ನವದೆಹಲಿ(ಪಿಟಿಐ): ಭಾರತೀಯ ಸ್ಟೇಟ್ ಬ್ಯಾಂಕ್(ಎಸ್ಬಿಐ) ಗೃಹ ಮತ್ತು ವಾಹನ ಸಾಲದ ಗ್ರಾಹಕರಿಗೆ ನೀಡುತ್ತಿದ್ದ `ಅಪಘಾತ ಪರಿಹಾರದ ಉಚಿತ ವಿಮೆ' ಸೌಲಭ್ಯವನ್ನು ಮುಂದಿನ ಜುಲೈನಿಂದ ಸ್ಥಗಿತಗೊಳಿಸಲಿದೆ.
ಗೃಹ ಸಾಲ, ವಾಹನ ಸಾಲ ಪಡೆದವರು ಅಪಘಾತದಲ್ಲಿ ಮೃತಪಟ್ಟರೆ ಪರಿಹಾರ ಧನದಿಂದಲೇ ಸಾಲ ಜಮಾ ಮಾಡಿಕೊಂಡು, ಆ ಮೂಲಕ ಮೃತರ ಅವಲಂಬಿತರಿಗೆ ಋಣಬಾಧೆ ಉಳಿಯದಂತೆ ಮಾಡಲು ಗುಂಪು ವಿಮಾ ಸೌಲಭ್ಯವನ್ನು `ಎಸ್ಬಿಐ' ಹಲವು ವರ್ಷಗಳಿಂದ ಉಚಿತವಾಗಿ ನೀಡುತ್ತಿದ್ದಿತು. ಮುಂಬರುವ ಜುಲೈ 1ರಿಂದ ಜಾರಿಗೆ ಬರುವಂತೆ ಈ ಸೌಲಭ್ಯ ರದ್ದಾಗಲಿದೆ ಎಂದು ಬ್ಯಾಂಕ್ ಸುತ್ತೋಲೆ ಹೊರಡಿಸಿದೆ. ಆದರೆ, ಈ ದಿಢೀರ್ ಕ್ರಮಕ್ಕೆ ಬ್ಯಾಂಕ್ ಕಾರಣ ವಿವರಿಸಿಲ್ಲ.
ಪ್ರಸ್ತುತ, `ಎಸ್ಬಿಐ'ನಲ್ಲಿ ಉಳಿತಾಯ (ಎಸ್ಬಿ) ಖಾತೆ ಹೊಂದಿದ 70 ಲಕ್ಷಕ್ಕೂ ಅಧಿಕ ಮಂದಿಗೆ ರೂ4 ಲಕ್ಷದವರೆಗೂ ಅಪಘಾತ ಪರಿಹಾರ ಧನ ಲಭಿಸುವ ವಿಮಾ ಸೌಲಭ್ಯವನ್ನು `ಎಸ್ಬಿಐ ಜನರಲ್ ಇನ್ಷ್ಯುರೆನ್ಸ್ ಕಂಪೆನಿ' ವಾರ್ಷಿಕ ರೂ100ರಷ್ಟು ಕನಿಷ್ಠ ಮೊತ್ತಕ್ಕೆ ಒದಗಿಸುತ್ತಿದೆ.