ಕೋಲ್ಕತ್ತ (ಪಿಟಿಐ): ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ 16ರ ಹರೆಯದ ಬಾಲಕಿಯ ಮೃತದೇಹ ತೃಣಮೂಲ ಕಾಂಗ್ರೆಸ್ ಮತ್ತು ಎಡರಂಗದ ನಡುವಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಮಗಳ ಮೃತ ದೇಹವನ್ನು ತೆಗೆದುಕೊಂಡು ರಾಜ್ಯ ಬಿಟ್ಟು ಹೋಗಬೇಕು ಎಂದು ಪೊಲೀಸರು ಬೆದರಿಕೆ ಒಡ್ಡಿದ್ದಾಗಿ ಬಾಲಕಿಯ ಹೆತ್ತವರು ಆರೋಪಿಸಿದ್ದಾರೆ.
ಎಡಪಕ್ಷಗಳ ಕೆಲವು ನಾಯಕರೊಂದಿಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಎಂ.ಕೆ. ನಾರಾಯಣ್ ಅವರನ್ನು ಬುಧವಾರ ಭೇಟಿಯಾದ ಬಾಲಕಿಯ ಹೆತ್ತವರು ರಕ್ಷಣೆ ಒದಗಿಸುವಂತೆ ಕೋರಿದ್ದಾರೆ.
‘ರಾಜ್ಯವನ್ನು ಬಿಟ್ಟು ಮಗಳ ದೇಹದೊಂದಿಗೆ ಬಿಹಾರಕ್ಕೆ ಹೋಗುವಂತೆ ಮಂಗಳವಾರ ರಾತ್ರಿ ಕೆಲವು ಪೊಲೀಸ್ ಅಧಿಕಾರಿಗಳು ಒತ್ತಡ ಹೇರಿದ್ದಾರೆ. ರಾಜ್ಯ ಬಿಟ್ಟು ಹೋಗದಿದ್ದರೆ ಟ್ಯಾಕ್ಸಿ ಓಡಿಸಲು ಬಿಡುವುದಿಲ್ಲ ಎಂದು ಕೆಲವು ಗೂಂಡಾಗಳು ಮತ್ತು ಪೊಲೀಸ್ ಅಧಿಕಾರಿಗಳು ಬೆದರಿಕೆ ಒಡ್ಡಿದ್ದಾರೆ’ ಎಂದು ಬಿಹಾರ ಮೂಲದ ಬಾಲಕಿಯ ತಂದೆ ಹೇಳಿದ್ದಾರೆ. ಇವರು ಕೋಲ್ಕತ್ತದಲ್ಲಿ ಟ್ಯಾಕ್ಸಿ ಚಾಲಕರಾಗಿದ್ದಾರೆ. ಅತ್ಯಾಚಾರ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅ. 25ರಂದು ಬಾಲಕಿ ಎರಡು ಬಾರಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದಳು. ಡಿ. 23ರಂದು ಆಕೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಳು.
ಬಾಲಕಿಯ ಹೇಳಿಕೆ: ಈ ಮಧ್ಯೆ ಪ್ರಕರಣಕ್ಕೆ ಇನ್ನೊಂದು ತಿರುವು ಸಿಕ್ಕಿದ್ದು, ಅತ್ಯಾಚಾರವೆಸಗಿದವರೇ ತನಗೆ ಬೆಂಕಿಯನ್ನೂ ಹಚ್ಚಿದರು ಎಂದು ಬಾಲಕಿ ಸಾಯುವ ಮುನ್ನ ಹೇಳಿಕೆ ನೀಡಿದ್ದಾಳೆ. ಬಿಧನ್ ನಗರ್ ಪೊಲೀಸ್ ಕಮಿಷನರ್ ನಿಂಬಾಳ್ಕರ್ ಸಂತೋಶ್ ಉತ್ತಮ್ರಾವ್ ಬುಧವಾರ ಈ ವಿಷಯ ತಿಳಿಸಿದ್ದಾರೆ. ಮೃತ ಬಾಲಕಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಕೋಲ್ಕತ್ತದಾದ್ಯಂತ ಮಂಗಳವಾರದಿಂದ ಪ್ರತಿಭಟನೆಗಳು ನಡೆಯುತ್ತಿವೆ.
ಬಾಲಕಿಯ ಮೃತದೇಹದ ಸಂಸ್ಕಾರಕ್ಕೆ ಸಂಬಂಧಿಸಿ ಎಡಪಕ್ಷಗಳು ಮತ್ತು ಕೋಲ್ಕತ್ತ ಪೊಲೀಸರ ನಡುವೆ ಮಂಗಳವಾರ ರಾತ್ರಿ ಸಂಘರ್ಷ ಏರ್ಪಟ್ಟಿತು.
ಬಾಲಕಿಯ ತಂದೆ ಎಡಪಕ್ಷಗಳ ನೇತೃತ್ವದ ಕಾರ್ಮಿಕ ಸಂಘಟನೆ ಸಿಐಟಿಯು ಸದಸ್ಯರಾಗಿದ್ದಾರೆ. ಮೃತದೇಹವನ್ನು ನಗರದ ಶವಾಗಾರದಲ್ಲಿ ಇರಿಸಿ, ನಂತರ ಸಂತಾಪ ಸೂಚಕ ಸಭೆ ಮತ್ತು ಮೆರವಣಿಗೆ ನಡೆಸಲು ಕುಟುಂಬ ಮತ್ತು ಕಾರ್ಮಿಕ ಸಂಘಟನೆ ನಿರ್ಧರಿಸಿತ್ತು ಎಂದು ಬಾಲಕಿಯ ತಂದೆ ಹೇಳಿದ್ದಾರೆ.
ಆದರೆ ಮಂಗಳವಾರ ರಾತ್ರಿ ಮೃತ ದೇಹವನ್ನು ಶವಾಗಾರಕ್ಕೆ ಒಯ್ಯುವ ಸಂದರ್ಭದಲ್ಲಿ ಪೊಲೀಸರು ಬಲವಂತವಾಗಿ ದೇಹವನ್ನು ಒಯ್ದು ಸಂಸ್ಕಾರಕ್ಕೆ ಯತ್ನಿಸಿದರು ಎಂದು ಅವರು ಆರೋಪಿಸಿದ್ದಾರೆ.
‘ಬಾಲಕಿಯ ಮರಣ ಪ್ರಮಾಣಪತ್ರ ತಂದೆಯ ಬಳಿ ಇದ್ದುದರಿಂದ ಪೊಲೀಸರಿಗೆ ಅಂತ್ಯ ಸಂಸ್ಕಾರ ನಡೆಸುವುದು ಸಾಧ್ಯವಾಗಲಿಲ್ಲ. ಸುದ್ದಿ ಹರಡುತ್ತಿದ್ದಂತೆ ಸಿಪಿಐ(ಎಂ) ಮುಖಂಡರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಆರಂಭಿಸಿದರು. ಇದರಿಂದಾಗಿ ಪೊಲೀಸರು ಹಿಂದೆ ಸರಿದರು’ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ರಬಿನ್ ದೇವ್ ಹೇಳಿದ್ದಾರೆ.
ಪ್ರಕರಣ ಈಗ ಪೂರ್ತಿಯಾಗಿ ರಾಜಕೀಯ ಬಣ್ಣ ಪಡೆದುಕೊಂಡಿದೆ. ಎಡರಂಗ ಈ ವಿಷಯವನ್ನು ಬಳಸಿಕೊಂಡು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದೆ ಎಂದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.