ದಾವಣಗೆರೆ: ಪರಿಶಿಷ್ಟರೆಂದು ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸರ್ಕಾರದ ಸೌಲಭ್ಯವನ್ನು ಅನರ್ಹರು ಪಡೆದುಕೊಳ್ಳುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ವಿಧಾನಮಂಡಲ ಅನುಸೂಚಿತ ಜಾತಿ ಹಾಗೂ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಮಂಗಳವಾರ ಇಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷ-ಗಳಾದರೂ ಸಾಮಾಜಿಕ ಪಿಡುಗುಗಳು ಹಾಗೆಯೇ ಉಳಿದಿವೆ. ಅಘೋಷಿತ, ಇಚ್ಛಾಶಕ್ತಿ ಇಲ್ಲದ ಆಡಳಿತ ವ್ಯವಸ್ಥೆಯಲ್ಲಿ ಈ ಲೋಪ ಕಾಣಿಸುತ್ತಿದೆ. ಸಭೆ-ಯಲ್ಲಿಯೂ ಈ ಅಂಶವನ್ನು ಸಮಿತಿ ಗುರುತಿಸಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳು ಪರಿಶಿಷ್ಟರನ್ನು ಹೇಗೆ ತಲುಪುತ್ತಿವೆ. ತಲುಪದಿಲ್ಲದಿರುವುದಕ್ಕೆ ಕಾರಣಗಳೇನು? ಮಾಡಿಕೊಳ್ಳಬೇಕಾದ ಬದಲಾವಣೆಗಳೇನು ಎಂಬಿತ್ಯಾದಿ ಅಂಶಗಳನ್ನು ಸೇರಿಸಿ ವರದಿ ಸಿದ್ಧಪಡಿಸಿ, ಮಾರ್ಚ್ ವೇಳೆಗೆ ಸಲ್ಲಿಸಲಾಗುವುದು ಎಂದರು.
ಸೌಲಭ್ಯ ಪಡೆದು ಶಾಸಕನಾದ! ಸದಸ್ಯ ಗೋವಿಂದ ಕಾರಜೋಳ ಮಾತನಾಡಿ, ದಾವಣಗೆರೆ, ಕೋಲಾರ ಹಾಗೂ ಬೀದರ್ ಜಿಲ್ಲೆಗಳಲ್ಲಿ ಸಾವಿರಕ್ಕೂ ಹೆಚ್ಚು ಸುಳ್ಳು ಜಾತಿ ಪ್ರಮಾಣಪತ್ರ ಪ್ರಕರಣ ಕಂಡುಬಂದಿವೆ. ಅನರ್ಹರು ಸರ್ಕಾರಿ ಸೇವೆ, ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಸೀಟು ಪಡೆದುಕೊಂಡಿದ್ದಾರೆ. ಕೋಲಾರದಲ್ಲಿ ವ್ಯಕ್ತಿಯೊಬ್ಬರು ಶಾಸಕರಾಗಿಯೂ ಆಯ್ಕೆ ಆಗಿದ್ದಾರೆ. ದಾವಣಗೆರೆಯಲ್ಲಿ ಒಬ್ಬರು ಜಿ.ಪಂ. ಸದಸ್ಯರಾಗಿದ್ದರು. ಇದಕ್ಕೆ ಕಡಿವಾಣ ಹಾಕುವಂತೆ ಕ್ರಮ ಕೈಗೊಳ್ಳಬೇಕು ಎಂದು ವರದಿ ಸಲ್ಲಿಸಲಾಗುವುದು. ಆದರೆ, ಸೌಲಭ್ಯ ಪಡೆದ ಅನರ್ಹರು ಎನ್ನಲಾದವರ ಹೆಸರು ಬಹಿರಂಗಪಡಿಸಲು ಅವರು ಬಯಸಲಿಲ್ಲ.