ಶಿವಮೊಗ್ಗ: ಚೆಸ್ ಕೇವಲ ಸೋಲು ಗೆಲುವಿನ ಆಟವಾಗದೇ ಮಕ್ಕಳ ಬುದ್ಧಿಶಕ್ತಿ ಹಾಗೂ ಏಕಾಗ್ರತೆ ವೃದ್ಧಿಸುವ ಆಟವಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ವೆಂಕಟೇಶನ್ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಶಿವಮೊಗ್ಗ ಚೆಸ್ ಅಕಾಡೆಮಿ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಮುಕ್ತ ರ್ಯಾಪಿಡ್ ಚೆಸ್ ಪಂದ್ಯಾವಳಿ ಎಸ್ಸಿಎ-ಕಪ್-2012 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚೆಸ್ ಆಟ ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗುವುದರ ಜತೆಗೆ, ಮಾನಸಿಕವಾಗಿ ಸದೃಢವಾಗಲು ಸಹಾಯಕವಾಗುತ್ತದೆ. ವಿದ್ಯಾರ್ಥಿಗಳ ಕ್ರಿಯಾಶೀಲತೆಗೆ ವೇದಿಕೆಯಾಗುವ ನಿಟ್ಟಿನಲ್ಲಿ ಶಿವಮೊಗ್ಗ ಚೆಸ್ ಅಕಾಡೆಮಿ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ಕ್ರೀಡೆ ಎಂದರೆ ಕೇವಲ ಕೆಲವೇ ಆಟಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲವೊಂದಿತ್ತು. ಆದರೆ, ಇಂದಿನ ದಿನಗಳಲ್ಲಿ ಎಲ್ಲಾ ಕ್ರೀಡೆಗಳಿಗೂ ಸಮಾನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಎನ್. ಮಂಜುನಾಥ್, ಚೆಸ್ ದೈಹಿಕ ಕಸರತ್ತಿನ ಆಟವಾಗದೇ ಮನಸ್ಸಿನ ಮೇಲೆ ಹಿಡಿತ ಸಾಧಿಸುವ ಬುದ್ಧಿಮತ್ತೆಯ ಆಟವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಚೆಸ್ ಕ್ರೀಡಾಪಟು ಸಾಗರದ ಬಿ.ಎಸ್. ಶಿವಾನಂದ ಅವರನ್ನು ಶಿವಮೊಗ್ಗ ಚೆಸ್ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.
ಸಂಯುಕ್ತ ಕರ್ನಾಟಕ ಚೆಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್. ಗುರುರಾಜ್, ತಹಶೀಲ್ದಾರ್ ಮಂಜುನಾಥ್, ಅಕಾಡೆಮಿ ಖಜಾಂಚಿ ಗೀತಾ ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ರಮೇಶ್ ಜೋಯಿಸ್ ಪ್ರಾರ್ಥಿಸಿದರು. ಶಿವಮೊಗ್ಗ ಚೆಸ್ ಅಕಾಡೆಮಿ ಅಧ್ಯಕ್ಷ ಸೋಮಶೇಖರಪ್ಪ ಸ್ವಾಗತಿಸಿದರು.