಚಿಣ್ಣರ ಬಿಂಬ, ಬೆಂಗಳೂರಿನ ಮಕ್ಕಳ ಕೂಟ, ಮಂಗಳೂರಿನ ಮಕ್ಕಳ ಸಾಹಿತ್ಯ ಸಂಗಮವನ್ನು ಸನ್ಮಾನಿಸಲಾಗುವುದು ಎಂದರು.
ಜಾನಪದ ಸಿರಿಗೆ ಜಾನಪದ ವಿವಿ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ ಅವರು 20ರಂದು ಬೆಳಿಗ್ಗೆ 9.30ಕ್ಕೆ ಚಾಲನೆ ನೀಡುವರು. ಕರ್ನಾಟಕದ ಮೌಖಿಕ ಪರಂಪರೆ, ಜನಪದ ಕುಣಿತ, ಜನಪದ ಆರಾಧನೆ, ಜನಪದ ವಾದ್ಯ, ಯಕ್ಷಗಾನ ಮತ್ತು ಸಮಾನಾಂತರ ಕಲಾ ಪ್ರಕಾರಗಳ ಕುರಿತ ವಿಚಾರಗೋಷ್ಠಿ, ಪ್ರಾತ್ಯಕ್ಷಿಕೆ ನಡೆಯಲಿದೆ.
22ರಂದು ಮಧ್ಯಾಹ್ನ 2ರಿಂದ ಸಮಾರೋಪ ನಡೆಯಲಿದ್ದು, ಡಾ.ವೀರಣ್ಣ ಸಮಾರೋಪ ಭಾಷಣ ನೆರವೇರಿಸುವರು. ಇದೇ ಸಂದರ್ಭದಲ್ಲಿ ಡಾ.ಯು.ಪಿ.ಉಪಾಧ್ಯಾಯ, ಹಿರಿಯಡ್ಕ ಗೋಪಾಲ ರಾವ್, ಶಿಮಂತೂರು ಡಾ.ಎನ್.ನಾರಾಯಣ ಶೆಟ್ಟಿ, ಸೋಮಲಿಂಗಪ್ಪ ಫಕೀರಪ್ಪ ದೊಡವಾಡ, ಬುರ್ರಕಥಾ ಜಯಮ್ಮ, ವೀರ ಮಕ್ಕಳ ಕುಣಿತದ ಸೀನಪ್ಪ, ದೈವ ಪಾತ್ರಿ ಗಂಗಯ್ಯ ಪರವ, ಕುಮಾರಪಾತ್ರಿ ಶ್ಯಾಮ ಶೆಟ್ಟಿ, ಮುಖವೀಣೆಯ ಅಚಿನಪ್ಪ, ನಂದಿಧ್ವಜದ ಎಲ್.ಮಹಾದೇವಪ್ಪ, ಕತ್ತಿ ವರಸೆಯ ಪೈಲ್ವಾನ್ ಮಹಾದೇವಪ್ಪ ಅವರಿಗೆ ಆಳ್ವಾಸ್ ಜಾನಪದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವರ್ಗೀಸ್ ಕುರಿಯನ್ ವೇದಿಕೆಯಲ್ಲಿ ನಡೆಯುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಳವನ್ನು ಕೃಷಿ ಸಚಿವ ಕೃಷ್ಣಬೈರೇಗೌಡ ಉದ್ಘಾಟಿಸುವರು. ಸಂಜೆ 6ರಿಂದ 9 ವೇದಿಕೆಗಳಲ್ಲಿ ನಾಡಿನ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ವಿವರಿಸಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ, ಡಾ.ನಾ.ದಾಮೋದರ ಶೆಟ್ಟಿ, ಕಿದೂರು ಗೋಪಾಲಕೃಷ್ಣ, ಚೆಂಗಪ್ಪ ಸುದ್ದಿಗೋಷ್ಠಿಯಲ್ಲಿ ಇದ್ದರು.
ಹೊರೆಕಾಣಿಕೆ
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ಗೆ ಬರುವವರ ಭೋಜನಕ್ಕಾಗಿ ತೆಂಗಿನಕಾಯಿ, ಅಕ್ಕಿ, ತರಕಾರಿ, ಬೆಲ್ಲ, ಸಕ್ಕರೆ ಬೇರೆ ಬೇರೆ ಊರುಗಳಿಂದ ಹೊರೆಕಾಣಿಕೆ ರೂಪದಲ್ಲಿ ಬರುತ್ತಿದೆ. ಸುಳ್ಯದಿಂದ 24 ಸಾವಿರ, ಬೆಳ್ತಂಗಡಿಯಿಂದ 16 ಸಾವಿರ, ಅಳದಂಗಡಿ, ವಾಮದಪದವು, ಸಿದ್ದಕಟ್ಟೆ, ವಿಟ್ಲ, ಪದ್ಯಾಣದಿಂದ 8 ಸಾವಿರ ತೆಂಗಿನಕಾಯಿ ಈಗಾಗಲೇ ಬಂದು ಸೇರಿದೆ.
ಬೆಳ್ತಂಗಡಿಯ ಹಂಸ, ವಿನಾಯಕ, ರೈತಬಂಧು ಗಿರಣಿಗಳ ಮಾಲೀಕರು ಒಂದು ಲೋಡು ಅಕ್ಕಿ, ಬಂಟ್ವಾಳದಿಂದ ಅಕ್ಕಿ, ಅರಸೀಕೆರೆ, ಬೇಲೂರಿನಿಂದ ತರಕಾರಿ, ಮಂಡ್ಯದಿಂದ ಬೆಲ್ಲ, ಬೆಳಗಾವಿಯಿಂದ ಸಕ್ಕರೆ ಹೊರೆಕಾಣಿಕೆ ರೂಪದಲ್ಲಿ ಬರುತ್ತಿದೆ ಎಂದು ಮೋಹನ ಆಳ್ವ ಹೇಳಿದರು.
ಐದು ಸಂಪುಟ ಬಿಡುಗಡೆ
ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ ಸಂದರ್ಭದಲ್ಲಿ 10ಸಿರಿಗನ್ನಡ, ಕರಾವಳಿ ಕರ್ನಾಟಕ, ಕನ್ನಡ ವೈಜಯಂತಿ, ಸಿರಿಹೆಜ್ಜೆ, ಕನ್ನಡ ಮನಸ್ಸು ಎಂಬ ಐದು ನೆನಪಿನ ಸಂಪುಟಗಳೂ ಪ್ರಕಟಗೊಳ್ಳುತ್ತಿವೆ. ಅವುಗಳು ಸಮ್ಮೇಳನದ ಉದ್ಘಾಟನೆ ಸಂದರ್ಭದಲ್ಲಿ ಬಿಡುಗಡೆ ಆಗಲಿವೆ ಎಂದರು.
ಯಾರೊಂದಿಗೂ ಸ್ಪರ್ಧೆಗೆ ಇಲ್ಲ
‘ಕನ್ನಡದ ಕೆಲಸವನ್ನು ನಾವೇನೂ ದತ್ತು ತೆಗೆದುಕೊಂಡಿಲ್ಲ. ಅದನ್ನು ಯಾರು ಬೇಕಾದರೂ ಮಾಡಬಹುದು. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮ್ಮೇಳನವು ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ಗೆ ಪರ್ಯಾಯ, ವಿರೋಧ ಎಂದು ನಾವು ಭಾವಿಸುವುದಿಲ್ಲ. ನಾವು ಯಾರೊಂದಿಗೂ ಸ್ಪರ್ಧೆ ಮಾಡುವುದಿಲ್ಲ. ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಮೋಹನ ಆಳ್ವ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಮ್ಮ ಕಾಲೇಜಿನ ಸುಳ್ಳು ಅಂಕಿ ಅಂಶಗಳನ್ನು ಯಾರೋ ಬಂದು ಕೊಡುತ್ತಿದ್ದಾರೆ. ನಮ್ಮ ಕಾಲೇಜಿನಲ್ಲಿ 18 ಸಾವಿರ ಮಕ್ಕಳು ಇದ್ದಾರೆ. ಕಾಲೇಜಿಗೆ ಬಂದು ಅಂಕಿ ಅಂಶ ನೋಡಿ. ನನಗೆ ₨80 ಕೋಟಿ ಸಾಲ ಇದೆ. ಆದರೂ ಇವೆಲ್ಲವನ್ನೂ ಮಾಡುತ್ತಿದ್ದೇನೆ’ ಎಂದು ಮೋಹನ ಆಳ್ವ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.