ಕೋಲ್ಕತ್ತ: ಎಸ್- ಬ್ಯಾಂಡ್ ಹಗರಣ ಪ್ರಧಾನಿ ಅವರ ನೇರ ಸುಪರ್ದಿಯಲ್ಲಿರುವ ಇಲಾಖೆಯಲ್ಲಿ ನಡೆದಿರುವುದರಿಂದ ಮತ್ತು ದೇಶದ ಭದ್ರತೆಯ ವಿಚಾರವೂ ಇದರಲ್ಲಿ ಅಡಗಿರುವುದರಿಂದ ಪ್ರಧಾನಿ ಅವರೇ ಸ್ವತಃ ಇದರ ಬಗ್ಗೆ ಹೇಳಿಕೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
‘ಪ್ರಧಾನಿ ಅವರು ಬುಧವಾರ ಟಿವಿ ಚಾನೆಲ್ಗಳ ಸಂಪಾದಕರನ್ನು ಭೇಟಿಯಾಗಲಿದ್ದಾರೆ. ಎಸ್-ಬ್ಯಾಂಡ್ ಹಗರಣದ ಬಗ್ಗೆ ಇದುವರೆಗೆ ಮಾತನಾಡಿಲ್ಲದ ಅವರು ಈಗಲಾದರೂ ಸ್ಪಷ್ಟ ಹೇಳಿಕೆ ನೀಡಬೇಕು’ ಎಂದು ಪಕ್ಷದ ವಕ್ತಾರೆ ನಿರ್ಮಲಾ ಸೀತಾರಾಮನ್ ಮಂಗಳವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.
ಖಾಸಗಿ ಕಂಪೆನಿಯೊಂದಕ್ಕೆ ನೀಡಲಾದ ತರಂಗಾಂತರವನ್ನು ಕರಾವಳಿ ರಕ್ಷಣಾ ಪಡೆ ಮತ್ತು ಇತರ ರಾಷ್ಟ್ರೀಯ ಭದ್ರತಾ ಸಂಸ್ಥೆಗಳೂ ಬಳಸುತ್ತಿವೆ. ಹೀಗಾಗಿ ಇದೊಂದು ರಾಷ್ಟ್ರೀಯ ಭದ್ರತೆಯ ವಿಚಾರವೂ ಹೌದು. ಪ್ರಧಾನಿ ಅವರು ಈ ವಿಚಾರ ಮಾತ್ರವಲ್ಲದೆ, ಭ್ರಷ್ಟಾಚಾರ ಮತ್ತು ಕಪ್ಪುಹಣದ ಬಗ್ಗೆಯೂ ಮಾತನಾಡಬೇಕು, ವಿಶ್ವಸಂಸ್ಥೆಯ ಭ್ರಷ್ಟಾಚಾರ ತಡೆ ಕಾರ್ಯಸೂಚಿಗೆ ಭಾರತ ಏಕೆ ಸಹಿ ಹಾಕಿಲ್ಲ ಎಂಬುದಕ್ಕೂ ಉತ್ತರ ನೀಡಬೇಕು ಎಂದರು.